- ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಯ ದಾದಿ ಸಾಯುವ ಮುನ್ನ ಪೊಲೀಸರಿಂದ ರಹಸ್ಯ ಹೇಳಿಕೆ ದಾಖಲು
ಕಾಸರಗೋಡು(ಮೇ 29):
ಪ್ರೀತಿಸಿದಾತನೊಂದಿಗೆ ವಿವಾಹವಾಗಿ ಒಂದು ತಿಂಗಳು ಪೂರೖಸುವ ಮುನ್ನವೇ ಇಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಯ ದಾದಿ ಕೊನೆಗೂ ಸಾವಿಗೆ ಶರಣೆಂದಳು.
ಬೇಡಗಂ ಕುತ್ತಿಕೋಲ್ ಬೇತೂರ್ ಪಾರ ನಿವಾಸಿ ಅಶ್ವತಿ (25) ಮೃತಪಟ್ಟ ನವವಧುವಾಗಿದ್ದಾಳೆ.
ಕಾಞಂಗಾಡು ಬಳಿಯ ಅಂಬಲತ್ತರ ಪರಕ್ಲಾಯಿ ನಿವಾಸಿ ರೂಪೇಶ್ ಎಂಬಾತನನ್ನು ಪ್ರೀತಿಸುತ್ತಿದ್ದ ಈಕೆ ಒಂದು ತಿಂಗಳ (ಎ. 25ರಂದು) ಹಿಂದೆಯಷ್ಟೇ ಆತನನ್ನು ವಿವಾಹವಾಗಿದ್ದಳು.
ಕಾಸರಗೋಡು ನಗರದ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ದುಡಿಯುತ್ತಿದ್ದ ಈಕೆ ವಿವಾಹಾನಂತರ ಕಾಸರಗೋಡಿನಲ್ಲಿ ಬಾಡಿಗೆ ಮನೆ ಮಾಡಿ ನೆಲೆಸಿದ್ದರು. ಈ ಮಧ್ಯೆ ಮೇ 19 ರಂದು ಕಾಸರಗೋಡಿನ ವಸತಿಯಲ್ಲಿ ಈಕೆ ಇಲಿ ವಿಷ ಸೇವಿಸಿದ್ದಳು. ಬಳಿಕ ಚಿಂತಾಜನಕ ಸ್ಥಿತಿಯಲ್ಲಿ ಈಕೆಯನ್ನು ಪರಿಯಿರಂ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸೇರಿಸಲಾಗಿತ್ತು. ಗುರುವಾರ ರಾತ್ರಿ ಈಕೆ ಮೃತಳಾದಳು. ಈಕೆ ವಿಷ ಸೇವಿಸಲು ಕಾರಣ ಏನೆಂಬುದು ಬೆಳಕಿಗೆ ಬಂದಿಲ್ಲ.
ಘಟನೆಗೆ ಸಂಬಂಧಿಸಿ ಕಾಸರಗೋಡು ನಗರ ಠಾಣೆಯಲ್ಲಿ ಅಸಹಜ ಮರಣವೆಂದು ಪ್ರಕರಣ ದಾಖಲಾಗಿದೆ. ಮೃತ ಯುವತಿ ಪರಿಯಾರಂ ಮೆಡಿಕಲ್ ಕಾಲೇಜಿನಲ್ಲಿ ಚಿಕಿತ್ಸೆಯಲ್ಲಿರುವಾಗ ಘಟನೆಗೆ ಸಂಬಂಧಿ ಪೊಲೀಸರು ರಹಸ್ಯ ಹೇಳಿಕೆಗಳನ್ನು ದಾಖಲಿಸಿದ್ದರು. ಪ್ರಕರಣದಲ್ಲಿದು ನಿರ್ಣಾಯಕ ಅಂಶವಾಗಲಿದೆ.









































