ಶುದ್ಧ ಶಾಸ್ತ್ರೀಯ ಸಂಗೀತಾಸಕ್ತರಿಗೆ ಸುಮಧುರ ಸಂಗೀತ ಶಿಕ್ಷಣ ನೀಡುತ್ತಾ ಬದಿಯಡ್ಕ ಪರಿಸರವನ್ನು ಸಂಗೀತಮಯಗೊಳಿಸಿದ ಸುನಾದ ಸಂಗೀತ ಕಲಾ ಶಾಲೆಯ ಹತ್ತನೇ ವಾರ್ಷಿಕೋತ್ಸವ ಸಂಭ್ರಮ ಬದಿಯಡ್ಕದ ಶ್ರೀ ಭಾರತೀ ವಿದ್ಯಾಪೀಠದಲ್ಲಿ ನಿನ್ನೆ(ನ. 9)ನಡೆಯಿತು. ಸಭೆ ಭಾಷಣಗಳ ಔಪಚಾರಿಕತೆ ಇಲ್ಲದೇ ಇಡೀ ದಿನ ಸಂಗೀತವೇ ಸಂಭ್ರಮಿಸಿದ ಸಮಾರಂಭದಲ್ಲಿ
ಹೊಸ ತಲೆಮಾರಿನ ನ್ಯೂ ಜೆನ್ಸೀ ಅತ್ಯಧಿಕ ಪಾಲ್ಗೊಂಡು ಸಭೆ ತುಂಬಿ ತುಳುಕಿದ್ದು ವಿಶೇಷತೆಯಾಗಿತ್ತು…!

ಬದಿಯಡ್ಕ : ಇಲ್ಲಿನ ಶ್ರೀ ಭಾರತಿ ವಿದ್ಯಾಪೀಠದಲ್ಲಿ ನ. 9ರಂದು ಭಾನುವಾರ ಹಗಲು ದಿನವಿಡೀ ಸಂಗೀತವೇ ಸಂಭ್ರಮಿಸಿತು. ಕಳೆದ 23ವರ್ಷಗಳಿಂದ ನಾಡಿಗೆ ಸಂಗೀತ ಶಿಕ್ಷಣ ನೀಡುವ, ಕಾಂಚನ ಶಿಷ್ಯೆ, ವಿದುಷಿ ವಾಣಿ ಶ್ರೀ ಕಬೆಕ್ಕೋಡು ಅವರ ಸಾರಥ್ಯದ ಸುನಾದ ಸಂಗೀತ ಕಲಾಶಾಲೆಯ ವಾರ್ಷಿಕೋತ್ಸವದಂಗವಾಗಿ ಈ ಕಲಾರಾಧನೆ ನಡೆಯಿತು.
ಬೆಳಿಗ್ಗೆ ಹಿರಿಯ ಕಲಾವಿದೆ, ವಿದುಷಿ ಜಯಕುಮಾರಿ ಓಡಂಗಲ್ಲು ದೀಪ ಬೆಳಗಿಸಿ ಉದ್ಘಾಟಿಸಿದ ಸಮಾರಂಭಕ್ಕೆ ಶ್ಯಾಂ ಭಟ್ ಓಡಂಗಲ್ಲು ನಲ್ನುಡಿಗಳ ಮುನ್ನುಡಿಯನ್ನಿತ್ತರು.
ಬಳಿಕ ದೂರದ ಊರುಗಳಲ್ಲಿದ್ದು ಆನ್ಲೖನ್ ನಲ್ಲಿ ಕಲಿಯುವ ಮತ್ತು ತರಗತಿಗಳಿಗೆ ಬಂದು ಕಲಿಯುವ ಸಂಗೀತ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನದ ಹಾಡುಗಾರಿಕೆಗಳು ಅನುಕ್ರಮವಾಗಿ ಜರುಗಿತು. 65ವಿದ್ಯಾರ್ಥಿಗಳು ದರ್ಜೆಗನುಸಾರ ತಮ್ಮ ಸಂಗೀತ ಸಾಧನೆಯನ್ನು ಪ್ರಸ್ತುತ ಪಡಿಸಿದರು.

ಸಮಾರಂಭಕ್ಕೆ ಕಲಶವಿಟ್ಟಂತೆ ಅಪರಾಹ್ನ 5.30ರಿಂದ ವಿದ್ವಾನ್ ವಿವೇಕ ಸದಾಶಿವಂ ಅವರ ಮನೋಜ್ಞ ಹಾಡುಗಾರಿಕೆ ನಡೆಯಿತು. ಸ್ವರ ಮಾಧುರ್ಯದ ಭಾವರಸ ಶುದ್ಧಿಯ ರಾಗೋತ್ಕರ್ಷದ ಗಾಯನ ಸಂಗೀತ ಪ್ರಿಯ ಶೋತೃಗಳನ್ನು ಮುದಗೊಳಿಸಿತು. ಇವರ ಗಾಯನಕ್ಕೆ ಹಿಮ್ಮೇಳದಲ್ಲಿ ವಯಲಿನ್ ನಲ್ಲಿ ವಿದ್ವಾನ್ ಟ್ರಿವೇಂಡ್ರಂ ಎನ್. ಸಂಪತ್, ಮೃದಂಗದಲ್ಲಿ ವಿದ್ವಾನ್ ಕಾಂಚನ ಎ. ಈಶ್ವರ ಭಟ್, ಘಟಂ ನಲ್ಲಿ ವಿದ್ವಾನ್ ಶರತ್ ಕೌಶಿಕ್ ಮೖಸೂರು ಜತೆಯಾದರು. ವಿವಿಧ ಊರುಗಳಿಂದಾಗಮಿಸಿದ ವಿದ್ಯಾರ್ಥಿಗಳು ಮತ್ತವರ ಕುಟುಂಬದ ಸಂಗೀತ ಪ್ರೇಮಿಗಳಿಂದ ಸಭಾಂಗಣ ತುಂಬಿ ತುಳುಕಿದ್ದು ವೖಶಿಷ್ಟ್ಯವಾಯಿತು.


ಕಾರ್ಯಕ್ರಮಗಳಿಗೆ ಸಂಗೀತ ಶಿಕ್ಷಕಿ ವಾಣಿ ಪ್ರಸಾದ್ ಕಬೆಕ್ಕೋಡು, ಕಲಾಶಾಲೆಯ ಅಧ್ಯಕ್ಷ ಶಾಮ ಪ್ರಸಾದ ಕಬೆಕ್ಕೋಡು, ಗೋಪಾಲಕೃಷ್ಣ ಭಟ್ ಕಬೆಕ್ಕೋಡು ನೇತೃತ್ವ ನೀಡಿದರು. ಸಂಸ್ಥೆಯಲ್ಲಿ ಶಿಕ್ಷಣ ಪಡೆದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಗೌರವದ ಜತೆ ಗುರು ಕಾಂಚನ ಎ. ಈಶ್ವರ ಭಟ್ ದಂಪತಿಯರಿಗೆ ಗುರುವಂದನೆ ನಡೆಯಿತು.
ಕಾಸರಗೋಡು ಜಿಲ್ಲೆಯ ಬದಿಯಡ್ಕ ಸಂಗೀತಾದಿ ಲಲಿತಕಲೆಗಳ ಆಸ್ವಾದಕ ವೃಂದವಿನ್ನೂ ಬತ್ತದ ಸಾರಸ್ವತ ನೆಲವೆಂಬುದು ಮತ್ತೆ ಸಾಬೀತಾಗಿದೆ.
ನಿರಂತರ ಸೃಜನಶೀಲ ನಾಡು, ನುಡಿ ಕಾಳಜಿಯ ಸಾಂಸ್ಕೃತಿಕ ವಾತಾವರಣ ಕಟ್ಟಲು ಕೊಡುಗೆ ನೀಡುತ್ತಿರುವ ಭಾರತೀ ವಿದ್ಯಾಪೀಠದ ಅಂಗಣದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರೇಮಿಗಳು ಸಮ್ಮೇಳನದಂತೆ ನೆರೆದದ್ದೇ ಇದಕ್ಕೆ ನಿದರ್ಶನ.










































