- ಜಿಲ್ಲೆಯ ಸರಕಾರಿ ಆಸ್ಪತ್ರೆಗಳಲ್ಲಿ ಖಾಲಿ ಇರುವ 143 ವೖದ್ಯರ ನೇಮಕಕ್ಕೆ ತುರ್ತು ಆಗ್ರಹ
ಕಾಸರಗೋಡು(ಜೂನ್ 24):
ಹಿಂದುಳಿದ ಕಾಸರಗೋಡು ಜಿಲ್ಲೆಯ ಸಮಗ್ರಾಭಿವೃದ್ಧಿಗೆ ಪ್ರಭಾಕರನ್ ಆಯೋಗದ ನಿರ್ದೇಶನದಂತೆ ಕೇರಳ ಸರಕಾರ ಜ್ಯಾರಿಗೊಳಿಸಿದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜಿಗೆ ಜಿಲ್ಲಾಭಿವೃದ್ಧಿ ದೃಷ್ಟಿಯಲ್ಲಿ ಹೆಚ್ಚುವರಿ 100 ಕೋಟಿ ರೂ ಮಂಜೂರು ಮಾಡಬೇಕೆಂದು ಕಾಸರಗೋಡು ಜಿ. ಪಂ.
ಅಧ್ಯಕ್ಷರ ನೇತೃತ್ವದ ನಿಯೋಗ
ಮುಖ್ಯಮಂತ್ರಿ ಹಾಗೂ ವಿವಿಧ ಇಲಾಖಾ ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಿ ಒತ್ತಾಯಿಸಿದೆ.

ಕಾಸರಗೋಡು ಜಿಲ್ಲೆಯ ಸಮಸ್ಯೆ ಮತ್ತು ಪ್ರಮುಖ ಬೇಡಿಕೆಗಳನ್ನು ಆಲಿಸಿದ ಮುಖ್ಯಮಂತ್ರಿ ಗೌರವ ಪೂರ್ವಕ ಪರಿಗಣಿಸುವ ಭರವಸೆ ಇತ್ತಿದ್ದಾರೆಂದು ಜಿ. ಪಂ. ಅಧಿಕೃತರು ತಿಳಿಸಿದ್ದಾರೆ.
ಮಳೆಗಾಲ ರೋಗಗಳ ಸಹಿತ ಜಿಲ್ಲೆಯಲ್ಲಿ ರೋಗಿಗಳ ಸಂಖ್ಯೆ ಗಣನೀಯ ಹೆಚ್ಚುತ್ತಿದೆ. ಜಿಲ್ಲಾ ಆಸ್ಪತ್ರೆ ಸಹಿತ ಕಾಸರಗೋಡಿನ ಸರಕಾರಿ ಚಿಕಿತ್ಸಾ ಕೇಂದ್ರಗಳಲ್ಲಿ 143 ವೖದ್ಯರ ಕೊರತೆ ಇದೆ. ಇದನ್ನು ತುರ್ತು ಭರ್ತಿ ಮಾಡುವುದರೊಂದಿಗೆ ಜಿಲ್ಲಾಸ್ಪತ್ರೆಗೆ ಫಾರೆನ್ಸಿಕ್ ಸರ್ಜನ್ ರನ್ನು ನೇಮಿಸಬೇಕೆಂದು ಸಚಿವ ಸಂಪುಟವನ್ನು ಒತ್ತಾಯಿಸಲಾಗಿದೆ. ಆರೋಗ್ಯ ವಲಯದ ಸಂಧಿಗ್ಧತೆ ಪರಿಹಾರಕ್ಕೆ ಜಿಲ್ಲಾ ಮಟ್ಟದಲ್ಲಿ ಸಮಾಲೋಚನಾ ಸಭೆ ನಡೆಸಿ ಪರಿಹಾರ ಒದಗಿಸಲಾಗುವುದೆಂದು ಆರೋಗ್ಯ ಸಚಿವ ಕೆ. ಮುರಳೀಧರನ್ ನಿಯೋಗಕ್ಕೆ ಭರವಸೆ ಇತ್ತಿದ್ದಾರೆ.
ಜಿ. ಪಂ. ಆಶ್ರಯದ ಸೀಡ್ ಫಾಂ ಅಭಿವೃದ್ದಿ, ಕಾಸರಗೋಡಿಗೆ ನೂತನ ಮಣ್ಣು ಪರಿಶೋಧನಾ ಕೇಂದ್ರ, ಟಾಟಾ ಆಸ್ಪತ್ರೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಭಡ್ತಿಗೊಳಿಸಬೇಕು, ಜಿಲ್ಲೆಯ ಕೆಲವು ಪ್ರಮುಖ ರಸ್ತೆಗಳನ್ನು pwd ರಸ್ತೆಯನ್ನಾಗಿಸಿ ಅಭಿವೃದ್ಧಿಪಡಿಸಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಸರಕಾರದ ಮುಂದಿಡಲಾಗಿದೆ.
ಜಿಲ್ಲೆಯ ಶಾಸಕರಾದ ಎಕೆಎಂ ಅಶ್ರಫ್, ಗೋವಿಂದನ್ ಪಳ್ಳಿಕಾಪಿಲ್, ಜಿ. ಪಂ. ಉಪಾಧ್ಯಕ್ಷೆ ಕು. ಸೋಯ, ಸ್ಥಾಯೀ ಸಮಿತಿ ಸದಸ್ಯ ಎಂ. ಮನು, ಜಿ. ಪಂ. ಸದಸ್ಯರಾದ ಅಜೀಝ್ ಕಳತ್ತೂರ್, ಸೋಮಶೇಖರ ಜೆ. ಎಸ್, ಜಿ. ಪಂ. ಕಾರ್ಯದರ್ಶಿ ಎಸ್. ಬಿಜು ಮೊದಲಾದವರು ನಿಯೋಗದಲ್ಲಿದ್ದರು.






