- ಚುನಾವಣಾ ಕಣದಲ್ಲಿ ಪ್ರಬಲ ಸ್ಪರ್ಧೆ ಒಡ್ಡಿ ಎಡರಂಗದ ಅಸ್ತಿತ್ವ ರುಜುವಾತು ಪಡಿಸಿದ್ದೇ ಆದಲ್ಲಿ ಅಚ್ಚರಿಯ ಫಲಿತಾಂಶಕ್ಕೆ ಕಾದಿದೆ ಕಾಸರಗೋಡು
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ-ಯುಡಿಎಫ್ ನೇರ ಸ್ಪರ್ಧೆ ನಡೆಯುತ್ತಿದ್ದೆಡೆಗೆ ಎಡರಂಗದ ಪಕ್ಷತರ ಅಭ್ಯರ್ಥಿ ಕಾಲೂರಿ ಸಂಚಲನ ಸೃಷ್ಟಿಸಿರುವುದು ಬಿಜೆಪಿಗೆ ಅದೃಷ್ಟದ ವರದಾನ ಆಗಬಹುದೇ? ಕಾಸರಗೋಡಿನ ಚರಿತ್ರೆಯಲ್ಲೇ ಮೊದಲ ಬಾರಿಗೆ ಮಹಿಳೆಯೊಬ್ಬರು ಶಾಸಕಿಯಾಗುವರೇ..? ಈ ವರೆಗಿನ ಶೖಲಿಗಿಂತ ಭಿನ್ನವಾಗಿ ಎಡರಂಗ ಪ್ರಬಲ ಸ್ಪರ್ಧೆ ಒಡ್ಡಿ, ತನ್ನ ಅಸ್ತಿತ್ವ ರುಜುವಾತು ಪಡಿಸಿದ್ದೇ ಆದಲ್ಲಿ ಅಚ್ಚರಿಯ ಫಲಿತಾಂಶವನ್ನು ಕಾಸರಗೋಡು ಕಂಡೀತಲ್ಲವೇ?
- ರಾಜಕೀಯ ವಿಶ್ಲೇಷಣೆ
ಕಾಸರಗೋಡು: ಕೇರಳ ವಿಧಾನಸಭೆಗೆ ಜಿದ್ದಾಜಿದ್ದಿನ ಸ್ಪರ್ಧೆ ನಡೆಯುವ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆಯ ಅಂತಿಮ ಹಂತದ ವೇಳೆ ಚಿತ್ರಣವೇ ಬುಡಮೇಲಾಗಿದೆ. ಈ ವರೆಗೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದ್ದ ಎಡರಂಗದ ಸ್ಪರ್ಧೆ ಈ ಬಾರಿ ಎಡ ಸ್ವತಂತ್ರ ಷಾನವಾಸ್ ಪಾದೂರು ಮೂಲಕ ಯುಡಿಎಫ್ ನ ಮುಸ್ಲಿಂಲೀಗ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಅವರಲ್ಲಿ ನಡುಕ ಹುಟ್ಟಿಸುವಂತೆ ಪರಿಣಾಮಕಾರಿಯಾಗಿದೆ.
ಷಾನವಾಸ್ ಪಾದೂರು ಹೊಸ ಪೀಳಿಗೆಯ ನ್ಯೂ ಜೆನ್ ಮತದಾರರನ್ನು ವಿಶೇಷ ಆಕರ್ಷಿಸುತ್ತಿದ್ದು, ಪ್ರಚಾರದಲ್ಲಿ ಮುನ್ನಡೆಗೇರುತ್ತಿದ್ದಾರೆ. ಇವರು ಕಸಿಯುವ ಮತಗಳೆಲ್ಲವೂ ಯುಡಿಎಫ್ ಬೆಂಬಲಿತ ಮತಗಳೇ ಆಗುವುದರಿಂದ ಇಬ್ಬರ ನಡುವಣ ಪ್ರಬಲ ಫೖಟ್ ದ್ವಿತೀಯ ಸ್ಥಾನದಲ್ಲಿರುವ ಬಿಜೆಪಿಯ ಎನ್ ಡಿ ಎ ಅಭ್ಯರ್ಥಿ ಎಂ. ಎಲ್ ಅಶ್ವಿನಿಗೆ ಅಚ್ಚರಿಯ, ಅದೃಷ್ಟದ ಗೆಲುವು ತಂದೊಡ್ಡಿದರೂ ತರಬಹುದೆಂಬ ಗುಮಾನಿ ಮೂಡಿದೆ. ಅದು ಎನ್ ಡಿ ಎ ಪಾಳಯದಲ್ಲಿ ಉತ್ಸಾಹ ಹೆಚ್ಚಿಸಿದೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಎಡರಂಗದಿಂದ ಐಎನ್ ಎಲ್ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರು. ಆದರೆ 30 ಸಾವಿರ ಮತಗಳನ್ನು ದಾಟಲು ಈ ವರೆಗೆ ಸಾಧ್ಯವಾಗಿರಲಿಲ್ಲ. ಈ ಬಾರಿ ಕೊನೆಯ ಕ್ಷಣ ಐಎನ್ ಎಲ್ ನಿಂದ ಕಾಸರಗೋಡು ಸೀಟನ್ನು ಬದಲಿಸಿ, ಎಡರಂಗದ ಪಕ್ಷೇತರ ಷಾನವಾಸ್ ಪಾದೂರು ಅವರಿಗೆ ನೀಡಲಾಗಿತ್ತು. ಅವರು ಅಭ್ಯರ್ಥಿ ಎಂದಾಗಲೇ ಯುವಜನತೆ ವಿಶೇಷ ಒಲವು ಪ್ರಕಟಿಸಿದ್ದು, ಜಾಲತಾಣಗಳಲ್ಲಿ ಅವರು ಟ್ರೆಂಡ್ ಸೃಷ್ಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಎಡರಂಗ ಈ ಬಾರಿ 30 ಸಾವಿರಕ್ಕೂ ಅಧಿಕ ಮತ ಪಡೆಯುವುದು ನಿಶ್ಚಿತ ಎಂಬ ವಿಶ್ವಾಸ ಎಡರಂಗಕ್ಕಿದೆ.

ಇದೇ ವೇಳೆ ಯುಡಿಎಫ್ ನ ಮುಸ್ಲಿಂ ಲೀಗ್ ಅಭ್ಯರ್ಥಿ ಕಲ್ಲಟ್ರ ಮಾಹಿನ್ ಹಾಜಿ ಅವರ ಅಭ್ಯರ್ಥಿತನದ ಬಗ್ಗೆ ಲೀಗಿನಲ್ಲೇ ಅತೃಪ್ತಿಗಳಿದ್ದುವು. ಜೊತೆಗೆ ಅವರಿಗೆ ಸಮಗ್ರ ಮಂಡಲದ ಪರಿತಯದ ಕೊರತೆ, ಚುರುಕಿನ ಕೊರತೆಗಳಿವೆ ಎಂಬ ಆರೋಪಗಳೂ ಇವೆ.
ಇದೆಲ್ಲವೂ ಷಾನವಾಸ್ ಪಾದೂರು ಪಾಲಿಗೆ ವರವಾಗಿ ಪರಿಣಮಿಸಿ, ಎಡರಂಗ ಯುಡಿಎಫ್ ಮತಗಳನ್ನು ಗರಿಷ್ಟ ಪ್ರಮಾಣದಲ್ಲಿ ಕಸಿದರೆ ಕಾಸರಗೋಡಿನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಶಾಸಕಿಯಾಗಿ ಅಚ್ಚರಿಯ ಆಯ್ಕೆಯಾಗುವ ಸಾಧ್ಯತೆಗಳು ಗೋಚರಿಸಿವೆ. ಕೆಲವೊಮ್ಮೆ ಗೆಲುವು ಒಲಿಯದೇ ಹೋದರೂ ಬಿಜೆಪಿ ಯ ಸೋಲಿನ ಅಂತರ ಗರಿಷ್ಟ ಪ್ರಮಾಣದಲ್ಲಿ ಕಡಿಮೆಯಾಗಬಹುದಾಗಿದೆ. ಈ ಮೂಲಕ ಗೆಲುವು ಅಥವಾ ಗೆಲುವಿನ ಕದ ತಟ್ಟಿದರೆ ಅದು ಕಾಸರಗೋಡಿನ ಪ್ರಪ್ರಥಮ ಮಹಿಳಾ ಬಿಜೆಪಿ ಜಿಲ್ಲಾಧ್ಯಕ್ಷೆ ಸಿರಿಮುಡಿಗೆ ಕೀರ್ತಿಕಿರೀಟವಾಗಲಿದೆ.
ಕಾಸರಗೋಡು ವಿಧಾನಸಭಾ ಕ್ಷೇತ್ರದ ಮಧೂರು, ಬದಿಯಡ್ಕ, ಕುಂಬ್ಡಾಜೆ, ಬೆಳ್ಳೂರು, ಕಾರಡ್ಕ ಗ್ರಾ. ಪಂ ಗಳು ಬಿಜೆಪಿ ಆಡಳಿತದಲ್ಲಿದೆ. ಉಳಿದ ಚೆಂಗಳ, ಮೊಗ್ರಾಲ್ ಪುತ್ತೂರು ಗ್ರಾ. ಪಂ ಮತ್ತು ಕಾಸರಗೋಡು ನಗರಸಭೆ ಮುಸ್ಲಿಂ ಲೀಗ್ ಆಡಳಿತದಲ್ಲಿದೆ. ನಗರಸಭೆ ಮತ್ತು ಚೆಂಗಳ, ಮೊಗ್ರಾಲ್ ಪುತ್ತೂರಿನ ಮತಗಳ ಅಂತರವೇ ಯುಡಿಎಫ್ ಗೆ ಭರವಸೆಯ ನಿರೀಕ್ಷೆ. ಆದರೆ ಚೆಂಗಳದಲ್ಲಿ ಈ ಹಿಂದೆ ಜಿ. ಪಂ. ಚುನಾವಣೆಯಲ್ಲಿ ಮುಸ್ಲಿಂಲೀಗನ್ನು ಮಕಾಡೆ ಮಲಗಿಸಿ ಗೆದ್ದ ಷಾನವಾಸ್ ಪಾದೂರು ಲೀಗಿನ ಕೋಟೆಗಳಲ್ಲಿ ಬಿರುಕು ಮೂಡಿಸುವರೆಂದು ಎಡರಂಗ ನಂಬಿದೆ. ಈ ನಿರೀಕ್ಷೆ ನಿಜವಾದರೆ ಉಳಿದ ಐದು ಪಂಚಾಯತುಗಳಲ್ಲಿ ಎನ್ ಡಿ ಎ ಅಧಿಕ ಬಹುಮತ ಪಡೆದರೆ ಬಿಜೆಪಿಯ ಎಂ. ಎಲ್. ಅಶ್ವಿನಿ ಭವಿಷ್ಯದ ಎಂ. ಎಲ್. ಎ ಆಗುವ ಸಾಧ್ಯತೆಗಳು ನಿಚ್ಚಳವಾಗಿದೆ. ಆದರೆ ಕೊನೇ ಕ್ಷಣದಲ್ಲಿ ಬಿಜೆಪಿ ಬರಬಹುದೆಂಬ ಗುಮ್ಮನನ್ನು ತೋರಿಸುವ ಯುಡಿಎಫ್ ತಂತ್ರದ
ಪರಿಪಾಠವನ್ನು ಈ ಬಾರಿ ಮೀರಿನಿಲ್ಲುವರೇ ಎಂ. ಎಲ್. ಅಶ್ವಿನಿ ಎಂಬುದು ಪ್ರಶ್ನಾರ್ಥಕ…?






