ಈ ಶತಮಾನದ ಮೊದಲ ಮೂಡಪ್ಪ ಸೇವೆಗೆ ಅಣಿಯಾಗಿ ಮಧೂರು ಸಂಭ್ರಮಿಸುತ್ತಿದೆ. ವಿಶೇಷ ಜಾತ್ರಾ ಸೇವೆಯೊಂದಿಗೆ ನಡೆಯುವ ಮೂಡಪ್ಪ ಸೇವೆಯ ಜಾತ್ರಾ ಬ್ರಹ್ಮವಾಹಕತ್ವದ ಅವಕಾಶ ಮುಟ್ಟತ್ತೋಡಿ ಅಡಿಗರ ಪರಂಪರೆಗೆ ಈ ಬಾರಿಯೂ ವಾಡಿಕೆಯಂತೆ ಒಲಿದು ಬಂದಿದೆ. ಈ ಶತಮಾನದ ಮೊದಲ ಮೂಡಪ್ಪ ಸೇವೆಯ ಜಾತ್ರಾ ಬ್ರಹ್ಮವಾಹಕತ್ವದ ಸುಯೋಗ ಮುಟ್ಟತ್ತೋಡಿಯ ಕೃಷ್ಣ ಪ್ರಸಾದ ಅಡಿಗರ ಮುಡಿಗೇರಿದೆ.
ಅವರಿಗಿದು ಮಧೂರಿನಲ್ಲಿ ಮೊದಲ ಮೂಡಪ್ಪ ಜಾತ್ರೆಯ ಬ್ರಹ್ಮವಾಹಕತ್ವ.
ಕೃಷ್ಣ ಪ್ರಸಾದ ಅಡಿಗರ ಮುಟ್ಟತ್ತೋಡಿ ಮನೆತನಕ್ಕಿದು ವಂಶವಾಹಿ ಗೌರವ. 1962ರಲ್ಲಿ ನಡೆದ ಮೂಡಪ್ಪ ಸೇವೆಗೆ ಈವರ ಅಜ್ಜ, ಮುಟ್ಟತ್ತೋಡಿ ಕೃಷ್ಣ ಅಡಿಗರು ಬ್ರಹ್ಮವಾಹಕರಾಗಿ ದೇವರ ಬಲಿ ಉತ್ಸವ ನಡೆಸಿದ್ದರು. ಅನಂತರ 1992ರಲ್ಲಿ ನಡೆದ ಮೂಡಪ್ಪ ಸೇವೆಯಲ್ಲಿ ಇವರ ದೊಡ್ಡಪ್ಪ ನಾರಾಯಣ ಅಡಿಗರು ಬ್ರಹ್ಮವಾಹಕರಾಗಿ ಮೂಡಪ್ಪ ಜಾತ್ರೆಯನ್ನು ವೈಭವೀಕರಿಸಿದ್ದರು. ಇದೀಗ ಮೂರನೇ ಸರದಿ ಮುಟ್ಟತ್ತೋಡಿ ಕೃಷ್ಣಪ್ರಸಾದ ಅಡಿಗರಿಗೆ ಒಲಿದಿದೆ.
ಕೇವಲ ಬ್ರಹ್ಮವಾಹಕತ್ವ ಅಷ್ಟೇ ಅಲ್ಲ, ದೇವರ ಅಟ್ಟೆ ಅಲಂಕಾರ, ಕೈಬಿಟ್ಟು ದರ್ಶನ ಬಲಿ, ಮಹಾಗಣಪತಿ ದೇವರಿಗೆ ಸಮರ್ಪಿಸುವ ಮೂಡಪ್ಪ ಸೇವೆಯ ಪಂಜರ ನಿರ್ಮಾಣ ಇದೆಲ್ಲವೂ ಮುಟ್ಟತ್ತೋಡಿ ಅಡಿಗಳಿಗೆ ಒಲಿದ ಸೌಭಾಗ್ಯ.
ಮುಟ್ಟತ್ತೋಡಿ ಅಡಿಗ ಪರಂಪರೆಯವರು ಮಧೂರು ಕ್ಷೇತ್ರದಲ್ಲಿ ನಾನಾ ಜಾತ್ರಾ ಸಂದರ್ಭ ನಡೆಸಿದ,ಬ್ರಹ್ಮವಾಹಕತ್ವದ ಚಿತ್ರನೋಟ ಇಲ್ಲಿದೆ…
ಮುಟ್ಟತ್ತೋಡಿ ಅಡಿಗ ಮನೆತನಕ್ಕಿದು ಮಾಯಿಪ್ಪಾಡಿ ಅರಸರಿತ್ತ ಆನುವಂಶಿಕ ಗೌರವ. ಇದನ್ನು ಮುಟ್ಟತ್ತೋಡಿ ಪರಂಪರೆ ಮುಂದುವರಿಸುತ್ತಿದೆ.
ಈ ಬಾರಿ ಮೂಡಪ್ಪ ಜಾತ್ರೆಯ ಬ್ರಹ್ಮವಾಹಕರಾದ ಕೃಷ್ಣಪ್ರಸಾದ ಅಡಿಗರು ಬ್ರಹ್ಮವಾಹಕರಾಗಿ ಒಂದು ದಶಕದ ಅನುಭವಿಯಾದ ಪ್ರತಿಭಾವಂತರು. ಈಗಾಗಲೇ ವಿಟ್ಲ, ಚಂದಳಿಕೆ, ತಲಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನಗಳಲ್ಲಿ ನಡೆದ ಮೂಡಪ್ಪ ಸೇವೆಯಲ್ಲಿ ಗಣಪತಿಗೆ ಪಂಜರ ನಿರ್ಮಿಸಿ, ಅಪ್ಪದರಾಶಿ ಮೂಡಲು ಸಹಕರಿಸಿದ ಅನುಭವಿ. ಮಧೂರು ಕ್ಷೇತ್ರ ಸಿಬಂದಿಯಾದ ಇವರು ಬ್ರಹ್ಮವಾಹಕತ್ವದ ಎಲ್ಲಾ ಮಟ್ಟುಗಳಲ್ಲೂ ಪರಿಣಿತರಾಗಿ ಪ್ರತಿಭಾವಂತರೆನಿಸಿಕೊಂಡು ಜಪಪ್ರಿಯತೆಯೊಂದಿಗೆ ಭಕ್ತಜನರ ಶ್ಲಾಘನೆ ಪಡೆದಿದ್ದಾರೆ.
ಮಧೂರು ಮೂಡಪ್ಪ ಸೇವೆ ಕುಂಬಳೆ ಸೀಮೆಯ ಅತೀದೊಡ್ಡ ಸಂಭ್ರಮವಾಗಿದ್ದು ನಾಳೆ (ಎ.5) ಮಧೂರಿನಲ್ಲಿ ಲಕ್ಷಾಂತರ ಭಕ್ತ ಜನರು ನೆರೆಯುವ ನಿರೀಕ್ಷೆ ಇದೆ. ಅಪರಾಹ್ನ
5ಕ್ಕೆ ಮಧೂರಿನಲ್ಲಿ ಉತ್ಸವ ಬಲಿ ನಡೆದು ಬಳಿಕ ದೇವರು ಮೂಲಸ್ಥಾನಕ್ಕೆ ಸವಾರಿ ಹೊರಡುವರು. ರಾತ್ರಿ ಮೂಲಸ್ಥಾನದ ಬೆಡಿಕಟ್ಟೆಯಲ್ಲಿ ಸಿಡಿಮದ್ದು ಪ್ರದರ್ಶನ ನಡೆದು, ದೇವರು ಕ್ಷೇತ್ರಕ್ಕೆ ನಿರ್ಗಮಿಸುವ ಘೋಷಯಾತ್ರೆ ನಡೆಯಲಿದೆ. ಬಳಿಕ ದೇವಳದಲ್ಲಿ ಶ್ರೀ ಭೂತಬಲಿ ನಡೆದು ಮಹಾಮೂಡಪ್ಪಾದಿವಾಸ ಹೋಮ ಜರಗಲಿದೆ. ಬಳಿಕ ರಾತ್ರಿ ಈ ಶತಮಾನದ ಮೊದಲ ಮಹಾಮೂಡಪ್ಪ ಸೇವೆ ಶ್ರೀಮಹಾಗಣಪತಿ ದೇವರಿಗೆ ಸಮರ್ಪಣೆಯಾಗಲಿದೆ.