- ಪ್ರಭಾವಿ ರಾಜ್ಯ ನಾಯಕರು ಸ್ಪರ್ಧಿಸಿದರೆ ಗೆಲುವಿನ ಸಾಧ್ಯತೆ ಅಧಿಕ ಎಂದ ಬಿಜೆಪಿ ಜಿಲ್ಲಾಧ್ಯಕ್ಷೆ
ಮಂಜೇಶ್ವರ: ಬಿಜೆಪಿಯ ಬಹು ನಿರೀಕ್ಷಿತ ಎ ಕ್ಲಾಸ್ ವಿಧಾನಸಭಾ ಕ್ಷೇತ್ರಗಳಲ್ಲೊಂದಾದ ಮಂಜೇಶ್ವರ ಮತ್ತು ಕಾಸರಗೋಡಿನಲ್ಲಿ ಪಕ್ಷದ ರಾಜ್ಯ ಮಟ್ಟದ ಸೆಲೆಬ್ರಿಟಿ ನಾಯಕರು ಸ್ಪರ್ಧಿಸುವ ಒಲವು ತೋರಬೇಕೆಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ಬಯಕೆ ಮುಂದಿಟ್ಟಿದ್ದಾರೆ.
ವಿಧಾನಸಭಾ ಚುನಾವಣೆಗೆ ಅಭ್ಯರ್ಥಿ ನಿರ್ಣಯ ಚರ್ಚೆಗಳು ಆರಂಭಗೊಂಡು, ಸಾಧ್ಯತೆಗಳ ಪರಾಮರ್ಶೆ ನಡೆಯುತ್ತಿರುವಂತೆಯೇ ರಾಜ್ಯದ ಕೆಲ ದೃಶ್ಯ ಮಾಧ್ಯಮಗಳಿಗೆ ನೀಡಿದ ಹೇಳಿಕೆಗಳಲ್ಲಿ ಅವರು ಈ ಆಶಯ ಪ್ರಕಟಿಸಿದ್ದಾರೆ.
ಕೇರಳದಲ್ಲಿ ಬಿಜೆಪಿಗೆ ಕಾಲಾನುಕಾಲದಿಂದ ಹೆಚ್ಚಿನ ಸಾಧ್ಯತೆಗಳಿರುವ ಕ್ಷೇತ್ರಗಳಲ್ಲಿ ಮಂಜೇಶ್ವರ ಮತ್ತು ಕಾಸರಗೋಡು ಮುಂಚೂಣಿಯಲ್ಲಿದೆ. ಈ ಪೖಕಿ ಮಂಜೇಶ್ವರದಲ್ಲಿ ಕೆ. ಜಿ. ಮಾರಾರ್ ಹಾಗೂ ಕೆ. ಸುರೇಂದ್ರನ್ ಕೇವಲ ಕೆಲವೇ ಮತಗಳ ಅಂತರದಲ್ಲಿ ಪರಾಭವಗೊಂಡ ದೃಷ್ಟಾಂತಗಳೂ ಇವೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಅಭ್ಯರ್ಥಿಗಳಿಗಿಂತ ಭಿನ್ನವಾಗಿ ರಾಜ್ಯದ ಪ್ರಭಾವಿ ಬಿಜೆಪಿ ನಾಯಕರು ಕಾಸರಗೋಡು-ಮಂಜೇಶ್ವರದಲ್ಲಿ ಸ್ಪರ್ಧಿಸಿದರೆ ಮತದಾರರ ನಡುವೆ ಭಾರೀ ಪರಿಣಾಮದ ಪ್ರಭಾವ ಬೀರಲಿಕ್ಕಾಗುತ್ತದೆ. ಆದ್ದರಿಂದ ರಾಜ್ಯದ ಪ್ರಮುಖರು ಸ್ಪರ್ಧಿಸಿದರೆ ಗೆಲುವಿನ ಸಾಧ್ಯತೆ ಹೆಚ್ಚೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಸರಗೋಡು-ಮಂಜೇಶ್ವರದಲ್ಲಿ ಕಾರ್ಯಕರ್ತರ ನಡುವೆ ವಿಭಾಗೀಯತೆ ಇಲ್ಲ, ಬದಲು ಸ್ವತಂತ್ರ ಅಭಿಪ್ರಾಯಗಳಿವೆ. ಅದು ಸ್ವಾಗತಾರ್ಹ ಎಂದ ಅವರು ಅಭ್ಯರ್ಥಿಗಳಾಗಿ ತಾರಾ ವರ್ಚಸ್ಸಿನ, ಜನ ಸ್ವಾಧೀನ ಹೊಂದಿದ ಯುವ ಪೀಳಿಗೆಗೂ ಮಣೆ ಹಾಕುವಂತೆ ಹೇಳಿದ್ದಾರೆ.
ಬಿಜೆಪಿ ಅಭ್ಯರ್ಥಿ ನಿರ್ಣಯದ ಮಾತುಕತೆಗಳಾಗಲೀ, ಹಮಾಲೋಚನೆಗಳಾಗಲೀ ಆಧಿಕೃತವಾಗಿ ನಡೆದಿಲ್ಲ. ನಡೆಯುವ ಸಂದರ್ಭದಲ್ಲಿ ರಾಜ್ಯದ ವರಿಷ್ಟ ನಾಯಕರನ್ನೇ ಇಲ್ಲಿಗೆ ಸ್ಪರ್ಧೆಗೆ ಆಹ್ವಾನಿಸುವ ಬಯಕೆ ನನ್ನದು ಎಂದವರು ಹೇಳಿದ್ದಾರೆ. ಈ ಮೂಲಕ ಮಂಜೇಶ್ವರದಲ್ಲಿ ಬಿಜೆಪಿ ಶಾಸಕರು ಇರುವರೆಂದು ಅವರು ಆಶಾಭಾವನೆ ಪ್ರಕಟಿಸಿದರು.
ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಗೆಲುವಿನ ಭರವಸೆ ಹೊಂದಿದ 30 ಕ್ಷೇತ್ರಗಳನ್ನು ಗುರುತಿಸಲಾಗಿದೆ. ಈ ಪೖಕಿ ತಿರುವನಂತಪುರ ಜಿಲ್ಲೆ ಸಹಿತ 9ವಿಧಾನಸಭಾ ಕ್ಷೇತ್ರಗಳನ್ನು ಅತ್ಯಧಿಕ ಸಾಧ್ಯತೆಯ ಎ ಕ್ಲಾಸ್ ಮಂಡಲವೆಂದು ನಿರ್ಣಯಿಸಲಾಗಿದೆ. ಇದರಲ್ಲಿ ಮಂಜೇಶ್ವರವೂ ಒಳಗೊಂಡಿದೆ. ಈ ಹಿನ್ನೆಲೆಯಲ್ಲಿ ಮಂಜೇಶ್ವರದ ಅಭ್ಯರ್ಥಿಗಳಾಗಲು ಆಕಾಂಕ್ಷಿಗಳು ಹೆಚ್ಚುತ್ತಿರುವಂತೆಯೇ ಅಧ್ಯಕ್ಷೆ ರಾಜ್ಯ ನಾಯಕರನ್ನು ಇಲ್ಲಿಗೆ ಆಹ್ವಾನಿಸಿರುವುದು ರಾಜಕೀಯ ಚರ್ಚೆಗೆ ಮುನ್ನುಡಿ ಬರೆದಿದೆ.
ಇದೇ ವೇಳೆ ತಾನು ಸ್ಪರ್ಧೆಗೆ ಇಲ್ಲ ಎನ್ನದೇ, ಪಕ್ಷ ನಿರ್ದೇಶಿಸಿದರೆ ಅಲ್ಲಿ ಸ್ಪರ್ಧಿಸುವುದು ಮತ್ತು ಗೆಲುವು ಗಳಿಸುದಷ್ಟೇ ನನ್ನ ಕರ್ತವ್ಯ ಎಂದವರು ಹೇಳಿದ್ದಾರೆ.








