- ಗಾನಗಂಧರ್ವ ಜೇಸುದಾಸ್ ಗುರುವಾಯೂರು ಕ್ಷೇತ್ರ ಪ್ರವೇಶಿಸಲೇಬೇಕೆಂದು ಇವರೇಕೆ ಸತ್ಯಾಗ್ರಹ ನಡೆಸುತ್ತಾರೆ..?
- ಶಿವಗಿರಿ ಮಠ ಬಯಸುವ ಆಚಾರ,ಪರಿಷ್ಕಾರ ಸುಧಾರಣೆಯ ಒಳಗುಟ್ಟೇನು?
- ಗಾನಗಂಧರ್ವ, ನಿರ್ಮಲ ಭಕ್ತ, ಗಾಯಕ ಡಾ.ಕೆ.ಜೆ.ಜೇಸುದಾಸರನ್ನು ಗುರುವಾಯೂರು ಕ್ಷೇತ್ರ ಹೊಕ್ಕಿಸಲು ಶಿವಗಿರಿ ಮಠವೇಕೆ ಹಠ ತೊಟ್ಟು ಗುಲ್ಲೆಬ್ಬಿಸುತ್ತಿದೆ…?
*✍️ ಎಂ.ನಾ.ಚಂಬಲ್ತಿಮಾರ್
——————————-
ಜನ್ಮತಃ ಹಿಂದೂವಲ್ಲದ, ಹಿಂದೂ ಸಹಿತ ಸರ್ವ ಧರ್ಮಗಳನ್ನು ಗೌರವಿಸಿ, ಸಾಮರಸ್ಯದ ಒಲವಿಂದ ಬದುಕುವ ಭಾರತದ ಮೇರುಗಾಯಕ, ಮಲಯಾಳದ ಗಾನಗಂಧರ್ವ ಕೆ.ಜೆ.ಜೇಸುದಾಸರಿಗಿಲ್ಲದ ಆಸಕ್ತಿಯ ವಿವಾದವೊಂದಕ್ಕೆ ಕೇರಳದಲ್ಲಿ ಶಿವಗಿರಿ ಮಠ ಕಿಚ್ಚು ಹಚ್ಚಿದೆ. ಅದು ಮಾಧ್ಯಮ ಸಂವಾದಗಳ ಮೂಲಕ ಕ್ಷೇತ್ರ ಪ್ರವೇಶದ ತರ್ಕಗಳನ್ನೆಬ್ಬಿಸಿದೆ. ಪ್ರಸ್ತುತ 85ದಾಟಿದ ಹರೆಯದಲ್ಲಿ ಅಮೇರಿಕಾದಲ್ಲಿ ವೃದ್ಧಾಪ್ಯದ ವಿಶ್ರಾಂತ ಜೀವನ ನಡೆಸುತ್ತಿರುವ ಗಾಯಕ ಜೇಸುದಾಸ್ ಅಪ್ಪಿತಪ್ಪಿ ಪ್ರಸ್ತಾಪಿಸದ ವಿಷಯವೊಂದು ವರ್ಷಾಂತರಗಳ ಬಳಿಕ ಕೇರಳದಲ್ಲಿ ಈಗ ಚರ್ಚೆ,ವಿವಾದವಾಗಿ ಮುನ್ನೆಲೆಗೆ ಬಂದಿದೆ.
ಸಕಾಲಿಕ ಸಾಮಾಜಿಕ ಆಚಾರ ಪರಿಷ್ಕರಣೆ ಎಂಬ ನೆಲೆಯಲ್ಲಿ ಈ ಸಂವಾದ – ವಿವಾದಕ್ಕೆ ನಾಂದಿ ಹಾಡಿದವರೇ ಕೇರಳದ ಶಿವಗಿರಿ ಮಠದ ಮುಖ್ಯಸ್ಥ, ನಾರಾಯಣೀಯ ಗುರುಪರಂಪರಾ ಪ್ರತಿನಿಧಿ ಸ್ವಾಮಿ ಸಚ್ಛಿದಾನಂದರು. ಇತ್ತೀಚೆಗೆ ಕೇರಳದ ಕ್ಷೇತ್ರಗಳ ಪ್ರವೇಶನಕ್ಕೆ ಪುರುಷರು ಅಂಗಿ ತೆಗೆಯಲೇ ಬೇಕೆಂಬ ನಿಬಂಧನೆಯನ್ನು ಪ್ರಶ್ನಿಸಿ, ಶಿವಗಿರಿ ಮಠದ ಆಧೀನದ ಕ್ಷೇತ್ರಗಳಲ್ಲಿ ಮತ್ತು ಈಳವ ಸಮಾಜ ಕ್ಷೇತ್ರಗಳಲ್ಲಿ ಕ್ರಾಂತಿಕಾರಿಕ ಪರಿಷ್ಕಾರಕ್ಕೆ ಮುನ್ನುಡಿ ಬರೆದ ಅವರು ಈಗ ಗುರುವಾಯೂರಿನಲ್ಲೇಕೆ ಜೇಸುದಾಸರಿಗೆ ಪ್ರವೇಶವಿಲ್ಲ ಪ್ರಶ್ನಿಸಿದ್ದಾರೆ. ಪ್ರವೇಶ ನೀಡಬೇಕೆಂದು ಒತ್ತಾಯಿಸಿ ಮುಂಬರುವ ಎಪ್ರೀಲ್ ತಿಂಗಳಲ್ಲಿ ಗುರುವಾಯೂರು ದೇವಳದ ಮುಂದೆ
ಶಿವಗಿರಿ ಮಠ ನೇತೃತ್ವದಲ್ಲಿ ಸತ್ಯಾಗ್ರಹ ಆರಂಭಿಸುವುದಾಗಿಯೂ ಘೋಷಿಸಿದ್ದಾರೆ. ನ್ಯೂಸ್ 18ವಾಹಿನಿ ಇದೊಂದು ಸಾಮಾಜಿಕ ಕ್ರಾಂತಿಯ ಬದ್ಧತೆ ಎಂಬಂತೆ ಈ ವಿಷಯದಲ್ಲಿ ಸಂವಾದ, ಚರ್ಚೆಗಳನ್ನೆಬ್ಬಿಸಿದೆ. ಪರಿಣಾಮ ಗುರುವಾಯೂರು ಕ್ಷೇತ್ರ ಪ್ರವೇಶನ ವಿಚಾರ ಮತ್ತೆ ಸಂಕೀರ್ಣ ಚರ್ಚೆಗೆ ಒಳಗಾಗಿದೆ.
- *ಈಗ ಇದರ ಅಗತ್ಯವೇನು..?
“ಗುರುವಾಯೂರು ಕ್ಷೇತ್ರಕ್ಕೆ ವರ್ಷಾಂತರಗಳ ಹಿಂದೆ ಜೇಸುದಾಸ್ ಹೋಗಿದ್ದರಂತೆ. ಆಗ ಕ್ರೈಸ್ತ ನೆಂಬ ಕಾರಣಕ್ಕೆ ಅಹಿಂದುವಿಗೆ ಪ್ರವೇಶನ ನೀಡಿರಲಿಲ್ಲವಂತೆ. ಈ ಕಾರಣದಿಂದಲೇ “ಗುರುವಾಯೂರಂಬಲ ನಡೆಯಿಲ್ ಞಾನ್ ಪೋಗುಂ, ಗೋಪಕುಮಾರನೆ ಕಾಣುಂ”(ಗುರುವಾಯೂರು ದೇವಳ ನಡೆಗೆ ನಾನು ಹೋಗುವೆ, ಗೋಪಕುಮಾರನ ಕಾಣುವೆ) ಎಂಬ ಮಲಯಾಳಂ ಹಾಡು ಹುಟ್ಟಿತು. ಅದು ಸಮಗ್ರ ಕೇರಳದಲ್ಲಿ ಜಾತ್ಯಾತೀತ ಭಕ್ತರ ಧ್ವನಿಯಾಯಿತು. ಆದರೆ ಸ್ವತಃ ಜೇಸುದಾಸ್ ಅನನ್ಯ ಭಕ್ತಾಗ್ರೇಸರ. ಆದು ನಿರ್ದಿಷ್ಟ ದೇವರ, ಏಕ ಮತ,ಧರ್ಮದ ಹಿಃಬಾಲಕರಲ್ಲ. ಅವರು ಧರ್ಮ ಗ್ರಂಥ ಏನು ಸಾರುತ್ತವೆಂದು ಅರಿತವರು.ಈ ಮೌಲ್ಯಗಳನ್ನು ಆರಾಧಿಸಿದವರು..
ಆದರೆ ದಶಕಗಳ ಹಿಂದಿನ ಈ ಕ್ಷೇತ್ರ ಪ್ರವೇಶ ವಿಚಾರದ ಹೆಸರಲ್ಲಿ ಈಗ ಸಂಘರ್ಷ ಭಾವದ ಸತ್ಯಾಗ್ರಹವೇಕೆ..?
ದೇವಸ್ಥಾನ ಎಂದರೆ ಎಲ್ಲರಿಗೂ ಮುಕ್ತ ಪ್ರವೇಶ ನೀಡುವ ದೇವರ ಮ್ಯೂಸಿಯಂ ಅಲ್ಲತಾನೇ..? ಹಾಗಿದ್ದರೆ ಶಿವಗಿರಿ ಮಠಾಧ್ಯಕ್ಷರಾದ ಸಚ್ಛಿದಾನಂದ ಸ್ವಾಮೀಜಿ ಸತ್ಯಾಗ್ರಹ ಘೋಷಿಸಿದ ಉದ್ದೇಶವೇನು..?
ಅವರು ಹೇಳುವುದೇನೆಂದರೆ “ಗುರುವಾಯೂರು ದೇವಸ್ವಂ ಮಂಡಳಿ ತನ್ನ ನಿಲುವು ಬದಲಿಸಬೇಕು. ಭಕ್ತನಾದ ಏಸುದಾಸ್ ಗೆ ಪ್ರವೇಶ ನೀಡಬೇಕು. ರಾಜ್ಯ ಸರಕಾರ ಇದಕ್ಕೆ ಪೂರಕವಾಗಿ ಅನುಕೂಲ ನಿಲುವು ತಳೆಯಬೇಕು ಎಂದು.
- *ಯಾರೊಡನೆ ಸತ್ಯಾಗ್ರಹ..ಗುರುವಾಯೂರಪ್ಪನ ಮುಂದೆಯಾ?
ನಿಜಕ್ಕೂ ಜೇಸುದಾಸ್ ಗುರುವಾಯೂರು ದೇವಸ್ಥಾನಕ್ಕೆ ಬರುತ್ತೇನೆಂದು ಬಂದರೆ ಈಗ ತಡೆಯುವ ಪ್ರಮೇಯ ಉಂಟೇ?
ಹಾಗಿದ್ದರೆ ತಡೆಯುವುದು ಯಾರು? ಯಾವುದು?
ಅದು ಜಾತಿಯ- ಮತದ ವಿಚಾರವೇ??
ಇಷ್ಟಕ್ಕೂ ಶ್ರೀ ಶಬರಿಮಲೆಯ ಅಯ್ಯಪ್ಪ ಸ್ವಾಮಿ ನಿತ್ಯ ರಾತ್ರಿ ನಿದ್ದೆಗೆ ಜಾರಲು ಹಾಡುವ “ಹರಿವರಾಸನಂ..ಆರಾಧ್ಯ ಮೋಹನಂ” ಹಾಡಿನ ಧ್ವನಿಯೇ ಜೇಸುದಾಸರದ್ದು. ಅದೆಷ್ಟೋ ಬಾರಿ ಶ್ರೀ ಶಬರಿಮಲೆ ಅಯ್ಯಪ್ಪನ ಪದತಲದಲ್ಲಿ ಸ್ವತಃ ಜೇಸುದಾಸರೇ ಈ ಮಂಗಲಗೀತೆ ಹಾಡಿದ್ದಾರೆ.
ಶಬರಿಮಲೆಗೆ ಹೋದಾಗಲೆಲ್ಲಾ ಹಾಡುತ್ತಲೇ ಇದ್ದಾರೆ. ಹೆಚ್ಚೇಕೆ ನಮ್ಮ ಕರಾವಳಿಯ ಉಡುಪಿಯ ಕೃಷ್ಣನನ್ನು ಭಜಿಸಿ “ಕೃಷ್ಣಾ ನೀ ಬೇಗನೇ ಬಾರೋ” ಎಂದು ಉಡುಪಿ ಕೃಷ್ಣಮಠದಲ್ಲೇ ಅವರು ಹಾಡಿದ್ದಾರೆ. ನಮ್ಮೂರ ಕಾಸರಗೋಡಿನ ಮಲ್ಲ ಮಠದ ಶ್ರೀದುರ್ಗಾಪರಮೇಶ್ನರಿ ಸನ್ನಿಧಿಯಲ್ಲಿ ಸಂಗೀತ ಕಛೇರಿ ನೀಡಿದ್ದಾರೆ. ಕಾರ್ಯಕ್ರಮ ಮುಗಿಸಿ ಮರಳಿದವರು ,ಮಧ್ಯರಾತ್ರಿ ಮರಳಿ ಬಂದು ದೇವಳ ಗರ್ಭಗುಡಿಯ ಮುಂದೆ ನೆಲದಲ್ಲಿ ಪವಡಿಸಿ ದೇವೀ ಕೀರ್ತನೆ ಹಾಡಿದ್ದಾರೆ. ಇಂಥಾ ಸದ್ಭಕ್ತನ ಜನಾಂಗೀಯತೆ ಉಲ್ಲೇಖಿಸಿ ಈಗ ಗುರುವಾಯೂರಲ್ಲಿ ಪ್ರವೇಶನ ನೀಡಬೇಕೆಂದು ಆಂದೋಲನ ಎಬ್ಬಿಸುವುದ ಉದ್ದೇಶನೇನು?
ಶಿವಗಿರಿ ಮಠ ಬಯಸುವ ಸಾಮಾಜಿಕ ಆಚಾರ ಪರಿಷ್ಕಾರದ ಒಳಗುಟ್ಟೇನು?
ಎಲ್ಲಿಯೂ ಕೆ.ಜೆ.ಜೇಸುದಾಸ್ ತನಗೆ ಗುರುವಾಯೂರು ಪ್ರವೇಶ ನಿಷೇಧಿಸಿರುವುದನ್ನು ಅಧಿಕೃತ ಉಲ್ಲೇಖಿಸಿಲ್ಲ. ಪ್ರವೇಶ ಒದಗಿಸಬೇಕೆಂದೂ ಮನವಿ ಮಾಡಿಲ್ಲ. ಭಕ್ತರ ಸಾಲಿನಲ್ಲಿ ನಾನೆಂದಿಗೂ ಕಟ್ಟಕಡೆಯವನೆಂದೇ ಮಾತಾಡುವ ಜೇಸುದಾಸ್ ಈಗಿನ ವಿವಾದಕ್ಕೆ ಪ್ರತಿಕ್ರಿಯೆ ನೀಡಿಲ್ಲ. ಅವರು ಪ್ರತಿಕ್ರಿಯಿಸಿದರೆ ಬೆಂಕಿಯ ಮೇಲೆ ಮಳೆ ಸುರಿದಂತೆ ಈ ವಿವಾದ ನಂದಿ ಹೋಗಬಹುದು, ಅಷ್ಟೇ…