ತ್ರಿಶೂರಿನಲ್ಲಿ 64ನೇ ಕೇರಳ ಪ್ರಾಂತ್ಯ ಶಾಲಾ ಕಲೋತ್ಸವಕ್ಕೆ ಸಮಾಪ್ತಿ : ಕಣ್ಣೂರಿಗೆ ಪ್ರಥಮ ಸ್ಥಾನದ ಕಿರೀಟ
ತ್ರಿಶೂರು: ಕೇರಳ ರಾಜ್ಯ ಶಾಲಾ ಕಲೋತ್ಸವದ ಸ್ಪರ್ಧಾ ವೇದಿಕೆಗಳು ಕೇವಲ ಸ್ಪರ್ಧಾತ್ಮಕ ವೇದಿಕೆಯಷ್ಟೇ ಅಲ್ಲ. ಅದು ಮಲಯಾಳಂ ಸಿನಿಮ, ಸಾಹಿತ್ಯ, ಸಂಗೀತ, ಕಲಾ ಕ್ಷೇತ್ರಕ್ಕೆ ಮಹಾ ಪ್ರತಿಭೆಗಳನ್ನು ಪೂರೖಸುತ್ತಲೇ ಇರುವ ಕಲಾ ಪಾಠಶಾಲೆ ಎಂದು ಮಲಯಾಳದ ಮಹಾನಟ ಮೋಹನ್ ಲಾಲ್ ಹೇಳಿದರು. 64ನೇ ಕೇರಳ ಪ್ರಾಂತ್ಯ ಶಾಲಾ ಕಲೋತ್ಸವದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅವರು ಕಲೋತ್ಸವ ವೇದಿಕೆಗಳ ಕುರಿತು ತನೆಗೆ ಅತಿಯಾದ ಭಾವುಕತೆಯ ಅಭಿಮಾನದ ಗೌರವ ಇದೆ ಎಂದರು.

ಕೇರಳ. ಶಾಲಾ ಕಲೋತ್ಸವ ಮಂಜು ವಾರ್ಯಾರ್, ನವ್ಯಾ ನಾಯರ್ ಸಹಿತ ಅನೇಕ ಪ್ರತಿಭೆಗಳನ್ನು ಸಿನಿಮಾ ಜಗತ್ತಿಗೆ ನೀಡಿದೆ. ಇಂದಿಗೂ ಮಲಯಾಳದ ನಿರ್ದೇಶಕರು ಪ್ರತಿಭಾವಂತ ಉದಯೋನ್ಮುಖ ಕಲಾವಿದರನ್ನು ಅರಸಿ ಕಲೋತ್ಸವ ವೇದಿಕೆಯತ್ತ ಬರುತ್ತಿರುವುದು ಮುಂದುವರಿಯುತ್ತದೆ ಎಂದು ನಟ ಮೋಹನ್ ಲಾಲ್ ಹೇಳಿದರು. ಇಂಟರ್ ನೆಟ್, ಸಾಮಾಜಿಕ ಜಾಲತಾಣ, ಟಿವಿ ಚಾನೆಲ್ ಇಲ್ಲದಿದ್ದ ಕಾಲದಲ್ಲಿ ಕಲೋತ್ಸವ ವೇದಿಕೆಗಳೊಂದೇ ಕಲಾ ಪ್ರತಿಭಾ ಪ್ರದರ್ಶನದ ವೇದಿಕೆಯಾಗಿ ತಾರಾಪ್ರಭೆ ಪಡೆದಿದ್ದವು. ಇಂಥ ಕಾಲದಲ್ಲಿ ತಾನೂ ಕಲೋತ್ಸವ ವೇದಿಕೆ ಏರಿದ್ದೆ ಎಂದು ನೆನಪಿಸಿಕೊಂಡ ಆವರು ಕಲೋತ್ಸವದಲ್ಲಿ ವಿಜೇತರಾದವರು ಮಾತ್ರ ಶ್ರೇಷ್ಠ ಕಲಾವಿದರೇನಲ್ಲ. ಸೋಲು ಗೆಲುವಿನಾಚೆಗೆ ಕಲೋತ್ಸವದ ಪಾಲ್ಗೊಳ್ಳುವಿಕೆಯೇ ಮುಖ್ಯ. ಅದು ಎಳೆಯ ವಿದ್ಯಾರ್ಥಿ ಮನಸ್ಸುಗಳಲ್ಲಿ ಆತ್ಮ ವಿಶ್ವಾಸ ತುಂಬುತ್ತದೆ ಎಂದರು.
ವಿಪಕ್ಷ ನಾಯಕ ವಿ. ಡಿ. ಸತೀಶನ್ ಸಮಾರೋಪ ಸಮಾರಂಭ ಉದ್ಘಾಟಿಸಿದರು. ಆವೇಶಭರಿತ ಗುಣಮಟ್ಟದ ಕಲಾ ಸ್ಪರ್ಧೆಗಳನ್ನು ಕಾಪಾಡಿಕೊಂಡ ರಾಜ್ಯ ಕಲೋತ್ಸವದಲ್ಲಿ 1028 ಆಂಕಗಳೊಂದಿಗೆ ಕಣ್ಣೂರು ಜಿಲ್ಲೆ ಪ್ರಥಮ ಸ್ಥಾನದ ಕಿರೀಟ ಮುಡಿದಿದೆ. 1023ಅಂಗಳಿಂದ ತ್ರಿಶೂರು ದ್ವಿತೀಯ ಹಾಗೂ 1017ಅಂಕಗಳೊಂದಿಗೆ ಕೋಝಿಕ್ಕೋಡ್ ತೃತೀಯ ಬಹುಮಾನ ಪಡೆಯಿತು.


















