ಕಾಸರಗೋಡು: ಕಾಸರಗೋಡು ಸಹಿತ ಕೇರಳದ ಕೆಲವು ಜಿಲ್ಲೆಗಳಲ್ಲಿ ಗರಿಷ್ಟ ಉಷ್ಣತಾ ಮಟ್ಟ ಇನ್ನಷ್ಟು ಏರಿಕೆಯಾಗಿ 40 ಡಿಗ್ರಿ ಸೆಲ್ಶಿಯಸ್ ಗೆ ತಲುಪುವ ಸೂಚನೆಗಳಿವೆ. ವಾತಾವರಣದ ತಾಪಮಾನ ಏರಿಕೆಯಿಂದ ಜನಜೀವನ ಅಸ್ವಸ್ಥಗೊಳ್ಳಲಿದ್ದು, ವಿಶೇಷ ಮುನ್ನೆಚ್ಚರಿಕೆಯೊಂದಿಗೆ ನಾಗರಿಕರು ಎಚ್ಚರ ವಹಿಸಬೇಕೆಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಕೇರಳದಲ್ಲೇ ಗರಿಷ್ಟ ಉಷ್ಣತೆ ದಾಖಲಾದ ಪಾಲಕ್ಕಾಡ್ ಜಿಲ್ಲೆಯಲ್ಲಿ ಇಂದು ಸೋಮವಾರದಿಂದ ಎ. 24 ರ ತನಕ 40 ಡಿಗ್ರಿ ಸೆಲ್ಶಿಯಸ್, ಕೊಲ್ಲಂ ಜಿಲ್ಲೆಯಲ್ಲಿ 39ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಅತ್ಯುತ್ತರ ಕೇರಳದ ಕಾಸರಗೋಡಿನಲ್ಲಿ ಈ ವರೆಗೆ ಸರಾಸರಿ 36-37 ಡಿಗ್ರಿ ತಾಪಮಾನ ದಾಲಾಗಿದೆ. ಇದು 3ರಿಂದ 4ಡಿಗ್ರಿ ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ವಾತಾವರಣದ ಗರಿಷ್ಟ ಏರಿಕೆ ನಾಗರಿಕರು ಹಾಗೂ ಜೀವಜಂತುಗಳ ಮೇಲೆ ಗಂಭೀರ ಪರಿಣಾಮ ಬೀರಲಿದ್ದು, ಸ್ವಯಂ ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ.











