- ಗೂಂಡಾ, ಮಾಫಿಯಾ ಜಾಲಗಳ ಆರ್ಥಿಕ ವ್ಯವಹಾರದ ಮೇಲೆ ಹದ್ದಿನ ಕಣ್ಣಿರಿಸಲು ಪೊಲೀಸ್ ಠಾಣೆಗೆ ಆದೇಶ
ಕಾಸರಗೋಡು(ಸೆ. 2):
ಕೇರಳದಲ್ಲಿ ಡ್ರಗ್ಸ್ ಮಾರಾಟ ಮತ್ತು ಸೇವನೆ ದಂಧೆಯನ್ನು ಹೆಡೆಮುರಿ ಕಟ್ಟಿದ ‘ಆಪರೇಷನ್ ತೂಫಾನ್’ ಯಶಸ್ವಿಯಾದ ಹಿನ್ನೆಲೆಯಲ್ಲಿ ಅದರ ಮುಂದುವರಿದ ಭಾಗವಾಗಿ ಸಮಗ್ರ ಭೂಗತ ವ್ಯವಹಾರದ ಮಾಫಿಯಾ ಜಾಲವನ್ನು ಹೆಡೆಮುರಿ ಕಟ್ಟಲು ರಾಜ್ಯ ಗೃಹ ಇಲಾಖೆ ನಿರ್ಧರಿಸಿದೆ. ಈ ಸಂಬಂಧ ಉನ್ನತ ಪೊಲೀಸಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವ ಗೃಹ ಸಚಿವ ರಮೇಶ್ ಚೆನ್ನಿತಲ ರಾಜ್ಯದ ಗೂಂಡಾ, ಮಾಫಿಯ ಬಡ್ಡಿ ದಂಧೆಗಳ ಕೊಟೇಷನ್ ಗ್ಯಾಂಗ್ ಗಳನ್ನು ಸದೆಬಡಿಯಲು ಆಪರೇಷನ್ ಗೆ ಯೋಜನೆ ರೂಪಿಸಿದ್ದಾರೆ.

ಕ್ರಿಮಿನಲ್ ಗೂಂಡಾಗಳು, ಡ್ರಗ್ಸ್ ದಂಧೆಕೋರರು, ಸೖಬರ್ ವಂಚಕರು, ಕೊಟೇಷನ್ ಗ್ಯಾಂಗ್ ಸೇರಿದಂತೆ ಕ್ರಿಮಿನಲ್ ಹಿನ್ನೆಲೆ ಉಳ್ಳವರನ್ನು ಕೇಂದ್ರೀಕರಿಸಿ, ಅವರ ಬೇಂಕ್ ವ್ಯವಹಾರಗಳ ಮೇಲೆ ಕಣ್ಣಿರಿಸಿ ಕಾರ್ಯಾಚರಣೆ ನಡೆಯಲಿದೆ. ಪ್ರಸ್ತುತ ಕಾರ್ಯಾಚರಣೆಗೆ ಆಧುನಿಕ ತಂತ್ರಜ್ಞಾನದ ಪರಿಜ್ಞಾನ ಹೊಂದಿದ ಖಾಸಗಿ ತನಿಖಾ ಏಜೆನ್ಸಿಯ ನೆರವು ಪಡೆಯಲು ಕೂಡಾ ನಿರ್ಧರಿಸಲಾಗಿದೆ.
ಈ ಸಂಬಂಧ ಪೊಲೀಸ್ ಇಲಾಖೆ ಕ್ರಿಮಿನಲ್ ಗಳ ಬೇಂಕ್ ವ್ಯವಹಾರದ ಆರ್ಥಿಕ ಸಂಪನ್ಮೂಲ ಮಾಹಿತಿ ಕ್ರೋಢೀಕರಣ ಆರಂಭಿಸಿದೆ. ಕ್ರಿಮಿನಲ್ ಹಿನ್ನೆಲೆ ಉಳ್ಳವರಷ್ಟೇ ಅಲ್ಲದೇ ಅವರ ಆತ್ಮೀಯ ಸಹಚರರು, ಸಂಬಂಧಿಕರು, ಸಂಘಟನೆಗಳು ಮೊದಲಾದವುಗಳ ಒಂದು ವರ್ಷದ ಬೇಂಕ್ ವ್ಯವಹಾರಗಳನ್ನು ಕೂಡಾ ನಿರೀಕ್ಷಿಸಲಾಗುತ್ತಿದೆ.
ಕ್ರಿಮಿನಲ್ ಗೂಂಡಾಗಳ ಮಾಫಿಯಾ ಜಾಲವನ್ನು ಮತ್ತು ಅವರ ಅನಧಿಕೃತ ವ್ಯವಹಾರದ ಆರ್ಥಿಕ ಸಂಪನ್ಮೂಲವನ್ನು ತಡೆಯುವುದು ಪ್ರಸ್ತುತ ಆಪರೇಷನ್ ಉದ್ದೇಶವಾಗಿದೆ. ರಾಜ್ಯ ಪೊಲೀಸ್ ಮೇಧಾವಿ ರವಡ ಚಂದ್ರ ಶೇಖರ್ ಅವರು ಈ ಕುರಿತಾದ ಮೇಲ್ವಿಚಾರಕರಾಗಿದ್ದು, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗೂ ಈ ಕುರಿತು ವಿಶೇಷ ಆದೇಶ ನೀಡಲಾಗಿದೆ.






