ಮಂಗಳೂರು: ಮಂಗಳೂರಿನ ಉದ್ಯಮಿಯೊಬ್ಬರನ್ನು ಹನಿಟ್ರಾಪ್ ಮಾಡಿ ಬ್ಲಾಕ್ ಮೇಲ್ ಮಾಡಿದ್ದಲ್ಲದೇ, ಕೋಟ್ಯಾಂತರ ರೂಪಾಯಿ ಹಣ ಪೀಕಿಸಿಗೊಂಡ ಘಟನೆ ಬೆಳಕಿಗೆ ಬಂದಿದ್ದು, ದ. ಕ ಜಿಲ್ಲಾ ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಹಿತ ಇಬ್ಬರನ್ನು ಉರ್ವ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಯುವ ಕಾಂಗ್ರೆಸ್ ಮಂಗಳೂರು ಜಿಲ್ಲಾ ಕಾರ್ಯದರ್ಶಿ ನಿಝಾಮ್ ಹಾಗೂ ಆತನ ಗೆಳೆಯ ಜಿತೇಶ್ ಬಂಧಿತ ವ್ಯಕ್ತಿಗಳಾಗಿದ್ದಾರೆ.
2024 ರಿಂದಲೇ ಉದ್ಯಮಿಯನ್ನು ಹನಿ ಟ್ರಾಪ್ ಮಾಡಿದ ಆರೋಪಿಗಳು ನಾನಾ ರೀತಿಯ ನಾಟಕ, ಬೆದರಿಕೆ ಹಾಕಿ ಬರೋಬ್ಬರಿ 2 ಕೋಟಿ 77 ಲಕ್ಷ ರೂ ಹಣ ದೋಚಿದ್ದಾರೆ. ಉದ್ಯಮಿಯ ಅನೖತಿಕ ಸಂಬಂಧದ ಅಶ್ಲೀಲ ವಿಡಿಯೋ ಇರಿಸಿಕೊಂಡು ಇವರಿಬ್ಬರು ಬ್ಲಾಕ್ ಮೇಲ್ ಮಾಡಿದ್ದರು.

ಉದ್ಯಮಿ ಜತೆ ಆತ್ಮೀಯನಾಗಿದ್ದ ಜಿತೇಶ್ ಉದ್ಯಮಿಯ ಅಶ್ಲೀಲ ಅನೖತಿಕ ಸಂಬಂಧದ ವೀಡಿಯೋ ತೋರಿಸಿ ಬ್ಲಾಕ್ ಮೇಲ್ ಆಟ ಶುರು ಮಾಡಿದ್ದನು. ತನ್ನ ಅನೖತಿಕ ಸಂಪರ್ಕದ ಅಶ್ಲೀಲ ವೀಡಿಯೋವನ್ನು ಹೆಂಡತಿಗೆ ತೋರಿಸುತ್ತೇನೆಂದು ಹೆದರಿಸಿ 35 ಲಕ್ಷ ರೂ. ಗೆ ಬೇಡಿಕೆ ಇಟ್ಟಿದ್ದ. ಮರ್ಯಾದೆಗೆ ಅಂಜಿ ಉದ್ಯಮಿ ಚೆಕ್ ಮೂಲಕ ನಗದು ನೀಡಿದ್ದರು. ಆದರೆ ಆತ ತದನಂತರವೂ ಹಣಕ್ಕೆ ಬೇಡಿಕೆ ಇಟ್ಟು ಬೆದರಿಸಲು ಆರಂಭಿಸಿದಾಗ ಉದ್ಯಮಿ ಯು ಯುವ ಕಾಂಗ್ರೆಸ್ ನಾಯಕ ನಿಝಾಮ್ ಗೆ ವಿಷಯ ತಿಳಿಸಿ, ಪಾರು ಮಾಡುವಂತೆ ವಿನಂತಿಸಿಕೊಂಡಿದ್ದರು. ಈ ವೇಳೆ ನಿಝಾಮ್ ಕೂಡಾ ಜಿತೇಶ್ ಜತೆ ಸೇರಿಕೊಂಡು ತಂತ್ರಪೂರ್ವಕ ಉದ್ಯಮಿಯನ್ನು ಸುಲಿಯಲಾರಂಭಿಸಿದರು.
ಜಿತೇಷ್ ತನ್ನ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಉದ್ಯಮಿಯೇ ಕಾರಣ ಮತ್ತು ಅಶ್ಲೀಲ ವೀಡಿಯೋ ತೋರಿಸಿ ದ ಕಾರಣವೇ ಉದ್ಯಮಿಯಿಂದ ಈ ಕೃತ್ಯವೆಂದು ಬೆದರಿಸಿದ್ದನು. ಅನಂತರ ಜಿತೇಶ್ ತಲೆಮರೆಸಿಕೊಂಡನು. ಈ ವೇಳೆ ನಿಝಾಮ್ ಉದ್ಯಮಿಯನ್ನು ಸಂಪರ್ಕಿಸಿ ಜಿತೇಶ್ ಡೆತ್ ನೋಟ್ ಮತ್ತು ಸತ್ತನೆಂಬಂತೆ ನಟಿಸಿ ತೆಗೆದ ಫೋಟೋ ತೋರಿಸಿ ಉದ್ಯಮಿಯನ್ನು ಬೆದರಿಸಿದನು. ಜೖಲಿಗೆ ಹೋಗುವ ಭಯದಿಂದ ನಿಝಾಮ್ ಕೇಳಿದಂತೆಲ್ಲಾ ದುಡ್ಡು ಕೊಡುತ್ತಲೇ ಬಂದರು. ಈ ಮಧ್ಯೆ ಉದ್ಯಮಿಗೆ ಮಂಗಳೂರು ನಗರದಲ್ಲಿ ಜಿತೇಶ್ ಆಕಸ್ಮಿಕ ಕಾಣಸಿಕ್ಕಾಗ ಸಾವಿನ ನಾಟಕ ಬಯಲಾಯಿತು.
ಕೂಡಲೇ ಅವರು ಉರ್ವ ಪೊಲೀಸರನ್ನು ಸಂಪರ್ಕಿಸಿ ತನಗಾದ ಅನುಭವವನ್ನು ತೋಡಿಕೊಂಡು ದೂರು ದಾಖರಿಸಿದರು. ಈ ಹಿನ್ನೆಲೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ.
ಇದೇ ವೇಳೆ ಉದ್ಯಮಿಯನ್ನು ಹನಿಟ್ರಾಪ್ ಮಾಡಿ ಕೋಟಿಗಟ್ಟಲೆ ಹಣ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ದ. ಕ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ನಿಝಾಮ್ ನನ್ನು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟಿಸಲಾಗಿದೆ. ದಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಈ ಕುರಿತು ಅಧಿಕೃತ ಆದೇಶ ಹೊರಡಿಸಿದ್ದಾರೆ.




