- ಬಂಧಿತ ಆರೋಪಿಗಳಿಂದ ಚಿನ್ನಾಭರಣ, ಕಾರು ಸಹಿತ 23.67ಲಕ್ಷದ ಸೊತ್ತು ವಶಕ್ಕೆ: ಉಪ್ಪಿನಂಗಡಿ, ಬಂಟ್ವಾಳ, ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಐದು ಪ್ರಕರಣಗಳಲ್ಲಿ ಭಾಗಿಯೆಂದು ಬಯಲು
ಬೆಳ್ತಂಗಡಿ (ಜೂನ್ 9:)
ಇಲ್ಲಿನ ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಳಮಂಜದಲ್ಲಿ ಮನೆಗೆ ನುಗ್ಗಿ ಚಿನ್ನಾರಣ ಕಳವು ನಡೆಸಿದ ಪ್ರಕರಣದಲ್ಲಿ ಕಾಸರಗೋಡು ವಾಸಿಗಳಾದ ಇಬ್ಬರು ಅಂತರಾಜ್ಯ ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ.
ಮೂಲತಃ ಬಂಟ್ವಾಳದ ಕೊಲ್ನಾಡು ನಿವಾಸಿ ಹಾಗೂ ಪ್ರಸ್ತುತ ಕಾಸರಗೋಡಿನಲ್ಲಿ ವಾಸವಾಗಿರುವ ಹಮೀದ್ ಹಾಗೂ ಜಾಬಿರ್ ಆಲಿಯಾಸ್ ಜಾಬಿ( 38)
ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ ರೂ 23.67 ಲಕ್ಷದ ಅಪಹೃತ ಸೊತ್ತು ವಶಪಡಿಸಲಾಗಿದೆ.
ಈ ಪೖಕಿ ಹಮೀದ್ ನನ್ನು ಈ ಮೊದಲೇ ಬಂಧಿಸಿ ಜಾಬಿರ್ ನನ್ನು ಇಂದು ಸೆರೆ ಹಿಡಿಯಲಾಯಿತು.

- ಬಂಧಿತ ಆರೋಪಿಗಳಾದ ಹಮೀದ್ ಹಾಗೂ ಜಾಬಿರ್
ಕಳೆದ ಎ. 5ರಂದು ಬಳ್ಳಮಂಜದ ಮನೆಯೊಂದರಲ್ಲಿ 6 ಲಕ್ಷ ರೂ ನಗದು ಮತ್ತು ಚಿನ್ನಾಭರಣ ಒಳಗೊಂಡಂತೆ ಸುಮಾರು 19 ಲಕ್ಷ ರೂ ಮೌಲ್ಯದ ಸೊತ್ತು ಕಳವು ನಡೆಸಲಾಗಿತ್ತು. ಪ್ರಕರಣದಲ್ಲಿ ಆರಂಭದಲ್ಲೇ ಹಮೀದ್ ನನ್ನು ಬಂಧಿಸಿದ್ದ ಪೊಲೀಸರು ಕೃತ್ಯಕ್ಕೆ ಬಳಸಿದ ಕಾರು ವಶ ಪಡಿಸಿದ್ದರು.
ಆತನಿಂದ ಪಡೆದ ಮಾಹಿತಿಯಂತೆ ಜೂ. 7 ರಂದು ಜಾಬಿರ್ ನನ್ನು ವಶಕ್ಕೆ ತೆಗೆದು ವಿಚಾರಣೆ ನಡೆಸಿದ ಬಳಿಕ ಬಂಧಿಸಲಾಯಿತು. ಇವರಿಂದ ಚಿನ್ನಾಭರಣ ಸಹಿತ ಕಾರು ಒಳಗೊಂಡಂತೆ ಒಟ್ಟು 23.67 ಲಕ್ಷದ ಸೊತ್ತು ಪತ್ತೆ ಹಚ್ಚಿ ವಶ ಪಡಿಸಲಾಗಿದೆ.
ಪ್ರಕರಣದ ತನಿಖೆಯ ವೇಳೆ ಆರೋಪಿಗಳು ಉಪ್ಪಿನಂಗಡಿ, ಬಂಟ್ವಾಳ, ಬೆಳ್ತಂಗಡಿ ಠಾಣಾ ವ್ಯಾಪ್ತಿಗಳಲ್ಲಿ ಸೇರಿದಂತೆ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನ ವಿಧಿಸಲಾಗಿದೆ.




