ದೇಶಮಂಗಲ: ದೇಶಮಂಗಲದ ಪವಿತ್ರ ಶ್ರೀ ಶಂಕರನಾರಾಯಣ ಕುಟ್ಟಿಚಾತ ದೇವಸ್ಥಾನದ ಜೀರ್ಣೋದ್ಧಾರ ಮಹಾಕಾರ್ಯದ ಅಂಗವಾಗಿ, ಜೀರ್ಣೋದ್ಧಾರದ ಸಮಗ್ರ ಮಾಹಿತಿ, ಯೋಜನೆಗಳು ಹಾಗೂ ಭಕ್ತಾದಿಗಳ ಸಹಭಾಗಿತ್ವದ ವಿವರಗಳನ್ನು ಒಳಗೊಂಡ ವಿಜ್ಞಾಪನಾ ಪತ್ರಿಕೆಯ ಬಿಡುಗಡೆ ಸಮಾರಂಭವು 2026ರ ಜೂನ್ 14ರಂದು ಭಾನುವಾರ ಸಂಜೆ 4.00 ಗಂಟೆಗೆ ಶ್ರೀ ಕ್ಷೇತ್ರದಲ್ಲಿ ನಡೆಯಲಿದೆ.
ಶ್ರೀ ಕ್ಷೇತ್ರದ ತಂತ್ರಿವರ್ಯರು, ಪರಮ ಸಂರಕ್ಷಕರು ಹಾಗೂ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಅಸ್ರರವರ ದಿವ್ಯ ಸಾನ್ನಿಧ್ಯದಲ್ಲಿ, ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನಂ, ಶ್ರೀಮದ್ ಎಡನೀರು ಮಠದ ಪೀಠಾಧೀಶ್ವರರಾದ ಪರಮಪೂಜ್ಯ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಯವರು ವಿಜ್ಞಾಪನಾ ಪತ್ರಿಕೆಯನ್ನು ಅಮೃತ ಹಸ್ತದಿಂದ ಬಿಡುಗಡೆಗೊಳಿಸಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾದ ಶ್ರೀ ಕೆ. ರವೀಂದ್ರ ಆಳ್ವ, ಕೋಟೆಕುಂಜ – ಕಂಬಾರು ವಹಿಸಲಿದ್ದಾರೆ.
ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಪುಣ್ಯಕಾರ್ಯಕ್ಕಾಗಿ ಭಕ್ತಾದಿಗಳಿಂದ ಮುಷ್ಟಿಕಾಣಿಕೆ ಸಮರ್ಪಣೆ, ದೇಣಿಗೆ ವಾಗ್ದಾನ ಹಾಗೂ ವಿವಿಧ ರೀತಿಯ ಸೇವಾ ಸಮರ್ಪಣೆಗಳು ನಡೆಯಲಿವೆ.
ದೇವಾಲಯದ ಜೀರ್ಣೋದ್ಧಾರವು ಧಾರ್ಮಿಕ ಪರಂಪರೆ, ಸಂಸ್ಕೃತಿ ಹಾಗೂ ಭಕ್ತಿ ಸಂಪ್ರದಾಯದ ಸಂರಕ್ಷಣೆ ಮತ್ತು ಪುನರುಜ್ಜೀವನದ ಮಹತ್ವದ ಕಾರ್ಯವಾಗಿರುವುದರಿಂದ, ಸದ್ಭಕ್ತ ಬಂಧುಗಳು, ಊರ-ಪರವೂರಿನ ಎಲ್ಲಾ ಭಜನಾ ಸಂಘಗಳ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತನು–ಮನ–ಧನಗಳಿಂದ ಸಹಕರಿಸುವಂತೆ ಜೀರ್ಣೋದ್ಧಾರ ಸಮಿತಿಯು ಪ್ರಕಟಣೆಯಲ್ಲಿ ವಿನಂತಿಸಿದೆ.




