- ಕೊಲ್ಯ ಸೋಮೇಶ್ವರದ ಶಾರದಾಮಂದಿರದಲ್ಲಿ ಯಕ್ಷಗಾನ ನೃತ್ಯ ಪ್ರಾತ್ಯಕ್ಷಿಕೆ
ಉಳ್ಳಾಲ: ಯಕ್ಷಗಾನದ ಶಿಕ್ಷಣ ಕೇವಲ ನಾಟ್ಯ ಹೆಜ್ಜೆಗಳನ್ನು ಕಲಿಸುವ ಕೇಂದ್ರಗಳಷ್ಟೇ ಆಗದೆ ಯಕ್ಷಗಾನ ಪ್ರಸಂಗ ಸಾಹಿತ್ಯ, ಪುರಾಣ ಕತೆಗಳ ಪರಿಚಯ, ಶ್ರುತಿ, ತಾಳಜ್ಞಾನ ಮತ್ತು ಭಾಷೆ, ರಂಗದ ರಸಜ್ಞಾನ ಬಳಕೆಯ ಸೌಂದರ್ಯವನ್ನೂ ಒಳಗೊಳ್ಳಬೇಕು. ಮೊದಲು ಪೂರ್ವರಂಗವೇ ಯಕ್ಷಶಿಕ್ಷಣಕ್ಕೆ ಆಧಾರವಾಗಿದ್ದು ರಂಗದಲ್ಲಿಯೇ ಎಳೆಯ ಹುಡುಗರು ಕಲಾವಿದರಾಗಿ ರೂಪುಗೊಳ್ಳುತ್ತಿದ್ದರು. ಸಮಗ್ರ ಯಕ್ಷಶಿಕ್ಷಣದ ಈ ಪ್ರಜ್ಞೆಯನ್ನು ಇಟ್ಟುಕೊಂಡ ಯಕ್ಷಗಾನ ತರಬೇತಿ ತರಗತಿಗಳು ವ್ಯಾಪಕಗೊಳ್ಳಲಿ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಧನಂಜಯ ಕುಂಬ್ಳೆ ಹೇಳಿದರು.
ಅವರು ಭಾನುವಾರ ಕೊಲ್ಯ ಸೋಮೇಶ್ವರದ ಶ್ರೀ ಶಾರದಾ ಸೇವಾ ಟ್ರಸ್ಟ್ , ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಮತ್ತು ಯಕ್ಷದ್ರುವ ಪಟ್ಲ ಫೌಂಡೇಶನ್ ಹವ್ಯಾಸಿ ಘಟಕದ ಆಶ್ರಯದಲ್ಲಿ ಶಾರದಾ ಮಂದಿರ ಕೊಲ್ಯ ಇಲ್ಲಿ ಯಕ್ಷಗಾನ ತರಗತಿ ಮತ್ತು ಯಕ್ಷಗಾನ ನೃತ್ಯ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಮಾತನಾಡಿದರು.
ಆಶಯ ಭಾಷಣ ಮಾಡಿದ ಯಕ್ಷದ್ರುವ ಪಟ್ಲ ಹವ್ಯಾಸಿ ಬಳಗದ ಪ್ರಧಾನ ಕಾರ್ಯದರ್ಶಿ ವಿನಯ ಆಚಾರ್ ಮಾತನಾಡಿ ಯಕ್ಷಗಾನ ಪಾಮರರು ಬೆಳೆಸಿದ ಕಲೆ. ಪಂಡಿತರ ಪ್ರವೇಶ ಆದ ಬಳಿಕ ಅದರ ವಾಚಿಕ ವಿಶೇಷವಾಗಿ ಬೆಳೆದು ತಾಳಮದ್ದಳೆ ಜನಪ್ರಿಯವಾಯಿತು ಎಂದರು
ಸಮಾರಂಭದಲ್ಲಿ ಶ್ರೀ ಶಾರದಾ ಸೇವಾ ಟ್ರಸ್ಟ್ ಅಧ್ಯಕ್ಷ ಮೋಹನ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಕಾರ್ಯಕ್ರಮ ಸಂಯೋಜಕರಾದ ಕಲಾವಿದ ತೋನ್ಸೆ ಪುಷ್ಕಳಕುಮಾರ್, ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಬಂಗೇರ, ಮಾರ್ಗದರ್ಶಕ ಪ್ರಕಾಶ್ ಎಚ್, ಪಟ್ಲ ಹವ್ಯಾಸಿ ಬಳಗದ ರಾಜಾರಾಮ ಹೊಳ್ಳ, ಯಕ್ಷ ಗುರು ಜಿತೇಶ್ ಕುಲಾಲ್ ಉಪಸ್ಥಿತರಿದ್ದರು. ತೋನ್ಸೆ ಪುಷ್ಕಳ ಕುಮಾರ್ ಸ್ವಾಗತಿಸಿದರು. ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಮಾರ್ ಕೆ.ಎಸ್
ವಂದಿಸಿದರು.
ಆದಿತ್ಯ ಅಂಬಲಪಾಡಿ ಇವರಿಂದ ಯಕ್ಷಗಾನ ನೃತ್ಯ ಪ್ರಾತ್ಯಕ್ಷಿಕೆ ನಡೆಯಿತು.ಬಳಿಕ ರಾಜಾರಾಮ ಹೊಳ್ಳ, ಭಾಸ್ಕರ್ ರೈ ಕುಕ್ಕುವಳ್ಳಿ, ವಿನಯ್ ಆಚಾರ್, ಗಣೇಶ್ ಕುಂಜತ್ತೂರು, ಹರಿಶ್ಚಂದ್ರ ನಾಯ್ಗ , ವರುಣ್ ಹೆಬ್ಬಾರ್, ವರುಣ್ ಆಚಾರ್ಯ ಇವರಿಂದ ಶರಸೇತು ಬಂಧನ ತಾಳಮದ್ದಳೆ ನಡೆಯಿತು.






