- ಬೆಳ್ಳಂಬೆಳಗ್ಗೆ ಮಾದಕ ವಸ್ತು ಸಾಗಾಟದ ವೇಳೆಯೇ ಅಪಘಾತ: ಕಾರಿನಿಂದ ಎಂಡಿಎಂಎ ಸಹಿತ ಉಪಕರಣ ತಕ್ಷಣವೇ ಕಾಣೆ!
ಕುಂಬಳೆ: ಇಲ್ಲಿನ ಶಾಂತಿಪಳ್ಳ ತಿರುವಿನಲ್ಲಿ ನಿನ್ನೆ ಬೆಳಿಗ್ಗೆ ಬಸ್ ಮತ್ತು ಕಾರು ಪರಸ್ಪರ ಡಿಕ್ಕಿಯಾಗಿ ಸಂಭವಿಸಿದ ಅಫಘಾತದಲ್ಲಿ ನಜ್ಜುಗುಜ್ಜಾದ ಕಾರು ಮಾದಕ ವಸ್ತು ಎಂಡಿಎಂಎ ಸಾಗಾಟಕ್ಕೆ ಬಳಸುವ ಕಾರೆಂದು ಬೆಳಕಿಗೆ ಬಂದಿದೆ. ಹಲವು ಎಂಡಿಎಂಎ ಸಾಗಾಟ ಪ್ರಕರಣಗಳಲ್ಲಿ ಆರೋಪಿಯಾದ ಕಾಸರಗೋಡು ಅಣಂಗೂರಿನ ಕಬೀರ್ ಎಂಬಾತನ ಕಾರು ಇದೆಂದು ಗುರುತಿಸಲಾಗಿದೆ.
ಕೆ. ಎಲ್. 14 ಎಚ್ 6644 ನೋಂದಾವಣೆ ನಂಬರಿನ ಕಾರಿಗೆ ಫಿಟ್ನೆಸ್ ಸಹಿತ ಯಾವುದೇ ದಾಖಲೆ ಪತ್ರಗಳು ಸಮರ್ಪಕವಾಗಿಲ್ಲ. ಅಫಘಾತದಲ್ಲಿ ನಜ್ಜುಗುಜ್ಜಾದ ಕಾರನ್ನು ಕುಂಬಳೆ ಪೊಲೀಸರು ವಶಕ್ಕೆ ತೆಗೆದು ಠಾಣೆಗೆ ಕೊಂಡೊಯ್ದಿದ್ದಾರೆ.

ನಿನ್ನೆ ಬೆಳಿಗ್ಗೆ ಸುಮಾರು ಎಂಟೂವರೆ ಗಂಟೆ ವೇಳೆಗೆ ಕುಂಬಳೆ ಭಾಗದಿಂದ ಬದಿಯಡ್ಕ ಭಾಗಕ್ಕೆ ತೆರಳುತ್ತಿದ್ದ ಕಾರು ಮತ್ತು ಕುಂಬಳೆಗೆ ಬರುತ್ತಿದ್ದ ಸಿಎನ್ಎನ್ ಬಸ್ ಪರಸ್ಪರ ಬಡಿದು ಅಪಘಾತ ಸಂಭವಿಸಿತ್ತು
ಘಟನೆಯಲ್ಲಿ ಕಾರಿನಲ್ಲಿದ್ದ ನಾಲ್ವರು ಮತ್ತು ಬಸ್ ಪ್ರಯಾಣಿಕರಾದ ಎಂಟು ಮಂದಿ ಸೇರಿ ಒಟ್ಟು 12ಮಂದಿ ಗಾಯಗೊಂಡಿದ್ದರು.
ಅಪಘಾತಕ್ಕೆ ಒಳಗಾದ ಕಾರಿನಲ್ಲಿಷ ಎಂಡಿಎಂಎ ಹಾಗೂ ಅದರ ಮಾರಾಟಕ್ಕೆ ಬಳಸುವ ಉಪಕರಣ ಇದ್ದುವೆಂದು ಸ್ಥಳೀಯರು ತಿಳಿಸಿದ್ದಾರೆ. ಆದರೆ ಅಪಘಾತದಲ್ಲಿ ಗಾಯಗೊಂಡವರನ್ನು ರಕ್ಷಿಸಿ ಆಸ್ಪತ್ರೆಗೆ ಸೇರಿಸುವ ಭರದಲ್ಲಿ ಪೊಲೀಸರಿಗೆ ಇದನ್ನು ಗಮನಿಸಲಿಕ್ಕಾಗಿರಲಿಲ್ಲ. ಇದೇ ವೇಳೆ ಕಾರಿನಿಂದ ಅದನ್ನು ಯಾರೋ ಸುರಕ್ಷಿತವಾಗಿ ಎಗರಿಸಿರಬೇಕೆಂದು ಶಂಕಿಸಲಾಗಿದೆ. ಮುಂಜಾನೆ ವೇಳೆಗೆ ಎಂಡಿಎಂಎ ಮಾರಾಟಕ್ಕೆ ಹೊರಟ ಗೆಳೆರರ ತಂಡ ಇದೆಂದು ಅಂದಾಜಿಸಲಾಗಿದೆ.
ಅಪಘಾತದ ವೇಳೆ ಕಾರಿನಲ್ಲಿದ್ದ ಮಾಲಿಕ್, ತಾಜಿದ್, ಕಬೀರ್, ಸಿದಾನ್ ಎಂಬವರು ಗಾಯಗೊಂಡಿದ್ದು ಈ ಪೖಕಿ ಸಿದಾನ್ ಚಿಂತಾಜನಕ ಸ್ಥಿತಿಯಲ್ಲಿ ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದು, ಉಳಿದವರು ಚೇತರಿಸಿದ್ದಾರೆನ್ನಲಾಗಿದೆ.






