ಬೆಂಗಳೂರು: ನಾಡಿನೆಲ್ಲೆಡೆಗೆ ವೃಕ್ಷಮಾತೆ ಎಂದೇ ಪರಿಚಿತರಾಗಿ ಖ್ಯಾತಿ ಪಡೆದಿದ್ದ ಸಾಲುಮರದ ತಿಮ್ಮಕ್ಕ (114)ಅವರು ವಯೋಸಹಜ ಖಾಯಿಲೆಯಿಂದ ಶುಕ್ರವಾರ ಬೆಂಗಳೂರಿನ ಜಯನಗರದಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ನಿಧನರಾದರು.
ಶತಾಯುಷಿಯಾದ ಅವರಿಗೆ 114 ವರ್ಷ ವಯಸ್ಸಾಗಿತ್ತು.

ಬೆಂಗಳೂರು ದಕ್ಷಿಣ ಜಿಲ್ಲೆಯ ಮಾಗಡಿ ತಾಲೂಕಿನ ಹುಲಿಕಲ್ ಗ್ರಾಮದವರಾದ ಅವರು ಸಾಕುಮಗ, ಪರಿಸರ ಪ್ರೇಮಿ ಉಮೇಶ್ ಬಳ್ಳೂರು ಸಹಿತ ಅಪಾರ ವೃಕ್ಷಪ್ರೇಮಿಗಳನ್ನಗಲಿದ್ದಾರೆ.
ಅವರ ಆರೋಗ್ಯದಲ್ಲಿ ಇತ್ತೀಚಿಗೆ ನಿರಂತರ ಏರುಪೇರಾಗಿತ್ತು. ಇದರಂತೆ ಎರಡು ದಿನಗಳ ಹಿಂದೆ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ಸೇರಿಸಲಾಗಿತ್ತು.
ತಿಮ್ಮಕ್ಕ-ಚಿಕ್ಕಯ್ಯ ದಂಪತಿಗೆ ಮಕ್ಕಳಿರಲಿಲ್ಲ. ಈ ಕೊರಗು ಮರೆಯಲು ಅವರು ತಮ್ಮೂರಲ್ಲಿ ರಸ್ತೆ ಬದಿ ಸಾಲು ಸಾಲಾಗಿ ಮರಗಳನ್ನು ನೆಟ್ಟು, ಮಕ್ಕಳಂತೆ ಪೋಷಿಸಿ ಬೆಳೆಸಿದರು. ಇದರಿಂದ ಸಾಲು ಮರದ ತಿಮ್ಮಕ್ಕನೆಂದೇ ಹೆಸರು ಪಡೆದ ಅವರು ನಾಡಿಗೆ ಮಾದರಿಯಾಗಿ ದೇಶಕ್ಕೆ ಕರ್ನಾಟಕದ ಆದರ್ಶ ವನಿತೆಯಾದರು.
ಗಿಡನೆಟ್ಟು, ಮಕ್ಕಳಂತೆ ಪೋಷಿಸಿ, ನೀರೆರದು ಬೆಳೆಸಿದ ಅವರ ಸಾಧನೆಗೆ 2019ರಲ್ಲಿ ಭಾರತ ಸರಕಾರ ದೇಶದ ಅತ್ಯುನ್ನತ ಗೌರವವಾದ ಪದ್ಮಶ್ರೀ ನೀಡಿ ಗೌರವಿಸಿತ್ತು. ಹಲವು ಅಂತರ್ ರಾಷ್ಟ್ರೀಯ, ರಾಷ್ಟ್ರೀಯ ಪ್ರಶಸ್ತಿ ಅವರಿಗೆ ಒಲಿದಿತ್ತು.
ಭೂಮಿಗೆ ನೆರಳೊಡ್ಡುವ ಮರಗಳನ್ನು ನೆಟ್ಟು ವೃಕ್ಷಮಾತೆ ಎನಿಸಿಕೊಂಡ ಸಾಲುಮಯದ ತಿಮ್ಮಕ್ಕ ವಿಯೋಗಕ್ಕೆ ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ ವಿಷಾದಗಳೊಂದಿಗೆ ಕಂಬನಿ ಸೂಚಿಸಿದ್ದಾರೆ.








