ಉಳ್ಳಾಲ : ಇಲ್ಲಿನ ಕುಂಪಲದಲ್ಲಿ ಅಂಗಡಿ ವರಾಂಡದಲ್ಲಿ ಮಲಗಿದ್ದ ವ್ಯಕ್ತಿಯೊಬ್ಬರನ್ನು ಬೀದಿ ನಾಯಿ ಕಚ್ಚಿಕೊಂದ ದಾರುಣ ಘಟನೆ ನಡೆದಿದೆ. ಬೀದಿನಾಯಿಗಳ ಹಾವಳಿಯ ತಡೆಗೆ ಸುಪ್ರೀಂ ಕೋರ್ಟು ಆದೇಶಿಸಿದ ಬೆನ್ನಲ್ಲೇ ನಡೆದ ಈ ಘಟನೆ ನಾಡನ್ನೇ ಬೆಚ್ಚಿ ಬೀಳಿಸಿದೆ.

ಕುಂಪ ನಿವಾಸಿ ದಯಾನಂದ (60)ಎಂಬವರು ಮೃತ ವ್ಯಕ್ತಿಯಾಗಿದ್ದಾರೆ.
ಮದ್ಯಪಾನಿಯಾಗಿದ್ದ ಇವರು ಗುರುವಾರ ರಾತ್ರಿ ಕುಂಪಲದ ಅಂಗಡಿ ವರಾಂಡದಲ್ಲಿ ಮಲಗಿದ್ದರು. ಶುಕ್ರವಾರ ಬೆಳಗ್ಗೆ ಬೀದಿ ನಾಯಿಯೊಂದು ಇವರನ್ನು ಆಕ್ರಮಿಸಿದೆ. ನಾಯಿಯಿಂದ ತಪ್ಪಿಸಿಕೊಳ್ಳಲು ಎದ್ದು ಓಡಿದರೂ ಬಿಡದೇ ನಾಯಿ ಆಕ್ರಮಿಸಿ ಅವರನ್ನು ಕೊಂದೇ ಬಿಟ್ಟಿದೆ. ದಯಾನಂದರ ದೇಹದ ಮೇಲೆಲ್ಲಾ ಗಾಯದ ಗುರುತುಗಳಿದ್ದು, ಅಂಗಾಂಗ ಛಿದ್ರವಾಗಿದೆ.
ಆರಂಭದಲ್ಲಿ ಮೃತದೇಹ ಪತ್ತೆಯಾದಾಗ ಸ್ಥಳೀಯರು ಇದೊಂದು ಕೊಲೆ ಎಂದು ನಂಬಿದ್ದರು. ಹಾಗೆಂದೇ ಪೊಲೀಸರಿಗೆ ಮಾಹಿತಿ ಇತ್ತಿದ್ದರು. ಆದರೆ ವಿಧಿ ವಿಜ್ಞಾನ ತಜ್ಞರು ಭೇಟಿ ಇತ್ತು ಪರಿಶೀಲಿಸಿ ನಾಯಿ ಆಕ್ರಮಢದಿಂದ ಸತ್ತಿರುವುದಾಗಿ ದೃಢಗೊಳಿಸಿದರು. ನಾಯಿಗಾಗಿ ಹುಡುಕಾಟ ಮುಂದುವರಿದಿದೆ.







