ದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿರುವ ಬೀದಿ ನಾಯಿಗಳನ್ನು ಅವುಗಳಿಗೆಂದು ನಿಗದಿ ಪಡಿಸಿದ ಜಾಗಕ್ಕೆ ಸ್ಥಳಾಂತರಿಸಬೇಕೆಂದು ಸುಪ್ರೀಂಕೋರ್ಟ್ ಎಲ್ಲಾ ರಾಜ್ಯ ಸರಕಾರಕ್ಕೂ ಶುಕ್ರವಾರ ಆದೇಶಿಸಿದೆ. ಶೖಕ್ಷಣಿಕ ಕೇಂದ್ರಗಳು ಮತ್ತು ಆಸ್ಪತ್ರೆಗಳಂತಹ ಸಾಂಸ್ಥಿಕ ಪ್ರದೇಶದಲ್ಲಿ ನಾಯಿ ಕಡಿತ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟು ಸ್ವಯಂ ಪ್ರಕರಣ ಪರಿಗಣಿಸಿ ಈ ಆದೇಶವಿತ್ತಿದೆ.

ನ್ಯಾಯಮೂರ್ತಿಗಳಾದ ವಿಕ್ರಂನಾಥ್, ಸಂದೀಪ್ ಮೆಹ್ತಾ, ಎನ್. ವಿ. ಅಂಜಾರಿಯ ಅವರ ವಿಶೇಷ ಪೀಠ ಬೀದಿ ನಾಯಿಗಳ ಆಕ್ರಮಣದ ಅನೇಕ ನಿದರ್ಶನಗಳನ್ನು ನೀಡಿದೆ. ಜತೆಗೆ ಹೆದ್ದಾರಿ ಮತ್ತು ಎಕ್ಸ್ ಪ್ರೆಸ್ ಹೖವೇಗಳಲ್ಲಿ ದನ ಸಹಿತ ಜಾನುವಾರುಗಳನ್ನು ತೆರವುಗೊಳಿಸಿ ಅವನ್ನು ನಿಗದಿತ ಆಶ್ರಯತಾಣಗಳಿಗೆ ಸ್ಥಳಾಂತರಿಸಲು ಅಧಿಕಾರಿಗಳಿಗೆ ಆದೇಶಿಸಿದೆ.

ಸರಕಾರಿ ಮತ್ತು ಖಾಸಗಿ ಶಿಕ್ಷಣ ಸಂಸ್ಥೆ ಆವರಣಕ್ಕೆ ಬೀದಿ ನಾಯಿಗಳು ಪ್ರವೇಶಿಸುವುದನ್ನು ತಡೆಯುವ ಮೂಲಕ ನಾಯಿ ಕಡಿತ ಪ್ರಕರಣಗಳನ್ನು ತಡೆಗಟ್ಟಬೇಕು. ಅಲ್ಲಲ್ಲಿಂದ ಹಿಡಿದ ಬೀದಿ ನಾಯಿಗಳನ್ನು ಮತ್ತೆ ಸಾರ್ವಜನಿಕ ಸ್ಥಳಕ್ಕೆ ಬಿಡಬಾರದೆಂದು ಆದೇಶ ಸೂಚಿಸಿದೆ.
ಶಾಲಾ ಪರಿಸರ, ಸರಕಾರಿ, ಖಾಸಗಿ ಆಸ್ಪತ್ರೆ, ಬಸ್ ನಿಲ್ದಾಣ, ರೖಲು ನಿಲ್ದಾಣ, ಕ್ರೀಡಾ, ವಾಣಿಜ್ಯ ಮಳಿಗೆ ಮೊದಲಾದ ಸಾರ್ವಜನಿಕ ಜಾಗಗಳಿಂದ ಬೀದಿ ನಾಯಿ ನಿರ್ಮೂಲನಕ್ಕೆ ಸಂಬಂಧಪಟ್ಟವರು ಕ್ರಮ ಕೖಗೊಳ್ಳಬೇಕು ಮತ್ತು ಶಾಲಾ ಪರಿಸರದಲ್ಲಿ ನಿತ್ಯ ತಪಾಸಣೆ ನಡೆಯಬೇಕೆಂದು ಸುಪ್ರೀಂ ಕೋರ್ಟು ತಿಳಿಸಿದೆ. ಅಲೆದಾಡುವ ಸಾರ್ವಜನಿಕ ಬೀದಿ ನಾಯಿಗಳನ್ನು ಸೆರೆ ಹಿಡಿದು ಸಂತಾನಹರಣ ನಡೆಸಿ ಅವುಗಳನ್ನು ಷಲ್ಟರ್ ಹೋಂ ಗಳಲ್ಲಿಡಬೇಕೆಂದು ಕೋರ್ಟು ನಿರ್ದೇಶಿಸಿದೆ.








