ಯಕ್ಷಗಾನ – ಕುರಿಯ ಭಾಗವತರ ಮನೆಗೆ ಕ. ಸಾ. ಪ ಗಡಿನಾಡ ಘಟಕದ ನಡೆ : ರಂಗನಡೆಯರಿತ ಭಾಗವತರಿಗೆ ಮನೆಯಂಗಳದಲ್ಲಿ ಮಮತೆಯ ಅಭಿನಂದನೆ

by Narayan Chambaltimar

ಉಪ್ಪಳ : ಕನ್ನಡ ಭಾಷೆ,ಸಾಹಿತ್ಯ, ಸಂಸ್ಕೃತಿಗಳಿಗೆ ಅಮೂಲ್ಯ ಕೊಡುಗೆ ನೀಡಿದ ಹಿರಿಯ ಸಾಧಕರನ್ನು ಅವರ ಮನೆಯಂಗಳದಲ್ಲಿ ಗೌರವಿಸುವ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ‘ಸಾಹಿತ್ಯ ಪರಿಷತ್ತಿನ ನಡಿಗೆ ಹಿರಿಯ ಸಾಧಕರ ಕಡೆಗೆ’ಎಂಬ ಕಾರ್ಯಕ್ರಮದಂಗವಾಗಿ ಹಿರಿಯ ಯಕ್ಷಗಾನ
ಭಾಗವತ,ಕುರುಡಪದವು ಪ್ರೌಢಶಾಲಾ ಪ್ರಬಂಧಕ ಕುರಿಯ ಗಣಪತಿ ಶಾಸ್ತ್ರಿ ಅವರನ್ನು ಕುರುಡಪದವಿನ ಬಳಿಯ ಕುರಿಯದಲ್ಲಿರುವ ಅವರ ನಿವಾಸದಲ್ಲಿ ಅಭಿನಂದಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕದ ಅಧ್ಯಕ್ಷ ಡಾ.ಜಯಪ್ರಕಾಶ ನಾರಾಯಣ ತೊಟ್ಚೆತ್ತೋಡಿ ಅವರು ಗಣಪತಿ ಶಾಸ್ತ್ರಿ ಅವರನ್ನು ಶಾಲು ಹೊದೆಸಿ ಅಭಿನಂದಿಸಿದರು. ಮೀಯಪದವು ವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯ ನಿವೃತ್ತ ಮುಖ್ಯಶಿಕ್ಷಕ ರಾಜಾರಾಮ ರಾವ್ .ಟಿ ಮತ್ತು ಕರ್ನಾಟಕ ಯಕ್ಷಗಾನ ಅಕಾಡೆಮಿಯ ಮಾಜಿ ಸದಸ್ಯ ಯೋಗೀಶ ರಾವ್ ಚಿಗುರುಪಾದೆ ಅಭಿನಂದನಾ ಭಾಷಣ ಮಾಡಿದರು.

ಕುರಿಯ ಮನೆತನ ಯಕ್ಷಗಾನಕ್ಕೊಂದು ಹೆಗ್ಗುರುತು. ಮಹಾನ್ ಕಲಾವಿದರೆಲ್ಲ ಈ ಮನೆಯಿಂದಲೇ ಕಲಿತು ಪಳಗಿದವರು. ಕುರಿಯ ಗಣಪತಿ ಶಾಸ್ತ್ರಿಗಳು ಉತ್ತಮ ವೇಷಧಾರಿ ಹಾಗೂ ಪರಿಪೂರ್ಣ ರಂಗ ನಡೆಯರಿತ ಸಮರ್ಥ ಭಾಗವತರು. ಹಿಮ್ಮೇಳದ ಸಮನ್ವಯದೊಂದಿಗೆ ಮುಮ್ಮೇಳದ ಯಶಸ್ವಿ ಪ್ರದರ್ಶನಕ್ಕೆ ಕಾಳಜಿವಹಿಸುವ ಭಾಗವತರಾದ ಇವರು ಯಕ್ಷಗಾನದ ಸರ್ವಾಂಗಗಳೂ ದೋಷರಹಿತವಾಗಿರಬೇಕೆಂದು ಬಯಸುತ್ತಿರುವವರು ಎಂದು ರಾಜಾರಾಮ ರಾವ್ ಹೇಳಿದರು.

30ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ದುಡಿಯುತ್ತಿರುವ ಕುರಿಯ ಗಣಪತಿ ಶಾಸ್ತ್ರಿಗಳು ಪ್ರತಿ ಪ್ರದರ್ಶನವೂ ಯಶಸ್ವಿ ಯಾಗಬೇಕೆಂದು ಬಯಸುವವರು. ಯಕ್ಷಗಾನವು ಒಂದು ತಂಡ ಪ್ರಯತ್ನವೆಂಬ ಭಾವ ಅವರಲ್ಲಿತ್ತು. ಅವರಿಗೆ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಬಂದುದಕ್ಕೆ ಧನ್ಯತೆ ಇದೆ. ಅವರ ಹಾಡುಗಳು ಧ್ವನಿಮುದ್ರಿಕೆಯಾಗಿ ದಾಖಲಾತಿ ಯಾಗಬೇಕಿತ್ತು ಎಂದು
ಯೋಗೀಶ ರಾವ್ ಹೇಳಿದರು.
ಕುರುಡಪದವು ವಿಠಲಶಾಸ್ತ್ರಿ ಸ್ಮಾರಕ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಲೋಹಿತ್ ಭಂಡಾರಿ,ಆನೆಕಲ್ಲು ಶಾಲೆಯ ನಿವೃತ್ತ ಶಿಕ್ಷಕಿ ಶ್ರೀಕುಮಾರಿ ಶುಭಹಾರೈಸಿದರು.
ಧರ್ಮತ್ತಡ್ಕ ಎ .ಯು. ಪಿ ಶಾಲಾ ಶಿಕ್ಷಕ ಶ್ರೀರಾಮ, ಶ್ಯಾಮಲಾ ಶಾಸ್ತ್ರಿ ಉಪಸ್ಥಿತರಿದ್ದರು. ಗಣಪತಿ ಶಾಸ್ತ್ರಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ಕ.ಸಾ.ಪ ಗೌರವ ಕಾರ್ಯದರ್ಶಿ ಶೇಖರ ಶೆಟ್ಟಿ ಬಾಯಾರು ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ವಿಶಾಲಾಕ್ಷ ಪುತ್ರಕಳ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಮಹಾಬಲೇಶ್ವರ ಭಟ್ ವಂದಿಸಿದರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00