ಮಂಗಳೂರು: ತೆಂಕಣ ಯಕ್ಷಗಾನದ ಪ್ರಸಿದ್ಧ ಯಕ್ಷೋತ್ಸವಗಳಲ್ಲಿ ಒಂದಾದ ಪೊಳಲಿ ಯಕ್ಷೋತ್ಸವ ಈಗ ತ್ರಿಂಶತಿಯ ಸಂಭ್ರಮದಲ್ಲಿದೆ.
ಈ ಬಾರಿಯ ಪೊಳಲಿ ಯಕ್ಷೋತ್ಸವ ಸೆ. 27 ರಂದು ನಡೆಯಲಿದ್ದು, ತ್ರಿಂಶತಿ ಸಮಾರಂಭದ ಆಮಂತ್ರಣ ಪತ್ರಿಕೆ ಮತ್ತು ಯಕ್ಷೋತ್ಸವ ಬ್ರೌಷರ್ ಪೊಳಲಿ ಶ್ರೀರಾಜರಾಜೇಶ್ವರಿ ಕ್ಷೇತ್ರದಲ್ಲಿ ಇಂದು ಬಿಡುಗಡೆಗೊಂಡಿತು.

ಕ್ಷೇತ್ರದ ಅರ್ಚಕರಾದ ದೋಟ ಪರಮೇಶ್ವರ ಭಟ್ ಅವರು ಪ್ರಾರ್ಥನೆ ಸಲ್ಲಿಸಿ ಆಮಂತ್ರಣ ಬಿಡುಗಡೆ ಮಾಡಿದರು. ಪೊಳಲಿ ಶ್ರೀ ರಾಮಕೃಷ್ಣ ತಪೋವನದ ಶ್ರೀ ವಿವೇಕ
ಚೈತನ್ಯಾನಂದ ಸ್ವಾಮೀಜಿಯವರಿಗೆ ಮೊದಲ ಆಮಂತ್ರಣ ನೀಡುವ ಮೂಲಕ ಗೌರವಿಸಲಾಯಿತು. ಈ ಸಂದರ್ಭ ಆಯೋಜಕರನ್ನು ಅವರು ಪ್ರಸಾದ ಕಾಣಿಕೆ ನೀಡಿ ಹರಸಿದರು. ಪೊಳಲಿ ಯಕ್ಷೋತ್ಸವ ದ ಸಂಸ್ಥಾಪಕ ಆ. ನಾ. ಭ ಪೊಳಲಿ, ಸಂಚಾಲಕ ವೆಂಕಟೇಶ ನಾವಡ ಪೊಳಲಿ, ಸಂಯೋಜಕ ಬರ. ಜನಾರ್ಧನ ಅಮ್ಮುಂಜೆ ಮೊದಲಾದವರು ಉಪಸ್ಥಿತರಿದ್ದರು.

ಪೊಳಲಿ ಯಕ್ಷೋತ್ಸವವು ಸೆ. 27ರಂದು ಸಂಜೆ ಆರಂಭಗೊಂಡು ಮೊದಲಿಗೆ ಬಡಗು ತಿಟ್ಟು ಬಯಲಾಟ ಬಳಿಕ ಪ್ರಶಸ್ತಿ ಪ್ರದಾನ – ಸನ್ಮಾನ – ಸಂಸ್ಮರಣೆ -ಗೌರವಾರ್ಪಣೆಯೊಂದಿಗೆ ನಡೆಯಲಿದೆ. ರಾತ್ರಿ 10ರಿಂದ
ಮರುದಿನ ಬೆಳಿಗ್ಗೆ ಪ್ರಸಂಗ ಮುಗಿಯುವ ತನಕ ದಮಯಂತಿ ಪುನರ್ ಸ್ವಯಂವರ -ಜ್ವಾಲಾ ಪ್ರತಾಪ -ವೀರ ಬಬ್ರುವಾಹನ ಪ್ರಸಂಗದ ಪ್ರಸ್ತುತಿಯೊಂದಿಗೆ ನಡೆಯಲಿದೆ.









