- ದೇಲಂಪಾಡಿ: ಬಣ್ಣದ ಮಹಾಲಿಂಗ ಸ್ಮೃತಿಯಾನದ 8ನೇ ಸರಣಿಯಲ್ಲಿ ದೇಲಂಪಾಡಿ ಮಹಾಲಿಂಗ ಪಾಟಾಳಿ ಸಂಸ್ಮರಣೆ
- ಕಲಾವಿದ ಕುತ್ತಿಮುಂಡ ಕೃಷ್ಣಪ್ಪ ಗೌಡರಿಗೆ ಬಣ್ಣದ ಮಹಾಲಿಂಗ ಸ್ಮ್ರುತಿ ಪುರಸ್ಕಾರ: ಮದ್ದಳೆ ವಾದಕ ಅಪ್ಪಯ್ಯ ಮಣಿಯಾಣಿಗೆ ಮಹಾಲಿಂಗ ಪಾಟಾಳಿ -ಸೀತಮ್ಮ ಸ್ಮೃತಿ ಪುರಸ್ಕಾರ
ದೇಲಂಪಾಡಿ : ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಮಂದಿರದ ಕೀರಿಕ್ಕಾಡು ಸ್ಮಾರಕ ಸಭಾಭವನದಲ್ಲಿ ದೇಲಂಪಾಡಿ ಮಹಾಲಿಂಗ ಪಾಟಾಳಿಯವರ 19 ನೇ ವರ್ಷದ ಸಂಸ್ಮರಣೆ ಹಾಗೂ ತೆಂಕುತಿಟ್ಟಿನ ಯಕ್ಷದಿಗ್ಗಜ ಬಣ್ಣದ ಮಾಹಾಲಿಂಗರ ನೆನಪಿನಲ್ಲಿ ನಡೆಸುವ “ಬಣ್ಣದಜ್ಜನ ಸ್ಮೃತಿಯಾನ” ತಿಂಗಳ ಸರಣಿ ಕಾರ್ಯಕ್ರಮದ 8 ನೇ ಆವೃತ್ತಿಯು ನೆರವೇರಿತು. ಶ್ರೀ ಗೋಪಾಲಕೃಷ್ಣ ದೇವರ ಪೂಜೆ ಮತ್ತು ಭಗವದ್ಗೀತಾ ಪಾರಾಯಾಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು.

ಹಿರಿಯ ವೈದ್ಯ, ಸಾಹಿತಿ, ಅರ್ಥಧಾರಿ ಡಾ ರಮಾನಂದ ಬನಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮೊದಲಿಗೆ ಕಾರ್ಯಕ್ರಮದ ಸಂಘಟಕರೂ ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಗಳೂ ಆದ ನಾರಾಯಣ ದೇಲಂಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಮಾರಂಭದಲ್ಲಿ ಅನುಭವಿ ಕಲಾವಿದ, ವೇಷಧಾರಿ ಕುತ್ತಿಮುಂಡ ಕೃಷ್ಣಪ್ಪ ಗೌಡರಿಗೆ ಗೌರವಧನ ಸಹಿತ ಬಣ್ಣದ ಮಹಾಲಿಂಗ ಸ್ಮೃತಿ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಮಹಾಸೀತಾ ಪ್ರಕಾಶನದ ವತಿಯಿಂದ ಕೊಡಮಾಡುವ ದೇಲಂಪಾಡಿ ಮಹಾಲಿಂಗ ಪಾಟಾಳಿ ಸೀತಮ್ಮ ಸ್ಮೃತಿ ಪುರಸ್ಕಾರವನ್ನು ಹಿರಿಯ ಮದ್ದಳೆವಾದಕ ಮಂಡೆಕ್ಕೋಲು ಅಪ್ಪಯ್ಯ ಮಣಿಯಾಣಿಯವರಿಗೆ ಪ್ರದಾನ ಮಾಡಲಾಯಿತು.


ಕಲಾವಿದ, ಲೇಖಕ ನಾರಾಯಣ ತೋರಣಗಂಡಿಯವರು ಬಣ್ಣದ ಮಹಾಲಿಂಗರ ಸಂಸ್ಮರಣೆ ಮಾಡಿದರು. ಯಕ್ಷಗಾನ ಕಲಾವಿದರಾದ ದೇಲಂಪಾಡಿ ರಮಾನಂದ ರೈಯವರು ದೇಲಂಪಾಡಿ ಮಹಾಲಿಂಗ ಪಾಟಾಳಿಯವರ ಸಂಸ್ಮರಣೆಗೈದು ಮಹಾಲಿಂಗ ಪಾಟಾಳಿಯವರ ಅರ್ಥಗಾರಿಕೆ ಮತ್ತು ವೇಷಗಳ ಬಗ್ಗೆ ನವತಲೆಮಾರಿಗೆ ಮಾಹಿತಿಯನ್ನಿತ್ತರು. ನಿವೃತ್ತ ಮುಖ್ಯೋಪಾಧ್ಯಾಯರೂ ಕಲಾವಿದರೂ ಆದ ದೇಲಂಪಾಡಿ ರಾಮಣ್ಣ ಮಾಸ್ತರರು ಸನ್ಮಾನಿತರ ಅಭಿನಂದನೆಯನ್ನು ನಿರ್ವಹಿಸಿದರು. ಬಣ್ಣದ ಮಹಾಲಿಂಗ ಯಕ್ಷ ಪ್ರತಿಷ್ಠಾನದ ಉಪಾಧ್ಯಕ್ಷರೂ ನಿವೃತ್ತ ಯೋಧರೂ ಆದ ಸುಬ್ಬಪ್ಪ ಪಟ್ಟೆಯವರು ಧನ್ಯವಾದವನ್ನಿತ್ತರು. ಸಭಾ ಕಾರ್ಯಕ್ರಮದ ಬಳಿಕ ಯಕ್ಷಗುರುಗಳೂ ಕಲಾಸಂಘದ ಕಾರ್ಯದರ್ಶಿಯವರೂ ಆದ ವಿಶ್ವವಿನೋದ ಬನಾರಿಯವರ ಮಾರ್ಗದರ್ಶನದಲ್ಲಿ ಸಂಘದ ಮತ್ತು ಅತಿಥಿ ಕಲಾವಿದರ ಕೂಡುವಿಕೆಯಿಂದ ರಾಜಸೂಯಾಧ್ವರ ಯಕ್ಷಗಾನ ತಾಳಮದ್ದಳೆಯು ಜರಗಿತು.








