- ಪ್ರಶಾಂತಿ ವಿದ್ಯಾಕೇಂದ್ರ ಬಾಯಾರಿನಲ್ಲಿ ಆಟಿದ ವನಸ್ ಆಷಾಡದ ಸವಿಯೂಟ
ಬಾಯಾರು: ಆಷಾಡ ಮಾಸದ ಮಹತ್ವವನ್ನು ಎಳೆಯ ಮಕ್ಕಳಿಗಾಗಿ ತಿಳಿಸುವ ನಿಟ್ಟಿನಲ್ಲಿ ಆ. 4ರಂದು ಸೋಮವಾರ ಇಲ್ಲಿನ ಪ್ರಶಾಂತಿ ವಿದ್ಯಾ ಕೇಂದ್ರ ದ ರಜತಾಂಗಣ ದಲ್ಲಿ “ಆಟಿದ ವನಸ್”ಎಂಬ ಕಾರ್ಯಕ್ರಮವು ಜರಗಿತು. ಮುಖ್ಯ ಅತಿಥಿಯಾಗಿ ಪೈವಳಿಕೆ ಗ್ರಾಮ ಪಂಚಾಯತ್ ಸದಸ್ಯ ರಾದ ಮಂಜುನಾಥ ಭಾಗವಹಿಸಿ “ತುಳುನಾಡಿನ ಆಷಾಡ ಮಾಸದ ಮಹತ್ವ” ವನ್ನು ಮಕ್ಕಳಿಗೆ ತಿಳಿಸಿದರು. ಪ್ರಶಾಂತಿ ಸೇವಾ ಟ್ರಸ್ಟಿನ ಉಪಾಧ್ಯಕ್ಷರಾದ ಪೆಲತ್ತಡ್ಕರಾಮಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಆಷಾಡ ಮಾಸದ ಆಹಾರ ಪದ್ಧತಿಯ ವಿಶೇಷತೆ ಮತ್ತು ಆಚರಣೆಯ ನೈಜ ವೈಜ್ಞಾನಿಕ ವಿಚಾರವನ್ನು ವಿಧ್ಯಾರ್ಥಿಗಳಿಗೆ ತಿಳಿಸಿದರು. ಮ್ಯಾನೇಜಿಂಗ್ ಟ್ರಸ್ಟಿ, ಶಾಲಾ ವ್ಯವಸ್ಥಾಪಕರಾದ ಮಹಾಲಿಂಗ ಭಟ್, ಶಾಲಾ ಪ್ರಾಂಶುಪಾಲರಾದ ವಾಮನನ್, ವಸತಿನಿಲಯ ಪಾಲಕರಾದ ಕೃಷ್ಣ ಪ್ರಸಾದ್, ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ವೇಣುಗೋಪಾಲ ಶೆಟ್ಟಿ ಹಾಗೂ ಗಣ್ಯವ್ಯಕ್ತಿಗಳ ಜೊತೆ ಸತ್ಯಸಾಯಿ ಬಂಧುಗಳು ಉಪಸ್ಥಿತರಿದ್ದರು.

ಶಾಲಾ ವಿದ್ಯಾರ್ಥಿಗಳಾದ ಮಾ. ಮನ್ವಿತ್, ಮಾ. ಲವಿತ್ ಮತ್ತು ಮಾ. ವೈಭವ್ ಇವರ ತುಳುನಾಡಿನ ಜನಪದ ಹಾಡಿನಿಂದ ಪ್ರಾರಂಭವಾದ ಕಾರ್ಯಕ್ರಮಕ್ಕೆ ಪ್ರಾಂಶುಪಾಲ ವಾಮನನ್ ಸ್ವಾಗತಿಸಿದರು. CBSE ಕ್ಲಸ್ಟರ್ X ಖೋ ಖೋ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದ ವಿಧ್ಯಾರ್ಥಿಗಳಿಗೆ ಮತ್ತು ಸಹೋದಯ ಕಣ್ಣೂರಿನಲ್ಲಿ ನಡೆದ ಈಜು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಅತಿಥಿಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.

ಆಟಿಕಳಂಜ ಮಹತ್ವವನ್ನು ಸಾರುವ ಆಟಿಕಳಂಜ ನರ್ತನ ದ ಮೂಲಕ ಪ್ರಮುಖರು ವೇದಿಕೆಯಲ್ಲಿ ವಿದ್ಯಾರ್ಥಿಗಳಿಗೆ ಪ್ರದರ್ಶಿಸಿದ್ದು ಕಾರ್ಯಕ್ರಮದ ವಿಶೇಷತೆಯಾಯಿತು. ಮಕ್ಕಳು, ಪೋಷಕ ಬಂಧುಗಳು ತಯಾರಿಸಿ ತಂದ ಆಷಾಡ ಮಾಸದ ಆಹಾರ ತಿಂಡಿತಿನಿಸುಗಳನ್ನು ಪ್ರದರ್ಶನ ಮಾಡುವ ಮೂಲಕ ಮತ್ತು ಅದರ ವಿಶೇಷತೆಗಳನ್ನು ಹಂಚಿಕೊಂಡು ಹಲವು ಸಾಯಿ ಬಂಧುಗಳ ಜೊತೆಗೆ ಶಾಲಾ ಶಿಕ್ಷಕ ಶಿಕ್ಷಕೇತರ ಬಂಧುಗಳು ಭಾಗವಹಿಸಿದರು. ಒಟ್ಟಿನಲ್ಲಿ ತುಳುನಾಡಿನ ಸಂಸ್ಕೃತಿಯ ಸ್ಥೂಲ ಚಿತ್ರಣದಿಂದ ಕಾರ್ಯಕ್ರಮ ಮೇಳೈಸಿತು.








