- ಒಂದೂವರೆ ವರ್ಷಗಳಿಂದ ಮಲಯಾಳಂ ಸಿನಿಮಾದಿಂದ ಕಾಣೆಯಾದ ನಟ ಜಯರಾಂಗೆ ಅಷ್ಟೂ ಮುಖ್ಯವಾದ ಕಾಂತಾರ -1ರ ಪಾತ್ರವೇನು?
- ಮಲ್ಲು ಇಂಡಸ್ಟ್ರಿಯಿಂದ ಕಾಣೆಯಾಗಿ ತೆಲುಗು, ತಮಿಳು, ಕನ್ನಡದಲ್ಲಿ ಕಾಣಿಸಿ ಕ್ಯಾನ್ವಾಸ್ ವಿಸ್ತರಿಸಿದ ನಟನಿಗೆ ಕಾಂತಾರ ನೀಡಲಿದೆಯೇ ಬ್ರೇಕ್?
ಇತ್ತೀಚೆಗೆ ಮಲಯಾಳಂ ಚಿತ್ರಗಳಿಂದ ಕಾಣೆಯಾಗಿರುವ ನಟ ಜಯರಾಂ ಈಗ ಎಲ್ಲಿದ್ದಾರೆ?
ಅವರಿಗೆ ಚಿತ್ರಗಳಲ್ಲಿ ಅವಕಾಶಗಳೇ ಇಲ್ಲದೇ ಫೀಲ್ಡ್ ಔಟ್ ಆದ್ರಾ..?
ಹೊಸಬರ ಭರಾಟೆಯಲ್ಲಿ ಹಿರಿ ನಟರು ಕೊಚ್ಚಿ ಹೋದ್ರಾ..?
ಮುಂತಾದ ಸಾಲು, ಸಾಲು ಗಾಸಿಪ್ ಪ್ರಶ್ನೆಗಳಿಗೆ ಸ್ವತಃ ಜಯರಾಂ ಖುದ್ದು ಉತ್ತರಿಸಿದ್ದಾರೆ. ಆ ಉತ್ತರದಲ್ಲಿ ನಟನೆಂಬ ನೆಲೆಯ ಜಯರಾಂ ಕ್ಯಾನ್ವಾಸ್ ವಿಸ್ತರಣೆಯ ಕತೆ ಇದೆ.

ಮಲಯಾಳಂ ಸಿನಿಮಾ ರಂಗದಲ್ಲಿ ಅವಕಾಶಗಳು ಇಲ್ಲದೇನಲ್ಲ. ಆದರೆ ತನ್ನ ವಯಸ್ಸಿಗೆ, ಮನಸ್ಸಿಗೆ ನೂರು ಶೇಕಡಾ ಒಪ್ಪುವ ಕಥೆ/ಪಾತ್ರ ಸಿಗದೇ ಇದ್ದ ಕಾರಣ ನಾನು ದೊರೆತ ಅವಕಾಶ ತಿರಸ್ಕರಿಸಿದೆ. ಆದ್ದರಿಂದ ಕಳೆದ ಒಂದೂವರೆ ವರ್ಷದಿಂದೀಚೆಗೆ ಮಲಯಾಳ ಸಿನಿಮಮಾದಲ್ಲಿ ನಟಿಸಲೇ ಇಲ್ಲ. ಹಾಗೆಂದು ನಾನೇನೂ ಕೈಕಟ್ಟಿ ಮನೆಯಲ್ಲೇ ಕೂರಲಿಲ್ಲ. ನಿರುದ್ಯೋಗಿಯಾಗಲಿಲ್ಲ..
ಈ ಅವಧಿಯಲ್ಲಿ 12 ತೆಲುಗು ಚಿತ್ರಗಳಲ್ಲಿ ನಟಿಸಿದೆ. ತಮಿಳು, ಕನ್ನಡ ಚಿತ್ರಗಳಲ್ಲೂ ನಟಿಸಿದೆ.
ಒಂದವಕಾಶ ಇತ್ತವರು ಮತ್ತೆ,ಮತ್ತೆ ಪರಭಾಷಿಕನಾದ ನನಗೆ ಕರೆದು ಅವಕಾಶ ನೀಡುತ್ತಾರೆಂದರೆ ನಾನದನ್ನು “ಕ್ರೆಡಿಟ್ ” ಆಗಿ ಕಾಣುತ್ತೇನೆ. ಕನ್ನಡದಲ್ಲಿ ಶಿವರಾಜ್ ಕುಮಾರ್ ಜತೆ ಎರಡು ಚಿತ್ರಗಳಲ್ಲಿ ನಟಿಸಿದೆ. ಕಾಂತಾರ ಚಾಪ್ಟರ್ -1ರಲ್ಲಿ ಬಹುಮುಖ ಪ್ರತಿಭೆ ರಿಷಭ್ ಶೆಟ್ಟಿ ಜತೆ ನಟಿಸಿದೆ. ಇಂಥ ಅಮೂಲ್ಯ ಬ್ರಹ್ಮಾಂಡ ಚಿತ್ರದಲ್ಲಿ ನಟಿಸಲು ಕರೆದು ಅವಕಾಶ ನೀಡಿದ್ದು ಅಂಗೀಕಾರವೆಂದೇ ನಂಬುತ್ತೇನೆ. ಒಳ್ಳೆಯ ಪಾತ್ರಕ್ಕೆ ಸೂಕ್ತ ನಟ ಎಂದಲ್ಲವೇ ಅವರು ಕರೆಸುವುದು..? ಎನ್ನುವ ಮೂಲಕ ಕಾಂತಾರ ಚಾಪ್ಟರ್ -1 ಚಿತ್ರದಲ್ಲಿ ತಾನಿದ್ದೇನೆ ಎಂಬ ಸುಳಿವನ್ನು ಜಯರಾಂ ಮಾಧ್ಯಮದ ಮುಂದೆ ಹಂಚಿದ್ದಾರೆ.
ಆದರೆ ತನ್ನ ಪಾತ್ರವೇನು? ಸಹಿತ ಚಿತ್ರದ ಯಾವೊಂದು ಸುಳಿವನ್ನೂ ನೀಡಿಲ್ಲ.

ಇಷ್ಟಕ್ಕೂ ಕಾಂತಾರ ಅಧ್ಯಾಯ-1ರಲ್ಲಿ ಬೃಹತ್ ತಾರಾಗಣವಿದೆ. ಇದು ದೇಶ ಕಂಡ ಮತ್ತೊಂದು ಬಿಗ್ ಹಿಟ್ ಎಂಬ ಕುತೂಹಲ ಈಗಗಾಗಲೇ ಮೂಡಿದೆ. ಇದರಲ್ಲಿ ಯಾರೆಲ್ಲಾ ನಟಿಸಿದ್ದಾರೆಂಬುದೇ ಗೌಪ್ಯ. 250 ದಿನಗಳ ಚಿತ್ರೀಕರಣದಲ್ಲಿ ಪೂರ್ಣಗೊಂಡ ಶೂಟಿಂಗ್ ಕದಂಬರ ಕಾಲದ ಕಾಡಜನರ ಕತೆ ಹೇಳುತ್ತದೆ. ಅದರಲ್ಲಿ ನಂಬಿಕೆ ಮತ್ತು ಪ್ರಕೃತಿ ಅನುಸಂಧಾನದ ಬದುಕು ಇದೆಯಂತೆ. ಇಂಥ ಚಿತ್ರದಲ್ಲೊಂದು ಚಂದದ ಪಾತ್ರ ಮಾಡಿದ್ದೇನೆ ಎನ್ನುವುದೇ ಹಿರಿಯ ನಟ ಜಯರಾಂ ಹಿಗ್ಗು.







