- ಮುಷ್ಕರ ನಿರತ ಸಿಐಟಿಯು ಕಾರ್ಯಕರ್ತರ ಮೇಲೆ ಪೋಲೀಸ್ ದೌರ್ಜನ್ಯದ ಹಿಂಸೆ : ಜುಲೈ 10 ಗುರುವಾರ ಸೀತಾಂಗೋಳಿಯಲ್ಲಿ ಸಿಪಿಐಎಂ ಪ್ರತಿಭಟನೆ
ಕುಂಬಳೆ: ರಾಷ್ಟ್ರೀಯ ಕಾರ್ಮಿಕ ಮುಷ್ಕರದಂಗವಾಗಿ ಸೀತಾಂಗೋಳಿಯಲ್ಲಿ ಕೆಲಸ ಸ್ಥಗಿತ ಮುಷ್ಕರ ನಿರತರಾಗಿದ್ದ ಸಿಐಟಿಯು ಕಾರ್ಯಕರ್ತರನ್ನು ಸಂಚು ಹೂಡಿ, ಹೊಂಚು ಹಾಕಿ ಸುತ್ತುವರಿದು ಆಕ್ರಮಿಸಿ ಲಾಠಿಯೇಟಿನಿಂದ ಅಂಗ ಊನವಾಗುವಂತೆ ಆಕ್ರಮಿಸಿದ ಕುಂಬಳೆ ಪೋಲೀಸ್ ಠಾಣೆಯ ಪೋಲೀಸ್ ಸಿಬಂದಿಗಳ ಕಿರಾತಕ ಪ್ರವೃತ್ತಿ ಖಂಡಿಸಿ ಜುಲೈ 10ರಂದು ಸಂಜೆ ಸೀತಾಂಗೋಳಿಯಲ್ಲಿ ಸಿಪಿಐ ಎಂ ವತಿಯಿಂದ ಪ್ರತಿಭಟನಾ ಸಭೆ ಜರುಗಲಿದೆ.
ಸಭೆಯನ್ನುದ್ದೇಶಿಸಿ ಸಿಪಿಎಂ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯ ಸಾಬು ಅಬ್ರಹಾಂ ಮಾತನಾಡಲಿದ್ದಾರೆಂದು
ಸಿಪಿಎಂ ಪ್ರಕಟಣೆ ತಿಳಿಸಿದೆ.

ಸಂಯುಕ್ತ ಟ್ರೇಡ್ ಯೂನಿಯನ್ ನೇತೃತ್ವದಲ್ಲಿ ಜುಲೈ 9ರಂದು ರಾಷ್ಟ್ರ ವ್ಯಾಪಿ ನಡೆದ ಕೇಂದ್ರ ಸರಕಾರದ ಕಾರ್ಮಿಕರ ವಿರೋಧಿ ನೀತಿ ಖಂಡಿಸಿ ನಡೆಸಲಾದ ಮುಷ್ಕರದ ಮರೆಯಲ್ಲಿ ಸೀತಾಂಗೋಳಿಯಲ್ಲಿ ಸಿಐಟಿಯು ಕಾರ್ಯಕರ್ತರು ರಸ್ತೆ ಸಂಚಾರ ತಡೆ ಚಳುವಳಿ ನಡೆಸಿದ್ದರು. ಈ ವೇಳೆ ಲಾರಿಯೊಂದನ್ನು ತಡೆಯುವಾಗ ಪೋಲೀಸರ ಜತೆ ಸಂಘರ್ಷ ಏರ್ಪಟ್ಟಿತ್ತು.
ಈ ಹಿನ್ನೆಲೆಯಲ್ಲಿ ಮುಷ್ಕರ ನಿರತರ ಮೇಲೆ ವಿನಾ ಕಾರಣ ಪೋಲೀಸ್ ದೌರ್ಜನ್ಯ ನಡೆದು, ಮೂವರು ಸಿಪಿಎಂ/ಸಿಏಟಿಯು ಪ್ರಮುಖ ನಾಯಕರು ಗಾಯಗೊಂಡಿದ್ದಾರೆ. ಗಂಭೀರ ಗಾಯಗೊಂಡ ಇವರನ್ನು ಪೋಲೀಸ್ ಕಸ್ಟಡಿಗೆ ತೆಗೆದರೂ, ಗಾಯಗಳ ಹಿನ್ನೆಲೆಯಲ್ಲಿ ಕಾಸರಗೋಡು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೇಂದ್ರ ಸರಕಾರದ ಉದ್ಯಮ ಶೀಲತಾ ಪೋಷಣೆಯ ಕಾರ್ಮಿಕ, ರೈತ ವಿರೋಧಿ ನೀತಿಯನ್ನು ಪ್ರತಿಭಟಿಸಿ ಪೂರ್ವಸೂಚನೆಯಯಂತೆ ಕೆಲಸ ಸ್ಥಗಿತ ಮುಷ್ಕರ ನಡೆಸಿದವರ ಮೇಲೆ ನಡೆದ ಪೋಲೀಸ್ ದೌರ್ಜನ್ಯ ಹಿಂಸಾತ್ಮಕವಾಗಿದ್ದು, ಸಿಪಿಎಂ ಇದನ್ನು ಅಂಗೀಕರಿಸುವುದಿಲ್ಲ ಮತ್ತು ಪೋಲೀಸ್ ಗೂಂಡಾಯಿಸಂ ವಿರುದ್ಧ ಕ್ರಮ ಕೈಗೊಳ್ಳಲು ಒತ್ತಾಯಿಸುವುದಾಗಿ ಪ್ರಕಟಣೆ ತಿಳೀಸಿದೆ.






