ನವದೆಹಲಿ: ಆಪರೇಷನ್ ಸಿಂಧೂರ್ ಕುರಿತಾದ ಮಾಹಿತಿ ಹಂಚಲು ಭಾರತೀಯ ಸೇನಾ ಮುಖಂಡರು ಕರೆದ ಪತ್ರಿಕಾ ಗೋಷ್ಟಿ ಶಿವತಾಂಡವ ಸ್ತೋತ್ರ ವಾಚನದ ಮೂಲಕ ಆರಂಭಗೊಂಡಿದೆ. ಲಂಕಾಧೀಶ ರಾವಣನಿಂದ ರಚಿಸಲ್ಪಟ್ಟಿದೆ ಎನ್ನಲಾದ ಶಿವನ ಶ್ಲೋಕವು ಶಿವತಾಂಡವ ನೃತ್ಯದ ಸಂದೇಶ ಒಳಗೊಂಡಿದೆ. ಮಿಲಿಟರಿ ಕಾರ್ಯಾಚರಣೆಗಳ ಮಹಾ ನಿರ್ದೇಶಕ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ರಾಷ್ಟ್ರವನ್ನುದ್ದೇಶಿಸಿ ಮಾಧ್ಯಮಗಳ ಮುಂದೆ ಮಾತನಾಡುವ ಮೊದಲು ಶಿವಸ್ತುತಿಯನ್ನು ಹಾಡಲಾಯಿತು. ಈ ಶಿವ ತಾಂಡವ ನೃತ್ಯದ ಸ್ತೋತ್ರವು ಸೃಷ್ಠಿ, ವಿನಾಶ ಎರಡನ್ನೂ ಮಾಡುವ ಶಿವನ ರೌದ್ರ ಭಾವವನ್ನು ಕೊಂಡಾಡುವ ಸ್ತುತಿಯಾಗಿದೆ. ಇದು ಸಮರಾಂಗಣದಲ್ಲಿ ಶಕ್ತಿ, ಧೈರ್ಯ ನೀಡುವುದರ ಜತೆ ಸಂಹಾರ ತಾಂಡವತೆಯ ತೀವ್ರವಾದ ಪ್ರಾರ್ಥನೆಯನ್ನೊಳಗೊಂಡಿದೆ. ಸೈನಿಕರ ಧಮನಿಗಳಲ್ಲಿ ಆತ್ಮಸ್ಥೈರ್ಯ ತುಂಬಲು ಈ ಸ್ತುತಿ ಪೂರಕವಾಗಿದೆ.

ಈ ಸ್ತುತಿಯನ್ನು ಹಾಡುವಾಗ ಭಾರತ ಈ ಹಿಂದಿನಿಂದ ಮೊನ್ನೆಯ ವರೆಗೆ ನಡೆಸಿದ ಸೈನಿಕ ಕಾರ್ಯಾಚರಣೆಗಳ ಸಾಧನೆಯ ತುಣುಕನ್ನು ಬಿತ್ತರಿಸಲಾಯಿತು. ಪ್ರತಿಯೊಂದು ಕ್ಲಿಪ್ ಕೂಡಾ ಭಾರತೀಯ ಸೇನೆಯ ಪ್ರತಿಭಾ ಕೌಶಲ್ಯದ ಸಾಮರ್ಥ್ಯಕ್ಕೆ ಕನ್ನಡಿ ಹಿಡಿಯಿತು. ಭಾರತ ಶಾಂತಮಯವಾಗಿದೆ. ಶಾಂತಿಮಂತ್ರದ ಶ್ಲೋಕವನ್ನುಚ್ಛರಿಸುತ್ತದೆ. ಆದರೆ ಕೆಣಕಿ ಅನಿವಾರ್ಯತೆ ಸೃಷ್ಟಿಸಿದರೆ ಕ್ಷಾತ್ರ ತೇಜಸ್ಸಿನಿಂದ ಜವಾಬ್ದಾರಿಯುತ ರಾಷ್ಟ್ರ ರಕ್ಷಣೆಗೆ ಪಟತೊಟ್ಟು, ಕಟಿಬದ್ಧವಾಗಿದೆ ಎಂದು ಪತ್ರಿಕಾ ಗೋಷ್ಟಿಯ ಪ್ರಾರ್ಥನಾ ಶ್ಲೋಕ ಸಾರಿದೆ.
ಸ್ವಾತಂತ್ರ್ಯ ನಂತರದ ದೇಶ ಇತಿಹಾಸದಲ್ಲಿ ಸೇನಾ ಪತ್ರಿಕಾಗೋಷ್ಟಿಯಲ್ಲಿ ಶಿವಸ್ತುತಿ ಮೊಳಗುವುದು ಇದೇ ಮೊದಲಬಾರಿ. ಇದು ಕೇವಲ ಬಲ ಪ್ರದರ್ಶನವಷ್ಟೇ ಅಲ್ಲ, ಭಾರತದ ಸಂಸ್ಕೃತಿ, ಆಧ್ಯಾತ್ಮ, ಶಿಸ್ತು ಮತ್ತು ಮಿಲಿಟರಿ ಶಕ್ತಿಯ ಸಂವರ್ಧನೆಯನ್ನು ಸಾರುತ್ತದೆಂದು ಸುದ್ದಿಗೋಷ್ಟಿ ಸಾರಿದೆ. ದೆಹಲಿಯ ನೇಷನಲ್ ಮೀಡಿಯ ಸೆಂಟರಿನಲ್ಲಿ ಡಿಜಿಎಂಒ ಲೆಫ್ಟಿನೆಂಟ್ ಜನರಲ್ ರಾಜೀವ್ ಘಾಯ್ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.



