- ಯಕ್ಷಗಾನ ಕಲಾವಿದ ಪಾಡಿಗಾರು ಲಕ್ಷ್ಮೀನರಸಿಂಹ ಉಪಾಧ್ಯ ನಿಧನ
- ಪಡ್ರೆ ಚಂದು ಶಿಷ್ಯ, ಕೂಡ್ಲು ಕುತ್ಯಾಳ ಮೇಳದ ವೇಷಧಾರಿ ಇನ್ನಿಲ್ಲ
ಉಡುಪಿಯ ಪಾಡಿಗಾರಿನ ಲಕ್ಷ್ಮೀನರಸಿಂಹ ಉಪಾಧ್ಯ (75 ವರ್ಷ) ಇಂದು (08.03.2025) ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಉಡುಪಿಯ ವಿದ್ಯಾದಾಯಿನಿ ಯಕ್ಷಗಾನ ಮಂಡಳಿಯಲ್ಲಿ ಸ್ತ್ರೀವೇಷಧಾರಿಯಾಗಿ ಕಲಾಸೇವೆಗೈದಿದ್ದರು. ಖ್ಯಾತ ಕಲಾವಿದ ಪಡ್ರೆ ಚಂದು ಅವರ ಶಿಷ್ಯರಾಗಿದ್ದ ಇವರು ಮಲ್ಪೆ ಶಂಕರನಾರಾಯಣ ಮತ್ತು ಕೊಳ್ಯೂರು ರಾಮಚಂದ್ರ ರಾಯರೊಂದಿಗೆ ಸಹವೇಷಧಾರಿಯಾಗಿ ಪಾತ್ರ ನಿರ್ವಹಿಸಿದ್ದರು. ಕುತ್ಯಾಳ ಮೇಳದ ಪ್ರಧಾನ ಸ್ತ್ರೀವೇಷಧಾರಿಯಾಗಿ ವೇಷ ಮಾಡಿದ್ದ ಇವರು, ಬಳಿಕ ವಿವಿಧ ಮೇಳಗಳಲ್ಲಿ, ಹವ್ಯಾಸಿ ಸಂಘಗಳಲ್ಲಿ ಅತಿಥಿ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದರು. ಕೆಮ್ತೂರು ದೊಡ್ಡಣ್ಣ ಶೆಟ್ಟಿ ನಾಟಕ ಮಂಡಳಿಯಲ್ಲಿ ಸ್ತ್ರೀವೇಷಧಾರಿಯಾಗಿ ಪಾತ್ರ ನಿರ್ವಹಿಸಿದ್ದರು. ಉಡುಪಿಯ ಗೀತಾಂಜಲಿ ಥಿಯೇಟರ್ನಲ್ಲಿ ಸಹಾಯಕ ಪ್ರಬಂಧಕರಾಗಿ ಕಾರ್ಯನಿರ್ವಹಿಸಿದ್ದ ಇವರು, ವೈದಿಕರ ಸಹಾಯಕರಾಗಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು. ಪತ್ನಿ ಹಾಗೂ ಅಪಾರ ಬಂಧು-ಬಳಗದವರನ್ನು ಅಗಲಿದ್ದಾರೆ. ಯಕ್ಷಗಾನ ಕಲಾರಂಗದ ಆಜೀವ ಸದಸ್ಯರಾದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರ ರಾವ್, ಕಾರ್ಯದರ್ಶಿ ಮುರಲಿ ಕಡೆಕಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.