- ಕೋಟೆಕಾರು ಸಹಕಾರಿ ಬೇಂಕ್ ದರೋಡೆಯ ಪ್ರಧಾನ ಆರೋಪಿ ಕನ್ಯಾನ ಮೂಲದ ಡಕಾಯಿತ ಸೇರಿದಂತೆ ಸ್ಥಳೀಯನ ಬಂಧನ
- ದರೋಡೆಗೆ ಆರು ತಿಂಗಳ ಹಿಂದೆಯೇ ಯೋಜನೆ ಹೆಣೆಯಲಾಗಿತ್ತು !, ಬಂಧಿತರ ಸಂಖ್ಯೆ ಆರಕ್ಕೇರಿಕೆ
ಉಳ್ಳಾಲ : ತಲಪಾಡಿ ಬಳಿಯ ಕೆ.ಸಿ.ರೋಡ್ ನಲ್ಲಿರುವ ಕೋಟೆಕಾರು ಸೇವಾ ಸಹಕಾರಿ ಬೇಂಕ್ ಶಾಖೆಯಲ್ಲಿ ನಡೆದ ದರೋಡೆಗೆ ಸಂಬಂಧಿಸಿ ಪ್ರಮುಖ ಆರೋಪಿಯನ್ನೊಳಗೊಂಡಂತೆಮತ್ತೆ ಇಬ್ಬರ ಬಂಧನ ನಡೆದಿದೆ.
ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಬ್ಯಾಂಕ್ ದರೋಡೆ ಪ್ರಕರಣ ಇದಾಗಿದ್ದು, ನಾಲ್ವರು ಆರೋಪಿಗಳನ್ನು ಈ ಹಿಂದೆಯೇ ಬಂಧಿಸಲಾಗಿತ್ತು. ಇದೀಗ ಇಬ್ಬರ ಬಂಧನದೊಂದಿಗೆ ಬಂಧಿತರ ಸಂಖ್ಯೆ ಆರಕ್ಕೇರಿದೆ.

ಪ್ರಕರಣದ ಪ್ರಮುಖ ಆರೋಪಿಯಾದ ಬಂಟ್ವಾಳ ತಾಲೂಕಿನ ಕನ್ಯಾನ ಮೂಲದ ಭಾಸ್ಕರ ಬೆಳ್ಚಪ್ಪಾಡ ಯಾನೆ ಶಶಿತೇವರ್ (69). ಮತ್ತು ಕೆ.ಸಿ.ರೋಡಿನ ಸ್ಥಳೀಯ ನಿವಾಸಿ ಮಹಮ್ಮದ್ ನಝೀರ್ ಎಂಬಿಬ್ಭರನ್ನು ಇದೀಗ ಬಂಧಿಸಲಾಗಿದೆ.
ತನಿಖಾಧಿಕಾರಿಗಳು ಭಾಸ್ಕರ್ ಬೆಳ್ಚಪ್ಪಾಡನನ್ನು ಫೆ.24ರಂದು ಬೆಂಗಳೂರಿನಲ್ಲಿ ವಶಕ್ಕೆ ಪಡೆದರು. ಬಳಿಕ ಈತನನ್ನು ವಿಚಾರಣೆಗೊಳಪಡಿಸಿ ಮಹಮ್ಮದ್ ನಝೀರ್ ನ ಮಾಹಿತಿ ಪಡೆದು ಆತನನ್ನೂ ಬಂಧಿಸಲಾಯಿತು. ಭಾಸ್ಕರ್ ಮತ್ತು ನಝೀರ್ ಕಳೆದ ಏಳು ವರ್ಷಗಳಿಂದ ಪರಸ್ಪರ ಸಂಪರ್ಕದಲ್ಲಿದ್ದರು. ಕೋಟೆಕಾರು ಸಹಕಾರಿ ಬೇಂಕಿನ ಕೆ.ಸಿ. ರೋಡ್ ಶಾಖೆಯ ದರೋಡೆಗೆ ಇವರು 6ತಿಂಗಳ ಹಿಂದೆ ಯೋಜನೆ ಹೆಣೆದಿದ್ದರು ಎಂದು ತನಿಖೆಯಿಂದ ಬಯಲಾಗಿದೆ.
ದರೋಡೆಗೆ ನಝೀರ್ ಮಾರ್ಗದರ್ಶನ ನೀಡಿದ್ದು, ದರೋಡೆಕೋರರಿಗೆ ಈ ಪ್ರದೇಶ, ಬೇಂಕಿನ ವವಹಾರ ಇನ್ನಿತರ ಎಲ್ಲಾ ಪೂರಕ ಮಾಹಿತಿಗಳನ್ನೊದಗಿಸಿದ್ದನೆಂದು ಇದೀಗ ಬೆಳಕಿಗೆ ಬಂದಿದೆ.
ಆರೋಪಿ ಭಾಸ್ಕರ ಬೆಳ್ಚಪ್ಪಾಡ 25ವರ್ಷಗಳ ಹಿಂದೆಯೇ ಕನ್ಯಾನ ತೊರೆದು, ಊರಿನ ಸಂಪರ್ಕವನ್ನೇ ಬಿಟ್ಟ ಮುಂಬೈಗೆ ತೆರಳಿ, ಶಶಿ ತೇವರ್ ಎಂಬ ಹೆಸರಿನಲ್ಲಿ ಗುರುತಿಸಿಕೊಂಡಿದ್ದನು. ಈತನ ವಿರುದ್ದ ಮುಂಬೈ, ದೆಹಲಿ, ಕೋಣಾಜೆ ಸೇರಿದಂತೆ ವಿವಿದೆಡೆ ಡಕಾಯಿತಿ, ದರೋಡೆ ಕೇಸುಗಳಿವೆಯೆಂದು ಪೋಲೀಸರು ತಿಳಿಸಿದ್ದಾರೆ.






