ಬ್ರಹ್ಮರಕ್ಕಸನ ಉಚ್ಛಾಟನೆಗೆ ರಸ್ತೆಯೇ ಬಂದ್!
ಮಂಗಳೂರಿನ ಘಟನೆ ಸಾರ್ವತ್ರಿಕ ಚರ್ಚೆ
ಮಂಗಳೂರು ನಗರದಲ್ಲಿ ಬ್ರಹ್ಮರಕ್ಕಸನ ಸಹಿತ ಪ್ರೇತಾತ್ಮಗಳ ಉಚ್ಛಾಟನೆಗೆ ತಡರಾತ್ರಿ ಸಾರ್ವಜನಿಕ ರಸ್ತೆಯಲ್ಲಿ ಸಂಚಾರ ತಡೆದ ಘಟನೆ ನಡೆದಿದ್ದು, ಸಾರ್ವಜನಿಕ ವಲಯದಲ್ಲಿದು ತೀವ್ರ ಚರ್ಚಾ ವಿಷಯವಾಗಿದೆ.
ಮಂಗಳೂರು ಕೊಟ್ಟಾರ ಬಳಿಯ ದೇರೆಬೈಲ್ ಮಹಾದೈವರಾಜ ಕೋಟೆದ ಬಬ್ಬು ಸ್ವಾಮಿ ದೈವಸ್ಥಾನದ ಬಳಿ ರಣಕಾಳಿ ಮತ್ತು ಬ್ರಹ್ಮರಾಕ್ಷಸ ಸಹಿತ ದುರ್ಮರಣವನ್ನಪ್ಪಿದವರ ಪ್ರೇತಾತ್ಮ ಉಚ್ಛಾಟನೆ ನಿನ್ನೆ ರಾತ್ರಿ 10ಗಂಟೆಯಿಂದ ಬೆಳಿಗ್ಗೆ 3ಗಂಟೆ ತನಕ ನಡೆದಿತ್ತು. ಈ ಅವಧಿಯಲ್ಲಿ ಈ ಪ್ರದೇಶದ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿತ್ತು. ಈ ವಿಷಯವೀಗ ಚರ್ಚೆಯಾಗುತ್ತಾ ಮುನ್ನೆಲೆಗೆ ಬಂದಿದೆ.
ದೈವರಾಜ ಬಬ್ಬುಸ್ವಾಮಿ ದೈವಸ್ಥಾನದ ಜೀರ್ಣೋದ್ಧಾರಕ್ಕಾಗಿ ತಾಂಬೂಲ ಪ್ರಶ್ನೆ ಇರಿಸಿದಾಗ ಪ್ರದೇಶದಲ್ಲಿ ಬ್ರಹ್ಮರಕ್ಕಸ ಸಹಿತ ದುಷ್ಟ ಪ್ರೇತಗಳಿವೆಯೆಂದೂ, ಅದರ ಉಚ್ಛಾಟನೆ ನಡೆಸಬೇಕೆಂದೂ ಕಂಡುಬಂದಿತ್ತು. ಇದರಂತೆ ಮೌನಿ ಅಮವಾಸ್ಯೆಯಾದ ನಿನ್ನೆ ರಾತ್ರಿ ಪ್ರೇತೋಚ್ಛಾಟನೆ ನಡೆದಿದೆ. ಈ ಸಂದರ್ಭ ಈ ಪ್ರದೇಶದಲ್ಲಿ ಯಾರೂ ಸುತ್ತಾಡಬಾರದೆಂದು ಕೊಟ್ಟಾರದಲ್ಲಿ ಬೇನರ್ ಹಾಕಲಾಗಿತ್ತು. ಇದು ಚರ್ಚೆಗೆ ಗ್ರಾಸವಾಗಿದೆ.
ಪ್ರೇತೋಚ್ಛಾಟನೆಯ ವೇಳೆ ಸಂಚರಿಸಿದರೆ ಕೆಲವೊಮ್ಮೆ ಸಂಚರಿಸಿದವರ ದೇಹಕ್ಕೆ ಪ್ರೇತಬಾಧೆ ಸಂಭವಿಸಬಹುದೆಂಬ ಕಾರಣದಿಂದ ಬೇನರ್ ಹಾಕಿರುವುದಾಗಿ ದೈವಸ್ಥಾನದ ಆರಾಧಕರು ತಿಳಿಸಿದ್ದಾರೆ.