ಮಂಗಳೂರು : ರಿಕ್ಷಾ ಫಲ್ಟಿಯಾಗಿ ಗಂಭೀರ ಗಾಯಗೊಂಡು ಸತತ 25 ದಿನ ಚಿಕಿತ್ಸೆಯಲ್ಲಿದ್ದ ಕಟೀಲು ಮೇಳದ ಯಕ್ಷಗಾನ ಕಲಾವಿದ ಆನಂದ(50) ನಿಧನರಾದರು.
ರಾತ್ರಿ ಆಟದ ನಡುವೆ ಹಗಲು ರಿಕ್ಷಾ ಚಲಾಯಿಸುತ್ತಿದ್ದ ಇವರು ಇತ್ತೀಚಿಗೆ ಕಿನ್ನಿಗೋಳಿಯಲ್ಲಿ ರಿಕ್ಷಾ ಫಲ್ಟಿಯಾಗಿ ಕುತ್ತಿಗೆಗೆ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಶಸ್ತ್ರ ಚಿಕಿತ್ಸೆ ಸಹಿತ ಅವರ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ವೆಚ್ಚ ಭರಿಸಲಾಗದೇ ಅವರನ್ನು ವೆನ್ಲಾಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಜ.25ರಂದು ಮಧ್ಯಾಹ್ನ ಮೃತರಾದರು.
ತೆಂಕುತಿಟ್ಟಿನ ವಿವಿಧ ಮೇಳಗಳಲ್ಲಿ ಆರಂಭಿಸಿ, ಕಳೆದ ಒಂದೂವರೆ ದಶಕದಿಂದ ಇವರು ಕಟೀಲು ಮೇಳದಲ್ಲೇ ನೆಲೆಸಿದ್ದರು. ಉಡುಪಿ ಯಕ್ಷಗಾನಲಕಲಾರಂಗಕ್ಕೆ ಕಟೀಲು ಮೇಳದ ಪ್ರತಿನಿಧಿಯಾಗಿದ್ದ ಇವರ ಅಗಲುವಿಕೆಗೆ ಕಲಾರಂಗ ಗಾಢ ಸಂತಾಪ ಸೂಚಿಸಿದೆ.
ಕಟೀಲು ಮೇಳದಲ್ಲಿ ವೇಷಗಳಿಗೆಲ್ಲ ಒದಗುತ್ತಿದ್ದ ಕಲಾವಿದನೊಬ್ಬನ ಅಗಲಿಕೆಗೆ ಕಲಾರಂಗ ಕಂಬನಿ ಮಿಡಿದಿದೆ. ಮೃತರು ಪತ್ನಿ, ಕುಟುಂಬ , ಮೇಳದ ಕಲಾವಿದರ ಸಹಿತ ಬಂಧು,ಬಳಗವನ್ನಗಲಿದ್ದಾರೆ.