- ತಲಪಾಡಿ ಟೋಲ್ ಗೇಟಿನಲ್ಲಿ ಪರಿಸರದ ಕೇರಳೀಯರಿಗಿಲ್ಲದ ವಿನಾಯಿತಿ : ತಾರತಮ್ಯ ಧೋರಣೆ ಖಂಡಿಸಿ ನಾಗರಿಕರಿಂದ 8ರಂದು ಸೂಚನಾ ಪ್ರತಿಭಟನೆ
ವರದಿ : ರೆಹ್ಮಾನ್ ಉದ್ಯಾವರ
ತಲಪಾಡಿ ಟೋಲ್ ಗೇಟ್ ಅಧಿಕಾರಿಗಳ ತಾರತಮ್ಯ ಧೋರಣೆ ಹಾಗೂ ಸಿಬ್ಬಂದಿಗಳ ಗೂಂಡಾಗಿರಿ ವಿರುದ್ಧ ಮಂಜೇಶ್ವರ ಟೋಲ್ ಗೇಟ್ ಕ್ರಿಯಾ ಸಮಿತಿ ನೇತೃತ್ವದಲ್ಲಿ ಜನವರಿ 8 ರಂದು ಸಂಜೆ ತಲಪಾಡಿ ಟೋಲ್ ಗೇಟ್ ಪರಿಸರದಲ್ಲಿ ಸೂಚನಾ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಟೋಲ್ ಗೇಟ್ ಕ್ರಿಯಾ ಸಮಿತಿ ಕನ್ವೀನರ್ ಅಬ್ದುಲ್ ರಹೀಂ ಬಾನುವಾರ ಸಂಜೆ ಕುಂಜತ್ತೂರಿನಲ್ಲಿ ಕರೆದ ಸುದ್ದಿ ಗೋಷ್ಟಿಯಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ತಲಪಾಡಿ ಟೋಲ್ ಗೇಟ್ ಸ್ಥಾಪನೆಗೊಂಡ ಆರಂಭದಲ್ಲಿ ಕೇರಳ ಕರ್ನಾಟಕದ ಸ್ಥಳೀಯ ಐದು ಕಿಲೋ ಮೀಟರ್ ಸುತ್ತಳತೆಯಲ್ಲಿರುವ ನಿವಾಸಿಗಳಿಗೆ ಟೋಲ್ ಸಂಗ್ರಹದಲ್ಲಿ ವಿನಾಯಿತಿ ನೀಡಲಾಗುತಿತ್ತು. ಆದರೆ ಕ್ರಮೇಣ ಇದು ಕೇವಲ ಕರ್ನಾಟಕದ ಸ್ಥಳೀಯರಿಗೆ ಮಾತ್ರ ಸೀಮಿತವಾಗಿ ಕೇರಳದವರಿಗೆ ವಿನಾಯಿತಿ ರದ್ದು ಪಡಿಸಿ ಕೇರಳ ಭಾಗದಿಂದ ತೆರಳುವ ವಾಹನಗಳಿಗೆ ಟೋಲ್ ಸಂಗ್ರಹ ಮಾಡಲಾಗುತಿತ್ತು.
ಟೋಲ್ ಗೇಟ್ ಸಿಬಂದಿಗಳ ತಾರತಮ್ಯ ಧೋರಣೆ ವಿರೋಧಿಸಿ ಸ್ಥಳೀಯ ನಾಗರಿಕರನ್ನು ಒಟ್ಟು ಸೇರಿಸಿ ತಮಗಾಗುವ ಅನ್ಯಾಯವನ್ನು ಎದುರಿಸುವ ಉದ್ದೇಶದಿಂದ ಆರಂಭದಲ್ಲಿ ಶಾಂತಿಯುತವಾದ ರೀತಿಯಲ್ಲಿ ಸೂಚನಾ ಪ್ರತಿಭಟನಾ ಧರಣಿಗೆ ಸಿದ್ದತೆಗಳು ನಡೆಯುತ್ತಿರುವುದಾಗಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದರು.
ಟೋಲ್ ಗೇಟ್ ಅಧಿಕಾರಸ್ಥರಿಂದ ಇದಕ್ಕೊಂದು ಸಕಾರಾತ್ಮಕ ರೀತಿಯ ಪ್ರತಿಕ್ರಿಯೆ ಲಭಿಸದೇ ಕಾನೂನಾತ್ಮಕ ರೀತಿಯಲ್ಲಿ ಪ್ರತಿಭಟನೆಯ ಸ್ವರೂಪವನ್ನು ಬದಲಿಸಿ ಉಪವಾಸ ಸತ್ಯಾಗ್ರಹ ರೀತಿಯ ಚಳವಳಿಗೂ ಮುಂದಾಗಲಿರುವುದಾಗಿ ಕ್ರಿಯಾ ಸಮಿತಿ ತಿಳಿಸಿದೆ.
ಟೋಲ್ ಗೇಟ್ ಕ್ರಿಯಾ ಸಮಿತಿ ಪದಾಧಿಕಾರಿಗಳಾದ ಅಶ್ರಫ್ ಕುಂಜತ್ತೂರು, ಜಬ್ಬಾರ್ ಪದವು ಹಾಗೂ ಅಶ್ರಫ್ ಬಡಾಜೆ ಸುದ್ದಿಗೋಷ್ಟಿಯಲ್ಲಿ ಪಾಲ್ಗೊಂಡರು.