- ಅಪೂರ್ವ ಸಂಭ್ರಮದ ಮಂಗಲ ಮಹೋತ್ಸವಕ್ಕೆ ಸಜ್ಜಾಗಿದೆ ಮುಂಡಪಳ್ಳ ದೇವಾಲಯ ಪರಿಸರ
- ನಾಳೆ ಮುಂಡಪಳ್ಳ ಕ್ಷೇತ್ರ ಪರಿಸರದಲ್ಲಿ ಶ್ರೀನಿವಾಸ ಕಲ್ಯಾಣೋತ್ಸವ ವೈಭವ
ಕುಂಬಳೆ ಸಮೀಪದ ನಾಯ್ಕಾಪು ಬಳಿಯ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಾಲಯದಲ್ಲಿ ಡಿ.25ರಂದು(ನಾಳೆ) ಇದೇ ಮೊದಲ ಬಾರಿಗೆ ನಾಡಿಗೆ ವಿಶೇಷವಾದ ಶ್ರೀನಿವಾಸ ಕಲ್ಯಾಣೋತ್ಸವ
ನಡೆಯಲಿದ್ದು, ಮುಂಡಪಳ್ಳ ಕ್ಷೇತ್ರ ಪರಿಸರ ಸಂಭ್ರಮಕ್ಕೆ ಸಜ್ಜಾಗಿದೆ.
ಮಂಗಲ ಮಹೋತ್ಸವದ ಅಂತಿಮ ಸಿದ್ಧತೆಗಳು ನಡೆಯುತ್ತಿದ್ದು ಕ್ಷೇತ್ರ ಪದಾಧಿಕಾರಿಗಳು, ಕಾರ್ಯಕರ್ತರು ನೇತೃತ್ವ ನೀಡುತ್ತಿದ್ದಾರೆ.
ಕುಂಬಳೆ ಪರಿಸರದಲ್ಲೇ ಮೊದಲಬಾರಿಗೆ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ
ಸಮಾರಂಭಕ್ಕೆ ನಾಯ್ಕಾಪಿನ ಮುಂಡಪಳ್ಳ ಶ್ರೀರಾಜರಾಜೇಶ್ವರಿ ದೇಗುಲ ಪರಿಸರ ವಿಶೇಷ ಸಜ್ಜೀಕರಣಗಳಿಂದ , ಭಕ್ತಿ ಸಡಗರದಿಂದ ಪೂರ್ವ ತಯಾರಿ ನಡೆಸಿದೆ. ಕಲ್ಯಾಣೋತ್ಸವಕ್ಕಾಗಿ ಬೃಹತ್ ಗಾತ್ರದ ವಿಶೇಷ ವೇದಿಕೆ ಸಹಿತ ಸಂಪೂರ್ಣ ಸಿದ್ಧತೆಗಳಾಗಿವೆ ಎಂದು ಶ್ರೀ ದೇಗುಲದ ಆಡಳಿತ ಮೊಕ್ತೇಸರ, ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ, ಸಾಧಕ ಉದ್ಯಮಿ ಕೆ.ಕೆ.ಶೆಟ್ಟಿ ಅಹ್ಮದ್ ನಗರ ತಿಳಿಸಿದ್ದಾರೆ.
ನಾಳೆ ಬುಧವಾರ ಬೆಂಗಳೂರಿನ ಆಚಾರ್ಯ ವರೇಣ್ಯರುಗಳಾದ ಶ್ರೀ ರಾಮಾನುಜ ಮಠದ ಶ್ರೀ ವೇದಮೂರ್ತಿ, ಮೋಹನಕೃಷ್ಣ ಆಚಾರ್ಯ ಮತ್ತು ಸಹ ಆಚಾರ್ಯರ ಸಂಯುಕ್ತ ನೇತೃತ್ವದಲ್ಲಿ ಪಂಚರಾತ್ರ ಆಗಮ ವಿಧಾನದಲ್ಲಿ
ಶ್ರೀದೇವಿ , ಭೂದೇವಿ ಸಹಿತ
ಶ್ರೀನಿವಾಸ ಕಲ್ಯಾಣೋತ್ಸವ
ನಡೆಯಲಿದೆ.
ಇದು ಇಡೀ ಕುಂಬಳೆ ಪರಿಸರಕ್ಕೇ ಮೊದಲು ನೋಡ ಸಿಗುವ ಕಲ್ಯಾಣ ವೈಭವ..!
ಭೂವೈಕುಂಠಾಧಿಪತಿ ಶ್ರೀನಿವಾಸ ದೇವರು ಲಕ್ಷ್ಮೀ ದೇವಿಯನ್ನು ಪುನರ್ ವರಿಸಿಕೊಳ್ಳುವ ಅತ್ಯಪೂರ್ವ ಮಂಗಲ ಮುಹೂರ್ತ ದ ದೃಶ್ಯ ಅನಾವರಣ ಕುಂಬಳೆ ಪರಿಸರದಲ್ಲಾಗುವುದು, ಮತ್ತು ನಮ್ಮ ತುಳುನಾಡಿನ ಜನತೆ ಅದರ ವೈಭವ ಕಣ್ತುಂಬಿಕೊಳ್ಳುವ ಅತ್ಯಪೂರ್ವ ಮುಹೂರ್ತ ಇದು.
ಈ ಹಿಂದೆ ಕಾಸರಗೋಡಿನ ಕೆಲವೆಡೆ ನಡೆದಿದ್ದರೂ ತುಳುನಾಡ ಅರಸೊತ್ತಿಗೆಯ ತವರುನೆಲ ಅದರಿಂದ ವಂಚಿತವಾಗಿತ್ತು. ಈಗ ಕಾಕತಾಳೀಯ ಸುಯೋಗ ಒದಗಿದೆ. ಡಿ.25ರಂದು ಬೆಳಿಗ್ಗೆ 6ರಿಂದ ಸುಪ್ರಭಾತ ಸೇವೆ, ವೇದಪಾರಾಯಣಗಳಿಂದ ಆರಂಭ. ಅನಂತರ ವೈದಿಕ, ವೈವಿಧ್ಯ ಕಾರ್ಯಕ್ರಮ. ಮಧ್ಯಾಹ್ನ ಅನ್ನಸಂತರ್ಪಣೆ.
ಅಪರಾಹ್ನ 4ರಿಂದ ಶ್ರೀನಿವಾಸ ಕಲ್ಯಾಣೋತ್ಸವ…
ಕಲ್ಯಾಣೋತ್ಸವವೇ ಸಂಭ್ರಮ
ತಿರುಪತಿ , ತಿರುಮಲೆ ದೇವರಗಳಾದ ಶ್ರೀನಿವಾಸ -ಪದ್ಮಾವತಿ ಅವರ ಮಂಗಲೋತ್ಸವವೇ ಶ್ರೀನಿವಾಸ ಕಲ್ಯಾಣೋತ್ಸವ. ದೇವರ ಮದುವೆ ಸಂಭ್ರಮವನ್ನು ಯಾರು ನಡೆಸಿ, ನಾಡಿನ ಜನರೆಲ್ಲರಿಗೆ ತೋರಿಸುತ್ತಾರೋ ಅದು ಅಷ್ಟೈಶ್ವರ್ಯ ಪುಣ್ಯ ಪ್ರದಾಯಕ ಎಂಬುದೇ ಭಗವದ್ವಚನ. ಈ ಹಿನ್ನೆಲೆಯಲ್ಲಿ ನಡೆಯುವ ಶ್ರೀನಿವಾಸ ಕಲ್ಯಾಣೋತ್ಸವ ಕುಂಬಳೆ ಪರಿಸರಕ್ಕೆ ಶೋಭಾಯಮಾನ ಪುಣ್ಯವನ್ನೊದಗಿಸುವ ಮಂಗಲಕಾರ್ಯ
ಮಂಗಲೋತ್ಸವದಲ್ಲಿ
ಸನ್ಮಾನ ವೈಶಿಷ್ಟ್ಯ
ಒಂದುಕಾಲಕ್ಕೆ ಮುಂಡಪಳ್ಳ ಬರಡುಭೂಮಿ. ಅಲ್ಲಿ ಪೂರ್ವಿಕ ಹಿನ್ನೆಲೆಯಂತೆ ಭವ್ಯ ದೇಗುಲ ನಿರ್ಮಿಸಿದವರು ಕೆ.ಕೆ.ಶೆಟ್ಟಿ ಎಂಬ ಶೂನ್ಯದಿಂದ ಅರಳಿದ ಸಾಧಕ. ಈಗವರು ಸ್ವಯಂ ಸಾಧನೆಯಿಂದ ತಿರುಪತಿಯ ಲಕ್ಮೀ ವೇಂಕಟೇಶ ದೇವರನ್ನೇ ತನ್ನೂರಿಗೆ ಕರೆಸಿ ಕಲ್ಯಾಣೋತ್ಸವ ನಡೆಸುತ್ತಿದ್ದಾರೆ. ಈ ಸಂದರ್ಭ ಕರ್ನಾಟಕ ರಾಜ್ಯ ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸ್ಕೃತ ದಾನಿ ಶ್ರೀ ಸದಾಶಿವ ಶೆಟ್ಟಿ ಕುಳೂರು ಕನ್ಯಾನ ಅವರಿಗೆ ನಾಡಿನ ಪೌರ ಸನ್ಮಾನ ನಡೆಯಲಿದೆ. ಮುಂಬಯಿ ಉದ್ಯಮಿ ಡಾ. ಸತ್ಯಪ್ರಕಾಶ್ ಶೆಟ್ಟಿ ಅತಿಥಿಗಳಾಗಿ ಭಾಗವಹಿಸುವರು.
ಒಂದು ಕಾಲಕ್ಕೆ ಗ್ರಾಮೀಣ ಬರಡುನೆಲವಾಗಿದ್ದ ನಾಯ್ಕಾಪು ಬಳಿಯ ಮುಂಡಪಳ್ಳ ಈಗ ತಾಯಿ ರಾಜರಾಜೇಶ್ಶರಿಯ ಪುಣ್ಯಧಾಮ. ಅಲ್ಲಿಗೆ ಈ ವರ್ತಮಾನದಲ್ಲಿ ತಿರುಪತಿ ದೇವರುಗಳನ್ನು ಕರೆಸಿ ಕಲ್ಯಾಣೊತ್ಸವ ನಡೆಸುವುದೆಂದರೆ ನಾಡಿಗೆ ಮಂಗಲವನ್ನೀಯುವ ಕಾಯಕ. ಇದು ತನ್ನ ಬದುಕಿನ ಏಳಿಗೆಯ, ಸಾಧನೆಯ ಭಕ್ತಿಯ ಕಾಣಿಕೆ ಎಂದು ಉದ್ಯಮಿ ಕೆ.ಕೆ.ಶೆಟ್ಟಿ ತಿಳಿಸಿದ್ದಾರೆ.
.