ಬದಿಯಡ್ಕ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕರ್ನಾಟಕ ನೇತ್ರಾವತಿ ವಲಯ ಕಾಸರಗೋಡು ನಗರ ಹಾಗೂ ಶ್ರೀ ಗಣೇಶ ಮಂದಿರ ಶಾಖೆಯ ಪ್ರಥಮ ವಾರ್ಷಿಕೋತ್ಸವವು ರವಿವಾರ ಬದಿಯಡ್ಕ ಗಣೇಶ ಮಂದಿರದಲ್ಲಿ ಜರಗಿತು.
ಪ್ರಾತಃಕಾಲ ಸದಸ್ಯರಿಂದ ಭಜನೆ ನಡೆಯಿತು. ನಂತರ ನಡೆದ ಸಭಾಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಗಣ್ಯರು ದೀಪಬೆಳಗಿಸಿದರು. ನಿವೃತ್ತ ಅಧ್ಯಾಪಿಕೆ ಕವಿತಾ ಅಧ್ಯಕ್ಷತೆ ವಹಿಸಿದ್ದರು.

ಉದ್ಯಮಿ, ದಾನಿ ಬಿ.ವಸಂತ ಪೈ ಬದಿಯಡ್ಕ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ನಮ್ಮ ನಿತ್ಯಜೀವನದ ಬೆಳಗಿನ ಜಾವ ಅತೀ ಮಹತ್ವದ್ದಾಗಿದೆ. ಪ್ರಾತಃಕಾಲದಲ್ಲಿ ನಿದ್ದೆಯ ಜಾಡ್ಯದಿಂದ ಎದ್ದು ಸತ್ಸಂಗದ ಮೂಲಕ ಬೆಳಕನ್ನು ಕಾಣಲು ಈ ಶಿಬಿರದ ಪ್ರಯೋಜನವನ್ನು ಪಡೆಯುತ್ತಿರುವ ನೀವೆಲ್ಲ ಧನ್ಯರು. ಇದು ನಿರಂತರ ನಡೆಯಲಿ ಎಂಬ ಆಶಯ ವ್ಯಕ್ತಪಡಿಸಿದರು.
ಪ್ರಶಿಕ್ಷಣ ವಿಭಾಗದ ಪ್ರಾಂತ ಸಂಚಾಲಕ ಲಕ್ಷ್ಮೀನಾರಾಯಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ದಿನೇಶ್ ಸ್ವಾಗತಿಸಿದರು. ಲಲಿತ ವರದಿ ಮಂಡಿಸಿದರು. ವಿದ್ಯಾ ನಿರೂಪಿಸಿ, ಯೋಗೀಶ ಪೊಡಿಪ್ಪಳ್ಳ ವಂದಿಸಿದರು. ಕಾಸರಗೋಡು ಶಾಖಾ ವಿಸ್ತರಣಾ ಪ್ರಮುಖ ಕುಮಾರ ಸುಬ್ರಮಣ್ಯ ಹಾಗೂ ಶಾಖೆಯ ಪ್ರಮುಖರು, ಯೋಗ ಬಂಧುಗಳು ಉಪಸ್ಥಿತರಿದ್ದರು. ಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.











