ಕಾಸರಗೋಡಿನ ಎಡನೀರು ಮಠದ ಶ್ರೀಸಚ್ಛಿದಾನಂದ ಭಾರತೀ ಶ್ರೀಪಾದಂಗಳವರ ಕಾರನ್ನು ಆಕ್ರಮಿಸಿ, ಸಂಚಾರಕ್ಕೆ ತಡೆಯೊಡ್ಡಿದ ಘಟನೆಗೆ ಅಖಿಲ ಭಾರತೀಯ ಸಂತ ಸಮಿತಿ ರಾಷ್ಟ್ರೀಯ ಘಟಕದ ಮುಖ್ಯಸ್ಥರು ಖಂಡನೆ ಸೂಚಿಸಿ ರಾಷ್ಟ್ರಪತಿ ಸಹಿತ ಕೇಂದ್ರ ಗೃಹ ಸಚಿವರಿಗೆ ದೂರು ನೀಡಿದೆ.
ಈ ಮೂಲಕ ಎಡನೀರು ಶ್ರೀಗಳ ವಾಹನ ಆಕ್ರಮಣ ಘಟನೆಯ ದೂರು ಕೇಂದ್ರಕ್ಕೆ ತಲುಪಿದೆ.
ಎಡನೀರು ಶ್ರೀಗಳ ವಾಹನ ಆಕ್ರಮಿಸಿದ ಘಟನೆ ಅಕ್ಷಮ್ಯ ಅಪರಾಧವಾಗಿದ್ದು, ಈ ವಿಷಯದಲ್ಲಿ ಕೇರಳ ಸರಕಾರದ ನಿರ್ಲಕ್ಷ್ಯ ನೀತಿಯನ್ನು ಅಖಿಲಭಾರತ ಸಂತ ಸಮಿತಿಯ ಕರ್ನಾಟಕ ಘಟಕ ಖಂಡಿಸುವುದಾಗಿ ಸಂತ ಸಮಿತಿ ಕರ್ನಾಟಕ ರಾಜ್ಯಾಧ್ಯಕ್ಷ ಓಂ ಶ್ರೀ ವಿದ್ಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದ್ದಾರೆ.
ಸ್ವಾಮೀಜಿಯವರ ಸಂಚಾರಕ್ಕೆ ಅಡ್ಡಿಯೊಡ್ಡಿ , ವಾಹನ ಆಕ್ರಮಿಸಿದ ಆರೋಪಿಗಳನ್ನು ಬಂಧಿಸಿ, ಕಾನೂನು ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಕೇರಳ ಮುಖ್ಯಮಂತ್ರಿಯನ್ನು ಮನವಿ ಮೂಲಕ ಸಂತಸಮಿತಿ ಒತ್ತಾಯಿಸಿದೆ. ಈ ಹಿನ್ನೆಲೆಯಲ್ಲಿ ಎಡನೀರು ಮಠದಲ್ಲಿ ಸಂತ ಸಮಿತಿಯ ದಕ್ಷಿಣ ಭಾರತೀಯ ಪ್ರಮುಖ ಪ್ರತಿನಿಧಿಗಳು ಬೈಠಕ್ ನಡೆಸಿ ಕಾಸರಗೋಡು ಜಿಲ್ಲಾಧಿಕಾರಿಗಳಿಗೂ ಅದೇ ಮನವಿ ಸಲ್ಲಿಸಲಾಗಿದೆ. ಮುಂದಿನ 41ದಿನಗಳ ಗಡುವಿನೊಳಗೆ ಆರೋಪಿಗಳನ್ನು ಬಂಧಿಸದೇ ಇದ್ದರೆ ಈ ವಿಷಯದಲ್ಲಿ ಸಂತ ಸಮಿತಿಯ ರಾಷ್ಟ್ರೀಯ ಘಟಕದ ಸಲಹೆಯಂತೆ ಮುಂದಿನ ಹೆಜ್ಜೆ ಅನುಸರಿಸಲಿದೆ ಎಂದವರು “ಕಣಿಪುರ ಡಿಜಿಟಲ್ ಮೀಡಿಯ”ಕ್ಕೆ ತಿಳಿಸಿದರು.
ನಾವು ಸಂತರು ರಾಜಕಾರಣಿಗಳಂತೆ ಪ್ರತಿಭಟನಾ ಹೇಳಿಕೆ ನೀಡುವುದಾಗಲೀ, ರಾಜಕೀಯದವರಂತೆ ಮಾತಾಡುವುದಾಗಲೀ ಸಲ್ಲದು. ಆದ್ದರಿಂದ 41ದಿನಗಳ ಅವಧಿಯಿತ್ತು ಕಾಯುತ್ತೇವೆ. ಅದರೊಳಗೆ ಆರೋಪಿಗಳನ್ನು ಕಾನೂನು ವಿಧೇಯ ಬಂಧಿಸದಿದ್ದರೆ ಸಂತರೆಲ್ಲ ಒಟ್ಟಾಗಬೇಕಾಗುತ್ತದೆ, ಮುಂದಿನ ನಡೆ ಅನುಸರಿಸಬೇಕಾಗುತ್ತದೆ ಎಂದವರು ಹೇಳಿದರು.
ಸಾಧು,ಸಂತ ಸನ್ಯಾಸಿಗಳಾದ ಯಾರೊಬ್ಬರ ಸಂಚಾರಕ್ಕೂ ಅಡ್ಡಿಯೊಡ್ಡಬಾರದು. ಅಡ್ಡಿಯೊಡ್ಡಿ ವಾಹನ ಆಕ್ರಮಿಸಿ ಒಂದು ತಿಂಗಳು ಸಮೀಪಿಸಿದರೂ ಈ ವಿಷಯದಲ್ಲಿ ಕಾಸರಗೋಡು ಪೋಲೀಸರು ಆರೋಪಿಯನ್ನು ಬಂಧಿಸದೇ ನಿರ್ಲಕ್ಷಿಸಿರುವುದು ಸರಕಾರದ ಆದೇಶದ ಕಾರಣದಿಂದಲೇ ಇರಬಹುದು. ಸಾಧು ಸಂತ ಸನ್ಯಾಸಿಗಳಿಗೂ ಸುರಕ್ಷೆ, ಸಂರಕ್ಷಣೆ ಇಲ್ಲದೇ ಹೋದರೆ ಈ ನಾಡಿನ ಭವಿಷ್ಯ ಆತಂಕಕಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಸಂತ ಸಮಿತಿ ರಾಷ್ಟ್ರೀಯ ಘಟಕದ ಪದಾಧಿಕಾರಿ ಪ್ರಮುಖರು ಈ ವಿಷಯವನ್ನು ಕೇಂದ್ರ ಗೃಹ ಸಚಿವ ಅಮಿತ್ ಷಾ, ಸಾಂಸ್ಕೃತಿಕ ಸಚಿವ ಧರ್ಮೇಂದ್ರ ಪ್ರತಾಪ್ ಅವರ ಗಮನಕ್ಕೆ ತಂದಿರುವುದಾಗಿ ಸಂತ ಸಮಿತಿ ಕರ್ನಾಟಕ ಪ್ರಮುಖ್ ಶ್ರೀವಿದ್ಯಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.
.