- ಮೊದಲು ಎಲ್ಲಿ ನಿಲ್ಲಬಾರದೋ ಅಲ್ಲಿ ಮೋಜು,ಮಸ್ತಿಯ ಫೋಟೋ ಶೂಟ್!
- ಬಳಿಕ ಈ ಕೃತ್ಯ ಎಸಗಿದವರಿಗೆ ಪೋಲೀಸ್ ಇಲಾಖೆಯಿಂದಲೇ ಉತ್ತಮ ನಡತೆಗಾಗಿ ತದಬೇತಿ..!
- ಇದು ನಾವು ಅರಿಯದೇ ಮಾಡಿದ ಕೆಲಸ ಎಂದು ಕರ್ತವ್ಯಕ್ಕೆ ನಿಯೋಜಿತರಾದ ಪೋಲೀಸರ ಹೇಳಿಕೆ!
ಪವಿತ್ರ ಶಬರಿಮಲೆಯಲ್ಲಿ ಕರ್ತವ್ಯಕ್ಕೆ ನಿಯೋಜಿತರಾದ ಪೋಲೀಸರಿಗೆ ಶಬರಿಮಲೆಯ ಪಾವಿತ್ರ್ಯ ಗೌರವಗಳು ಗೊತ್ತಿಲ್ಲವೇ?
ತಮಗಿದು ಗೊತ್ತಿಲ್ಲ, ಅರಿಯದೇ ನಡೆದ ಪ್ರಮಾದ ಎಂಬ ಹೇಳಿಕೆಯನ್ನು ಫೋಟೋ ಶೂಟ್ ಮಾಡಿದ ಪೋಲೀಸರೇ ನೀಡಿದರೆ ಏನರ್ಥ?
ಪವಿತ್ರ ಶಬರಿಮಲೆಯ ಕಾನನ ಕ್ಷೇತ್ರ ತಲುಪಲು ದೇಶ, ವಿದೇಶಗಳಿಂದ ಭಕ್ತಾದಿಗಳು ಅಯ್ಯಪ್ಪ ಭಕ್ತಿಯ ವ್ರತನಿಷ್ಠೆ ಪಾಲಿಸಿ ಬರುತ್ತಾರೆ. ಅವರೆಲ್ಲರ ಪಾಲಿಗೆ ಶ್ರೀ ಸನ್ನಿಧಾನದ ಒಂದೊಂದೇ ಮೆಟ್ಟಿಲುಗಳೆಂದರೆ ಅದು ಪರಮ ಪಾವನ. ವ್ರತವನ್ನಾಚರಿಸಿ ನಿಷ್ಠೆಯಿಂದ ಬರುವ ಭಕ್ತರನ್ನು ಮಲೆಗೆ ತಲುಪಿಸಿ, ಹದಿನೆಂಟು ಮೆಟ್ಟಲೇರಿಸಿ ಕೊಡು ಭಗವಂತನೇ ಎಂಬುದೇ ದೈನಂದಿನ ಶರಣ ಮೊರೆ..
ಆದ್ದರಿಂದಲೇ ಶಬರಿಮಲೆ ಸನ್ನಿಧಾನದ,ಒಂದೊಂದು ಮೆಟ್ಟಿಲೂ ವಿಶ್ವಾಸಿಗಳ ಪಾಲಿಗೆ ಭಾವುಕ ಭಕ್ತಿಯ ಪ್ರತೀಕ, ಪವಿತ್ರ. ಈ ಮೆಟ್ಟಿಲೇರಿದರೆ ಮತ್ತೆ ಕಾಣುವುದೇ ಅಯ್ಯನೆಂಬ ಅಯ್ಯಪ್ಪ ದರ್ಶನ.
ಅದೇ ಅಯ್ಯಪ್ಪ ಸ್ವಾಮೀ ಪ್ರತಿಷ್ಠೆಗೆ ಕುಂಡೆ ಹಾಕಿ, ಬೆನ್ನು ಹಾಕಿ ನಿಲ್ಲುವ, ನಿರ್ಗಮಿಸುವ ಸಂಪ್ರದಾಯವೇ ಶಬರಿಮಲೆಯಲ್ಲಿಲ್ಲ..!
ಅಭಿಮುಖವಾಗಿ 18ಮೆಟ್ಟಿಲೇರುವುದೇ ಅಲ್ಲಿನ ಸಂಸ್ಕೃತಿ., ನಿರ್ಗಮನಕ್ಕೆ ಬೇರೆಯೇ ದಾರಿ ಇದೆ. ಇದೇ ತಮಗೆ ಗೊತ್ತಿಲ್ಲ ಎಂದು ಕರ್ತವ್ಯ ನಿರತ ಪೋಲೀಸರು
18ಮೆಟ್ಟಿಲನ್ನು ಏರಿನಿಂತು ಮೋಜಿನಾಟದಂತೆ ಪಟ ತೆಗೆದು ವಿವಾದಗಳ ಬಳಿಕ ಹೇಳಿದರೆ ಅದನ್ನೊಪ್ಪಬೇಕೇ..?
ಯಾರೊಬ್ಬರೂ ಒಪ್ಪದ, ಒಪ್ಪಲಾಗದ ವಿಚಾರವಿದು.
ಯಾವುದೇ ದೇವಾಲಯಕ್ಕೂ ಅದರದ್ದೇ ಆದ ಅಚಾರ, ಸಂಪ್ರದಾಯ ಗೌರವಗಳಿವೆ. ಅಲ್ಲಿ ಕರ್ತವ್ಯ ನಿರತರಾಗುವ ಯಾರೇ ಆಗಿದ್ದರೂ ಅದು ತಿಳಿದಿರಲೇಬೇಕು, ಮತ್ತದನ್ನು ಪಾಲಿಸಲೇಬೇಕು. ತಮಗದು ಗೊತ್ತಿಲ್ಲ ಎಂದರೆ ಇಂಥ ಪೋಲೀಸರನ್ನೇಕೆ ಶಬರಿಮಲೆಗೆ ನೇಮಿಸುತ್ತೀರಿ ಎಂದು ಭಕ್ತರು ಪ್ರಶ್ನಿಸುವುದು ಸಹಜ ತಾನೇ??
ಕಾನನ ಕ್ಷೇತ್ರ ಶಬರಿಮಲೆಯಲ್ಲಿ ದೈನಂದಿನ ಹರಿವರಾಸನಂ ಹಾಡಿ ನಡೆ ಮುಚ್ಚಿದ ಬಳಿಕ ತಂತ್ರಿಗಳು ಮತ್ತು ಪ್ರಧಾನ ಅರ್ಚಕರಷ್ಟೇ ಹದಿನೆಂಟು ಮಟ್ಟಿಲಿಳಿಯುತ್ತಾರೆ. ಅದೂ ಕೂಡಾ ಅಯ್ಯಪ್ಪನಿಗೆ ಬೆನ್ನು ಹಾಕಿ ಇಳಿಯುವುದಲ್ಲ. ಅಯ್ಯನಿಗೆ ಕೈ ಮುಗಿದು ಒಂದೊಂದೇ ಮೆಟ್ಟಿಲು ಹಿಮ್ಮುಖ ಚಲಿಸಿ ಇಳಿಯುವುದು ಸಂಪ್ರದಾಯಿಕ ರೂಢಿ..
ಇಲ್ಲಿ ಗಮನಿಸಬೇಕು ಏನೆಂದರೆ ವ್ರತ
ತೊಟ್ಟು ಬರುವವರೆಲ್ಲ ಏರಿದರೆ
ಈರ್ವರಷ್ಟೇ ಈ ಮೆಟ್ಟಿಲಲ್ಲಿ ಇಳಿಯಬೇಕು. ಇದು ಸನಾತನ ಸಂಪ್ರದಾಯ. ಇಂಥ ಪವಿತ್ರ ಮೆಟ್ಟಿಲಿನಲ್ಲಿ ಪೋಲೀಸರೇ ಆಚಾರ ಉಲ್ಲಂಘಿಸಿ, ಹದಿನೆಂಟು ಮೆಟ್ಟಿಲಿನ ಪಾವಿತ್ರ್ಯಕ್ಕೆ ಅಗೌರವ ತೋರಿಸಿದರೆ ಅದನ್ನು ಹಿಂದೂ ಸಮಾಜ ಮನ್ನಿಸುವುದು ಹೇಗೆ ಸಾಧ್ಯ..?
ಇಂಥದ್ದೊಂದು ಘಟನೆ ಭಾರತದ ಅನ್ಯಮತೀಯರ ಧಾರ್ಮಿಕ ಪಾವಿತ್ರ್ಯದ ಜಾಗದಲ್ಲಿ ದುರ್ದೈವವಶಾತ್ ನಡೆದಿರುತ್ತಿದ್ದರೆ ವಾತಾವರಣ ಹೇಗಿರುತಿತ್ತು??
ಇದನ್ನೇ ಅಲ್ಲವೇ ಹಿಂದೂ ಸಂಘಟನೆಗಳು ಪ್ರಶ್ನಿಸುತ್ತಿರುವುದು??
ಶಬರಿಮಲೆಯಂಥಾ ಪವಿತ್ರ ಜಾಗದಲ್ಲಿ ಕರ್ತವ್ಯಕ್ಕೆ ನೇಮಕರಾಗುವ ಪೋಲೀಸರಿಗೆ ಮೆಟ್ಟಿಲಿನ ಮಹತ್ವವೇ ಗೊತ್ತಿಲ್ಲ ಎನ್ನುವುದು ಪ್ರಕರಣಕ್ಕೊಂದು ಸಮರ್ಥನೆಯೇ ಅಲ್ಲ. ಇದು ಪವಿತ್ರ ಆರಾಧನಾ ಸಂಕೇತಗಳ ಕುರಿತಾದ ನಿರ್ಲ್ಯಕ್ಷ ತಾನೇ?
ಹಿಂದೂ ಧಾರ್ಮಿಕ ಮೌಲ್ಯಗಳನ್ನು ಕುಗ್ಗಿಸಿ ತೋರಿಸುವ ದಾರ್ಷ್ಟ್ಯ ಅಲ್ಲ ಎಂದು ಹೇಗೆ ಹೇಳಲು ಸಾಧ್ಯ?
ಏನೇ ಇರಲಿ ಪೋಲೀಸರ ಕಡೆಯಿಂದ 18ಮೆಟ್ಟಿಲುಗಳ ಮೇಲೇರಿ ಫೋಟೋ ತೆಗೆದ ಪ್ರಕರಣ ಧಾರ್ಮಿಕವಾಗಿ ಅಕ್ಷಮ್ಯ ಅಪರಾಧ. ಇದು ಭಕ್ತಜನತೆಯ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ. ಇದಕ್ಕೆ ಸರಕಾರ ಏನೇ ಉತ್ತರಿಸಿದರೂ ಅದು ಪರಿಹಾರವೂ ಅಲ್ಲ, ಉತ್ತರವೂ ಅಲ್ಲ. ಇಂದು ಹದಿನೆಂಟು ಮೆಟ್ಟಿಲನ್ನೇರಿ ಪಟ ತೆಗೆದು ಮೋಜಿನಾಟ ಆಡಿದವರು ನಾಳೆ ಗರ್ಭಗುಡಿಯ ಅಯ್ಯಪ್ಪ ಪ್ರತಿಷ್ಠೆಯ ಜತೆ ಕುಳಿತು ಚಿತ್ರ ತೆಗೆದರೆ?
ಅದಕ್ಕೂ ಸಮರ್ಥನೆಗಳಿರಬಹುದು. ಆದರೆ ಅದು ಉತ್ತರಗಳಲ್ಲ, ಸಮಜಾಯಿಷಿಯೂ ಅಲ್ಲ ತಾನೇ??