- ವರ್ಷಂಪ್ರತಿ ವಿಭಿನ್ನ ಪ್ರಸಂಗ ಮಾಲಿಕೆಗಳಿಂದ ತೆಂಕುತಿಟ್ಟು ಯಕ್ಷಗಾನದ ಪ್ರದರ್ಶನಗಳಿಗೆ ಶೋಭಾಯಮಾನ ಸಂಪನ್ನತೆ ತುಂಬುವ ಹನುಮಗಿರಿ ಮೇಳ ಈ ಬಾರಿಯಂತೂ ನೂತನ ಪ್ರಸಂಗ “ಸಾಕೇತ ಸಾಮ್ರಾಜ್ಞೆ” ಯನ್ನು ಮೊದಲ ಸಾಲಿನ ಪ್ರದರ್ಶನದಲ್ಲೇ ಸೂಪರ್ ಹಿಟ್ ಎಂದು ಕರೆಸಿಕೊಳ್ಳುವಲ್ಲಿ ಜೈತ್ರಯಾತ್ರೆ ಮುಂದುವರಿಸಿದೆ. ನೋಡಿದ ಪ್ರೇಕ್ಷಕರಿಂದೆಲ್ಲಾ ಮುಕ್ತ ಪ್ರಶಂಸೆಯ ಕರತಾಡನ ಪಡೆದುಕೊಂಡಿದೆ. ಇದು ಈ ಬಾರಿಯ ತಿರುಗಾಟದ ಜನಪ್ರಿಯ ಮತ್ತೊಂದು ಮೆಗಾಹಿಟ್ ಪ್ರಸಂಗ ಎಂದು ನೋಟಕರಿಂದೆಲ್ಲಾ ಅಭಿಪ್ರಾಯ ಮೂಡಿಸಿದೆ. ಈ ಮೂಲಕ “ಸಾಕೇತ ಸಾಮ್ರಾಜ್ಞಿ” ಯಕ್ಷಗಾನ ರಂಗಸ್ಥಳದ ಪ್ರಸಂಗ ಸಾಮ್ರಾಜ್ಞಿಯಾಗಲು ಹೊರಟಿದೆ…!
ಶ್ರೀಕ್ಷೇತ್ರ ಹನುಮಗಿರಿಯಲ್ಲಿ ಸೇವೆಯಾಟ (ಈ ಬಾರಿ ನ.20) ನಡೆದು ಬಳಿಕ ಮಂಗಳೂರಿನ ಶರವು, ಅನಂತರ ಶ್ರೀಮದೆಡನೀರು ಮಠದಲ್ಲಿ ನೂತನ ಪ್ರಸಂಗ ಪ್ರಸ್ತುತಿಯೊಂದಿಗೆ ಹನುಮಗಿರಿ ಮೇಳ ತಿರುಗಾಟಕ್ಕೆ ಹೊರಡುವುದು ವಾಡಿಕೆ. ಇದರಂತೆ ನಿನ್ನೆ (ನ.22) ಎಡನೀರಿನಲ್ಲಿ ಈ ಸಾಲಿನ ಹೊಸ ಪ್ರಸಂಗ ಸಾಕೇತ ಸಾಮ್ರಾಜ್ಞಿ
ಯ ಎರಡನೇ ಪ್ರಯೋಗ. ಆದರೆ ಇದು ನೂರಾರು ಪ್ರದರ್ಶನ ಕಂಡು, ವಿಜಯದುಂಧುಬಿ ಮೊಳಗಿಸಿ ಜನಮನಸೂರೆಗೈದ ಆಖ್ಯಾನದಂತೆ ಆಸ್ವಾದಕ ನೋಟಕರನ್ನೆಲ್ಲ ಮೊದಲ ವೀಕ್ಷಣೆಯಲ್ಲೇ ಆವರಿಸಿದೆ. ಒಮ್ಮೆ ನೋಡಿದವರಲ್ಲಿ ಮತ್ತೊಮ್ಮೆ ನೋಡಬೇಕೆಂಬ ಮೆಚ್ಚುಗೆಯ ಭಾವ ಬರಿಸಿದೆ. ಅದೇ ಈ ಮೇಳದ ಸಾಂಘಿಕ ಸಾಮರ್ಥ್ಯ.
ವರ್ಷಂಪ್ರತಿ ತನ್ನ ಪ್ರಸಂಗ ವೈಶಿಷ್ಟ್ಯದಿಂದಲೇ ಮೇಳ ಮೆರೆಸುವ ಇಲ್ಲಿನ ಕಲಾವಿದರು ಈ ಬಾರಿ ಸಾಕೇತ ಸಾಮ್ರಾಜ್ಞಿ
ಯನ್ನು ತೆಂಕಣದ ಪ್ರಸಂಗ ಸಾಮ್ರಾಜ್ಞಿಯನ್ನಾಗಿಸಲು ಹೊರಟ ಬಗೆಯೇ ಚಂದ..
ಏನಿದು ಸಾಕೇತ ಸಾಮ್ರಾಜ್ಞಿ..?
ಇದು ಕೇವಲ ಪ್ರಸಂಗ ಶೀರ್ಷಿಕೆಯಷ್ಟೇ ಅಲ್ಲ, ವ್ಯಾಮೋಹವೊಂದರ ಪ್ರತಿಮಾರೂಪ. ಆಸೆ,ಹಠಮಾರಿತನಗಳ ದೃಶ್ಯಬಿಂಬ.!
ಇದು ರಾಮಾಯಣದ ಕಥಾ ತಂತುವೇ ಆದರೂ, ಕೇಕಯದ ರಾಜಕುಮಾರಿ ಕೈಕೇಯಿ ‘ಸಾಮ್ರಾಜ್ಞಿ’ಯಾಗುವ ವ್ಯಾಮೋಹದಿಂದ ನೇಮಿ ಚಕ್ರವರ್ತಿಯ ಪತ್ನಿಯಾಗಿ ಅಯೋಧ್ಯೆಗೆ ಕಾಲೂರುವುದೇ ಕಥೆಗೆ ನಾಂದಿ..
ಆದರೆ ನಿಜಕ್ಕೂ ಸಾಮ್ರಾಜ್ಞಿ ಯಾರು…?
ಸಾಮ್ರಾಜ್ಞಿಯಾಗಲು ಏನರ್ಹತೆ..? ಎಂಬುದೇ ಪ್ರಸಂಗಾಂತ್ಯದ ಉತ್ತರ.
ಈ ನಡುವಣ ಕಥಾ ತಂತುವೇ ಕಣ್ಣೆವೆಯಿಕ್ಕದೇ ಪ್ರಸಂಗವನ್ನು ಕಾತರದಿಂದ ನೋಡಿಸುತ್ತದೆ.
ಇದಕ್ಕೆ ಪೂರಕವಾಗಿ ಪ್ರಸಂಗ ಕಾವ್ಯ ಹೆಣೆದ ಕವಿ ಪ್ರಸಾದ್ ಮೊಗೆಬೆಟ್ಟು ಅವರ ಪದ್ಯರಚನೆ ಇಡೀ ಪ್ರಸಂಗದುದ್ದಕ್ಕೂ ಭಾಗವತರಾದ ಚಿನ್ಮಯ ಕಲ್ಲಡ್ಕ, ರವಿಚಂದ್ರ ಕನ್ನಡಿಕಟ್ಟೆ ಕಂಠದಲ್ಲಿ ಮೆರೆಯುತ್ತದೆ. ಭಾವಲೋಲುಪತೆಯಿಂದ ಕಾಡುತ್ತಲೇ, ಹಾಡಾಗಿ ಧ್ವನಿಸುತ್ತದೆ. ಎಲ್ಲರೂ ಬಲ್ಲ ಪೌರಾಣಿಕ ಕಥೆಯೇ ಆದರೂ ಕಲಾವಿದ ವಾಸುದೇವರಂಗಾ ಭಟ್ ಮಧೂರು ಅವರ ಕಥಾ ವಿನ್ಯಾಸ ಶ್ರೇಷ್ಠ ಕಾದಂಬರಿಯೊಂದನ್ನು ನವೀನ ಆಶಯದ ದೃಶ್ಯಕಾವ್ಯದಲ್ಲಿ ಹೆಣೆದಂತೆ ಪ್ರೇಕ್ಷಕರನ್ನು ನವಭಾವದಿಂದ ಹೃದ್ಯವಾಗಿ ಮುಟ್ಟುತ್ತದೆ,
ತಟ್ಟುತ್ತದೆ…
ತೆಂಕಣದ ತಾರಾವರ್ಚಸ್ಸಿನ ಪ್ರಸಿದ್ಧ ಕಲಾವಿದರಾದ ಸೀತಾರಾಂ ಕುಮಾರ್ ಕಟೀಲು ಅವರ ಮಂಥರೆ, ಶೆಟ್ಟಿಗಾರರ ಶಂಬರಾಸುರ, ಉಬರಡ್ಕರ ಶನಿರಾಯ, ಶಶಿಧರ ಕುಲಾಲ್ ಕನ್ಯಾನ ಅವರ ಪರಶುರಾಮ, ವಾ.ರಂಗಾ ಭಟ್ಟರ ಶ್ರೀರಾಮ, ದಿವಾಕರ ರೈಯ ಭರತ, ಬಜಕೂಡ್ಳು ಶತ್ರುಘ್ನ ಮತ್ತು ಹಿರಿಯ ಕಲಾವಿದ ಪೆರ್ಲ ಜಗನ್ನಾಥ ಶೆಟ್ಟರ ವಶಿಷ್ಠ ಪ್ರೌಢತೆಯಿಂದ ಗಾಂಭೀರ್ಯ ಮೆರೆದರೆ ಸದಾಶಿವ ಕುಲಾಲ್ ವೇಣೂರು ದೇವೇಂದ್ರನಾಗಿ ರಂಜಿಸುತ್ತಾರೆ. ಪಾತ್ರಸ್ಪಂದನ, ಮಿಂಚಿನ ಗತಿಯ ದೃಶ್ಯ ಪಲ್ಲಟಗಳ ಜತೆ
ಶ್ರೀರಾಮ ಸಹಿತ ಭರತ,ಶತ್ರುಘ್ನರ ಸಾಮೂಹಿಕ ಕಲ್ಯಾಣೋತ್ಸವವೂ ಸೇರಿದಂತೆ
ಇಡೀ ಪ್ರಸಂಗ ಮನೋಜ್ಞವಾಗಿ ಪ್ರೇಕ್ಷಕರ ಮನತಟ್ಟುತ್ತದೆ. ಮತ್ತೊಮ್ಮೆ ನೋಡುವಂತೆ ಪ್ರೇರೇಪಿಸುತ್ತದೆ. ಪ್ರಸಂಗ ಮೆರೆಸುವಲ್ಲಿ ಹಿಮ್ಮೇಳದ ಕೊಡುಗೆಯೂ ನಿರ್ಣಾಯಕ. ಭಾಗವತಿಕೆಯಲ್ಲಿ ಕನ್ನಡಿಕಟ್ಟೆ-ಚೈತನ್ಯ ಜೋಡಿ ಗಾನ ಮೆರೆಸಿದರೆ ಹಿಮ್ಮೇಳದಲ್ಲಿ ದೇಲಂತಮಜಲು, ಚೈತನ್ಯ ಪದ್ಯಾಣ, ಶ್ರೀಧರ ವಿಟ್ಲ ಮತ್ತು ಕೌಶಲ್ ರಾವ್ ತಮ್ಮ ನುಡಿತಗಳಲ್ಲಿ ಪ್ರತಿಭೆಯನ್ನು ಪಣಕ್ಕಿಟ್ಟು ರಂಗಕ್ಕೆ ಜೀವ ತುಂಬುವುದನ್ನು ಆಸ್ವಾದಿಸುವುದೇ ಆನಂದ. ಒಟ್ಟಂದದಲ್ಲಿ ಹನುಮಗಿರಿ ಮೇಳದ ಕಲಾವಿದರೆಲ್ಲರ ಸಾಂಘಿಕ ಕಾಳಜಿಯ ಪ್ರತ್ಯುತ್ಪನ್ನಮತಿಯೇ ಪ್ರದರ್ಶನ ವೈಭವಕ್ಕೆ ಕಾರಣ.
ಯಾವುದೇ ಅಗ್ಗದ ಮಾತುಗಳ, ಮಸಾಲೆಗಳೇನೂ ಇಲ್ಲದೇ , ಹಾಸ್ಯದ ವಿಕೃತಿ ವಿಜೃಂಭಿಸದೇ, ಏಕತಾನತೆಯ ಕುಣಿತವೇ ಕಾಣಿಸದೇ , ಎದೆಗೆ ನಾಟುವ ಸಂಭಾಷಣೆ -ಮನಕೆ ಮುಟ್ಟುವ ದೃಶ್ಯಗಳೊಂದಿಗೆ ನವೀನ ಆಖ್ಯಾನವಾಗಿ ಪ್ರೇಕ್ಷಕರನ್ನು ಸ್ಪರ್ಶಿಸುತ್ತಿದೆ “ಸಾಕೇತ ಸಾಮ್ರಾಜ್ಞಿ”...
ಪ್ರಸಂಗಾಂತ್ಯದಲ್ಲಿ ಎಲ್ಲದಕ್ಕೂ ಕಾರಣಳಾಗಿ, ಸರ್ವರಿಂದಲೂ ದೂಷಿಸಲ್ಪಟ್ಟ ಹೆಮ್ಮಾರಿ ಹೆಣ್ಣಾಗಿ ಕೈಕೇಯಿ ನುಡಿಯುವ ಮಾತು ತುಂಬಾ ಧ್ವನಿಪೂರ್ಣ…
“ಸಾಮ್ರಾಜ್ಞಿಯಾಗುವ ಮೋಹದಿಂದ ಬಂದವಳು ನಾನು. ಸಾಮ್ರಾಜ್ಯದ ಸಿಂಹಾಸನ ಎಂದರೆ ಅದು ಅಧಿಕಾರದ ಪೀಠವಲ್ಲ, ಅದು ಜನರ ಹೃದಯ ಸಿಂಹಾಸನ ಎಂದರಿಯದೇ ಹೋದೆ. ನಾನೆಲ್ಲಿಗೆ ಸಾಮ್ರಾಜ್ಞಿ..?
ಆ ಅರ್ಹತೆ ನನಗೆಲ್ಲಿಂದ ?ಎಂದು ಕೇಳುವ ಮಾರ್ಮಿಕ ಪ್ರಶ್ನೆಯ ಸನ್ನಿವೇಶ ಇಡೀ ಪ್ರಸಂಗಕ್ಕೊಂದು ಮೌಲ್ಯದ ಉತ್ತರದ ಕಲಾತ್ಮಕ ತಿಲಕವನ್ನಿಡುತ್ತದೆ.
ಪೌರಾಣಿಕ ಪ್ರಸಂಗದ ಸಕಲ ಸೌಂದರ್ಯವನ್ನೂ ಅನಾವರಣಗೊಳಿಸುವ ಈ ಆಖ್ಯಾನದ ಗೆಲುವಿನಲ್ಲಿ ಮೇಳದ ಹಿಮ್ಮೇಳ-ಮುಮ್ಮೇಳದ ಸಾಂಘಿಕ, ಸಮರ್ಪಣ ದುಡಿಮೆ ಇದೆ. ಅದರಲ್ಲೂ ಮೇಳದ ಯಜಮಾನರಾದ ಡಾ.ಟಿ.ಶಾಂಭಟ್ಟರ ಕಾಲೋಚಿತವಾದ, ಮೌಲ್ಯೋಚಿತ ಕಲಾ ನಿರ್ದೇಶನಗಳಿವೆ. ಕಲಾವಿದರಲ್ಲಿ ಹಿರಿ-ಕಿರಿಯ ಭೇಧವಿಲ್ಲದೇ ಪ್ರತಿಯೊಬ್ಬರ ಪಾತ್ರಪೋಷಣೆಯಿಂದ ಈ ಪ್ರಸಂಗ ಭರ್ತಿ ಆರೂವರೆ ತಾಸಿನ ಅಪ್ರತಿಮ ಪೌರಾಣಿಕ ರಸದೌತಣ ನೀಡುತ್ತಿದೆ.
ಬದಲಾದ ಸಾಂಸ್ಕೃತಿಕ ವಾತಾವರಣದಲ್ಲಿ ಸಮಾಜ ಕಟ್ಟಲು ಇಂಥ ಪ್ರಸಂಗಗಳ ಕೊಡುಗೆ ಅಗತ್ಯ.
(ಚಿತ್ರಗಳು ಉದಯ ಕಂಬಾರು, ವರ್ಣ ನೀರ್ಚಾಲ್)