- ಕಣಿಪುರ ಸುದ್ದಿಜಾಲ,( ನ.22)
ಕೇರಳದ ಉಪಚುನಾವಣಾ ಫಲಿತಾಂಶಗಳು ನಾಳೆ ತಿಳಿಯಲಿದ್ದು, ರಾಜಕೀಯ ಕುತೂಹಲಿಗಳ ಕಣ್ಣೆಲ್ಲ ಈಗ ಪಾಲಕ್ಕಾಡಿನತ್ತ ನೆಟ್ಟಿದೆ.
ಕೇರಳದ ಪಾಲಕ್ಕಾಡ್ ಮತ್ತು ಚೋಲಕ್ಕರ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆದರೆ ಕೇಂದ್ರ ವಿಪಕ್ಷ ನಾಯಕ ರಾಹುಲ್ ಗಾಂಧಿ ಗೆದ್ದು, ಉಪೇಕ್ಷಿಸಿದ ವಯನಾಡು ಸಂಸದೀಯ ಕ್ಷೇತ್ರಕ್ಕೆ ನಡೆದ ಮರು ಚುನಾವಣೆಯ ಫಲಿತಾಂಶ ನಾಳೆ ಗೊತ್ತಾಗಲಿದೆ.
ವಯನಾಡಿನಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕ ಗಾಂಧಿ ಚೊಚ್ಚಲ ಸ್ಪರ್ಧೆ ಎದುರಿಸಿ,ಗೆಲುವು ಖಚಿತ ಎನ್ನಲಾದರೂ ರಾಹುಲ್ ಗಾಂಧಿಗೆ ದೊರೆತ ಬಹುಮತ ಪ್ರಿಯಾಂಕ ಗಾಂಧಿಗೆ ಸಿಗುವುದೇ ಎಂಬುದೇ ಕುತೂಹಲವಾಗಿದೆ. ಉಳಿದಂತೆ ಚೋಲಕ್ಕರ ಎಡರಂಗದ ನಿರೀಕ್ಷೆಯ ಕಣವಾದರೆ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರ ಬಿಜೆಪಿಗೆ ಭರವಸೆ ಹುಟ್ಟಿಸಿದೆ. ಆದ್ದರಿಂದಲೇ ರಾಜಕೀಯ ಕುತೂಹಲಿಗಳೆಲ್ಲರ ಕಣ್ಣು ಈಗ ಪಾಲಕ್ಕಾಡಿನತ್ತ ನೆಟ್ಟಿದೆ. ನಾಳೆ ಮಧ್ಯಾಹ್ನದೊಳಗೆ ಪಾಲಕ್ಕಾಡಿನ ಫಲಿತಾಂಶ ತಿಳಿಯಲಿದ್ದು, ಕೇರಳ ರಾಜಕೀಯದಲ್ಲದು ನಿರ್ಣಾಯಕ ಎನಿಸಿದೆ.
(ಈ ಸುದ್ದಿಯ ಇನ್ನಷ್ಟು ಭಾಗ ಈ ಕೆಳಗಿನ ಜಾಹೀರಾತಿನ ಬಳಿಕ ಇದೆ…..)
2021ರಲ್ಲಿ ನಡೆದ ಪಾಲಕ್ಕಾಡ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಮೆಟ್ರೋಮೇನ್ ಇ.ಶ್ರೀಧರನ್ ಇಲ್ಲಿ ಕೇವಲ 3,700ಮತಗಳ ಅಂತರದಲ್ಲಿ ಸೋಲುಂಡಿದ್ದರು. ಅಂದು ಗೆಲುವಿನ ನಗೆ ಬೀರಿದ ಕಾಂಗ್ರೆಸ್ನ ಶಾಫಿ ಪರಂಬಿಲ್ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ವಡಗರ ಸಂಸದೀಯ ಕ್ಷೇತ್ರದಲಿ ಸ್ಪರ್ಧಿಸಿ ಸಂಸದನಾಗಿ ಆಯ್ಕೆಯಾಗಿದ್ದರು. ಈ ಕಾರಣದಿಂದ ತೆರವಾದ ಪಾಲಕ್ಕಾಡ್ ನಲ್ಲಿ ನಡೆದ ಉಪಚುನಾವಣೆ ಇಡೀ ಕೇರಳದ ರಾಜಕೀಯ ವಲಯವನ್ನೇ ಈಗ ಕುತೂಹಲದ ಸೂಜಿಮೊನೆಯಲ್ಲಿ ನಿಲ್ಲಿಸಿದೆ.
ಕಾತರದಿಂದ ಪಾಲಕ್ಕಾಡನ್ನು ಗಮನಿಸುವಂತೆ ಮಾಡಿದೆ.
ಕಾಂಗ್ರೆಸ್ ಯುವನಾಯಕ ರಾಹುಲ್ ಮಾಂಗೂಟ್ಟತ್ತಿಲ್ ಈ ಬಾರಿ ಯುಡಿಎಫ್ ಅಭ್ಯರ್ಥಿಯಾದರೆ ಪಾಲಕ್ಕಾಡಿನವರೇ ಆದ ರಾಜಕೀಯ ಅನುಭವಿ ಕೃಷ್ಣಕುಮಾರ್ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ನಿಂದ ಬಂಡಾಯವೆದ್ದು ಹೊರನಡಿದ ಸರಿನ್ ಎಡರಂಗದ ಅಭ್ಯರ್ಥಿಯಾದ ಕಾರಣ ಇದು ತ್ರಿಕೋನ ಸ್ಪರ್ಧಾಕಣವಾಗಿದೆ. ಆದರೆ ಪಾಲಕ್ಕಾಡ್ ನಗರಸಭೆಯಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಚುನಾವಣೆಯಿಂದ ಚುನಾವಣೆಗೆ ಮತ ಹೆಚ್ಚಿಸುತ್ತಲೇ ಬೆಳೆದು ಕಳೆದ ಬಾರಿ ಸಣ್ಣ ಅಂತರದಲ್ಲಿ ಸೋಲುಂಡ ಕಾರಣ ಈ ಬಾರಿ ಪಾಲಕ್ಕಾಡಿನ ಫಲಿತಾಂಶ ಪ್ರವಚನಾತೀತ ಎನಿಸಿದೆ.
ಕಳೆದ ಬಾರಿಯ ಚುನಾವಣೆಗಿಂತ ಈ ಬಾರಿಯ ಉಪಚುನಾವಣೆಯಲ್ಲಿ ಇಲಿ 5ಶೇ. ಮತದಾನ ಕುಸಿತ ಕಂಡಿದೆ. ಈ ಕುಸಿತವೇ ಇಲ್ಲಿನ ಫಲಿತಾಂಶವನ್ನೂ ನಿರ್ಣಯಿಸಲಿದೆ. ಆದ್ದರಿಂದಲೇ ಕಾಂಗ್ರೆಸ್ ಪಾಳಯದಲ್ಲಿ ಆತ್ಮವಿಶ್ವಾಸಕಿಂತ ಅಧಿಕ ಆತಂಕವೂ ಇದೆ. ಇದೇ ವೇಳೆ ಬಿಜೆಪಿ ಪಾಳಯ ಪೂರ್ಣ ಆತ್ಮವಿಶ್ವಾಸದಿಂದ ಸಾಮಾಜಿಕ ಜಾಲತಾಣದಲ್ಲಿ ಭರವಸೆಯ ಸಂಭ್ರಮಗಳನ್ನು ಪ್ರಕಟಿಸುತ್ತದೆ. ಪಾಲಕ್ಕಾಡ್ ನಗರಸಭೆ ಬಿಜೆಪಿಯ ಶಕ್ತಿ ಕೇಂದ್ರವಾಗಿದ್ದು ಇಲ್ಲಿ ಪಕ್ಷ ಪಡೆಯುವ ಮತ ನಿರ್ಣಾಯಕ ಮುನ್ನಡೆ ತಂದೊಡ್ಡಲಿದೆ. ಈ ಬಾರಿ ನಗರಸಭೆಯಲ್ಲಿ ಬಿಜೆಪಿ 40ಸಾವಿರ ಮತ ಪಡೆದು, ಉಳಿದ ಮೂರು ಪಂಚಾಯತುಗಳಿಂದ ಗರಿಷ್ಟ 20ಸಾವಿರದಷ್ಟು ಪಡೆದು ಒಟ್ಟು 60ಸಾವಿರ ಮತಗಳಿಸಿ, 10ಸಾವಿರ ಮತಗಳ ಬಹುಮತದಿಂದ ಗೆಲ್ಲುವ ಆತ್ಮವಿಶ್ವಾಸವನ್ನು ನಾಯಕರು ಪ್ರಕಟಿಸಿದ್ದಾರೆ. ಈನಿಟ್ಟಿನಲ್ಲಿ ಬೂತ್ ಮಟ್ಟದ ಕೆಲಸಕ್ಕೆ ಬಿಜೆಪಿ ಮುಂದಾಗಿದ್ದುದೇ ಅವರ ಭರವಸೆ.
ಎಡರಂಗದಿಂದ ಸ್ಪರ್ಧಿಸುವ ಅಭ್ಯರ್ಥಿ ಸರಿನ್ ಕಾಂಗೈ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥನಾಗಿದ್ದ ವ್ಯಕ್ತಿ. ಇವರು ಕಾಂಗೈನ ಮತಗಳನ್ನು ಎಡರಂಗದತ್ತ ಸೆಳೆದರೆ ಅದು ಕೂಡಾ ಬಿಜೆಪಿಗೆ ಅನುಕೂಲವೇ ಆಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ. ಇದೇ ವೇಳೆ ಬಿಜೆಪಿಯ ಪ್ರಬಲನಾಯಕ ಸಂದೀಪ್ ವಾರಿಯರ್ ಕಾಂಗ್ರೆಸ್ ಸೇರ್ಪಡೆಯಾದ ಕಾರಣ ಸಂಘಪರಿವಾರ ಪಾಲಕ್ಕಾಡನ್ನು ಪ್ರತಿಷ್ಟೆಯ ಕಣವಾಗಿ ಕಂಡಿದೆ. ಸ್ವತಃ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಮುಂಚೂಣಿಯಲ್ಲಿ ನಿಂತು ಪಾಲಕ್ಕಾಡ್ ಚುನಾವಣೆಗೆ ಕೆಲಸ ಮಾಡಿದ್ದು, ಕೇರಳ ವಿಧಾನಸಭೆಗೆ ಪಾಲಕ್ಕಾಡಿನಿಂದ ಬಿಜೆಪಿ ಶಾಸಕರ ಆಯ್ಕೆ ಖಚಿತವೆಂದು ಸಂಭ್ರಮದಲ್ಲಿದೆ.
ಆದರೆ ಮತ ಎಣಿಕೆ ನಾಳೆ ಬೆಳಿಗ್ಗೆ ಆರಂಭಗೊಂಡು ಮಧಾಹ್ನದ ವೇಳೆಯಷ್ಟೇ ಫಲಿತಾಂಶ ತಿಳಿಯಲಿದೆ. ಪಾಲಕ್ಕಾಡಿನ ಮೂಲಕ ಕೇರಳ ರಾಜಕೀಯ ಸ್ಥಿತ್ಯಂತರಕ್ಕೆ ಈ ಉಪಚುನಾವಣೆ ಮುನ್ನುಡಿ ಬರೆಯುವುದೇ..?
ನಾಳೆಯ ತನಕ ಕಾಯಬೇಕಾಗಿದೆ.