ಕಣಿಪುರ ಸುದ್ದಿಜಾಲ,ಕೊಚ್ಚಿ:
ಭೂಕುಸಿತದಿಂದ ನೂರಾರು ಸಾವು,ನೋವು ಸಂಭವಿಸಿ ತತ್ತರಿಸಿದ ವಯನಾಡಿನಲ್ಲಿ ನ.19ರಂದು ಕೇರಳದ ಆಡಳಿತಾರೂಢ ಎಡರಂಗ ಮತ್ತು ವಿಪಕ್ಷ ಐಕ್ಯರಂಗ(ಯುಡಿಎಫ್) ನಡೆಸಿದ ಹರತಾಳವನ್ನು ಕೇರಳ ಹೈಕೋರ್ಟು ತೀಕ್ಷ್ಣವಾಗಿ ಟೀಕಿಸಿದೆ.
ದಿಢೀರನೆ ಹರತಾಳ ನಡೆಸುವುದು ಜನಜೀವನದ ಸ್ವಾತಂತ್ರ್ಯವನ್ನೇ ಕಬಳಿಸುವ ಪ್ರಕ್ರಿಯೆ. ಇದು ಅತ್ಯಂತ ಬೇಜವಾಬ್ದಾರಿಯ ಕೆಲಸ. ದುರಂತಭೂಮಿ ವಯನಾಡಿನಲ್ಲಿ ಮನುಷ್ಯರು ಮರಳಿ ಬದುಕು ಕಟ್ಟಿಕೊಳ್ಳಲು ಪಾಡುಪಡುತ್ತಿರುವಾಗ ತನ್ಮಧ್ಯೆ ಪ್ರತಿಭಟನೆಯ ಹೆಸರಲ್ಲಿ ಹರತಾಳ ನಡೆಸಿರುವುದನ್ನು ಹೇಗೆ ಸಮರ್ಥಿಸುತ್ತೀರಿ..? ಎಂದು ಪ್ರಶ್ನಿಸಿದ ಹೈಕೋರ್ಟು ಪ್ರತಿಭಟನೆಗೆ ಹರತಾಳವೇ ನಡೆಸಿ ಜನರ ಸ್ವಾತಂತ್ರ್ಯ ಕಸಿಯಬೇಕೇ..? ಎಂದು ಪ್ರಶ್ನಿಸಿದೆ.
ಕೇರಳವನ್ನು ಆಳುವ ಎಡರಂಗ ಹರತಾಳದಲ್ಲಿ ಭಾಗಿಯಾದುದ್ದೇಕೆಂದು ಪ್ರಶ್ನಿಸಿದ ಹೈಕೋರ್ಟು ದುರಂತ ಭೂಮಿಯಲ್ಲಿ ಹರತಾಳ ಬೇಕಿತ್ತೇ ಎಂದು ವಿಚಾರಿಸಿದೆ.
ವಯನಾಡಿನ ಭೂಕುಸಿತವನ್ನು ರಾಷ್ಟ್ರೀಯ ಮಹಾದುರಂತವೆಂದು ಕೇಂದ್ರ ಸರಕಾರ ಘೋಷಿಸಲಾಗದು ಎಂದ ಹಿನ್ನೆಲೆಯಲ್ಲಿ ಕೇಂದ್ರಸರಕಾರದ ವಿರುದ್ದವಾಗಿ ನ.19ರಂದು ವಯನಾಡು ಜಿಲ್ಲೆಯಲ್ಲಿ ಹರತಾಳಕ್ಕೆ ಕರೆನೀಡಲಾಗಿತ್ತು.