ಪುತ್ತೂರು : ಭಜನಾರ್ಥಿಗಳಿಂದ ಕನಕದಾಸ ಜಯಂತಿ ಆಚರಣೆ

by Narayan Chambaltimar

ಕಣಿಪುರ ಸುದ್ದಿಜಾಲ,ಪುತ್ತೂರು

ದಾಸ ಸಾಹಿತ್ಯ ಸಂದೇಶಗಳು ಶತಮಾನ ದಾಟಿದ್ದರೂ ಎಂದಿಗೂ ಪ್ರಸ್ತುತವಾಗಿದೆ. ಇನ್ನನೇಕ ಶತಮಾನ ದಾಟಿದರೂ ಅದು ಹಳತಾಗದ ವಸ್ತು. ಕಾರಣ ಅದು ಮಾನವ ಬದುಕಿಗೆ ಕನ್ನಡಿ ಹಿಡಿದಿದೆ. ಆದ್ದರಿಂದ ಬದಲಾಗುತ್ತಿರುವ ಹೊಸ ಪೀಳಿಗೆಗೆ ದಾಸ ಸಾಹಿತ್ಯ ಕೈ ದಾಟಿಸಬೇಕೆಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತಾಧಿಕಾರಿ ನವೀನ್ ಕುಮಾರ್ ಭಂಡಾರಿ ಹೇಳಿದರು.

ವೈದೇಹಿ-ವೈಷ್ಣವಿ ಮಹಿಳಾ ಭಜನಾ ಮಂಡಳಿ ಮತ್ತು ಕಾಟುಕುಕ್ಕೆ ಭಜನಾ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಪುತ್ತೂರು ಶ್ರೀಮಹಾಲಿಂಗೇಶ್ವರ ದೇವಳದ ಸಹಕಾರದೊಂದಿಗೆ ಇಲ್ಲಿನ ನಟರಾಜ ವೇದಿಕೆಯಲ್ಲಿ ನ.20ರಂದು ನಡೆದ ಕನಕ ಜಯಂತಿ ಸಮಾರಂಭ ಮತ್ತು ಭಜನಾ ಮಂಡಳಿಗಳ 12ನೇ ವರ್ಷದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ದೇವಸ್ಥಾನ ಕೇಂದ್ರೀಕರಿಸಿ ಭಜನಾ ಮಂಡಳಿಗಳು ಸಕ್ರಿಯವಾಗಬೇಕು. ಭಗವನ್ನಾಮ ಸಂಕೀರ್ತನೆಯೊಂದಿಗೆ ಜನತೆ ಸಾಂಘಿಕವಾಗಿ ಮೇಲು,ಕೀಳಿಲ್ಲದೇ ಬೆರೆತಾಗ ಮಾತ್ರವೇ ಸಮಾಜದ ಐಕ್ಯಮತ್ಯ ಸಾಧ್ಯ. ಸಮಾಜವನ್ನು ಜೋಡಿಸುವ ಶಕ್ತಿ ಭಜನೆಗೆ ಇದೆ ಎಂದವರು ನುಡಿದರು.

ಸಂಕೀರ್ತನಕಾರ, ಮಧ್ವಾದೀಶ ವಿಠಲದಾಸ ರಾಮಕೃಷ್ಣ ಕಾಟುಕುಕ್ಕೆ ಅಧ್ಯಕ್ಷತೆ ವಹಿಸಿದರು. ಭಜನೆಗೆ ಮೇಲು,ಕೀಳು, ಜಾತಿ, ಶೌಚಗಳೇನೂ ಇಲ್ಲ. ಆದ್ದರಿಂದ ಭಜನೆಯಲ್ಲಿ ಪ್ರತಿ ಮನೆಯೂ ಜಾಗೃತವಾಗಿ ತೊಡಗುವುದೇ ಹಿಂದೂ ಜಾಗೃತಿ. ಭಜನೆ ಬದುಕನ್ನು ಜೋಡಿಸುವ, ಜೀವನ ಪ್ರೇರಣೆ ನೀಡುವ ಔಷಧಿ ಎಂದವರು ತಿಳಿಸಿದರು.

ಪುತ್ತೂರು ಶ್ರೀ ಮಹಾಲಿಂಗೇಶ್ವರದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ ಮುಖ್ಯ ಅತಿಥಿಗಳಾಗಿದ್ದರು. ಇದೇ ಸಂದರ್ಭ ಕಲ್ಕೂರ ಪ್ರತಿಷ್ಠಾನದ ಕನಕದಾಸ ಪ್ರಶಸ್ತಿ ಮುಡಿದ ರಾಮಕೃಷ್ಣ ಕಾಟುಕುಕ್ಕೆ ಅವರನ್ನು ಭಜನಾಮಂಡಳಿ ವತಿಯಿಂದ ಗುರುವಂದನೆ ಸಹಿತ ಅಭಿನಂದಿಸಲಾಯಿತು.
ಸಂಗೀತ ಗುರು, ಖ್ಯಾತ ಗಾಯಕ ನಟರಾಜ ಶರ್ಮ ಬಳ್ಳಪದವು ಉಪಸ್ಥಿತರಿದ್ದರು. ವೈದೇಹಿ ಭಜನಾ ಮಂಡಳಿಯ ವತ್ಸಲಾ ರಾಜ್ಞಿ ವಾರ್ಷಿಕ ವರದಿ ಮಂಡಿಸಿದರು. ಉಷಾಜಯರಾಂ, ಪ್ರೇಮಾರಂಜನ್, ಆಶಾ, ಪ್ರೇಮಾ, ಶೈಲಜ, ಅತಿಥಿಗಳಿಗೆ ಪುಸ್ತಕ ಕಾಣಿಕೆ ನೀಡಿದರು. ರೇಣುಕಾ ,ಸಂಜೀವಿ ಪ್ರಾರ್ಥನೆ ಹಾಡಿದರು. ವೈಷ್ಣವಿ ಭಜನಾ ಮಂಡಳಿಯ ಜ್ಯೋತಿ ನಾಯಕ್ ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ವೈದೇಹಿ ಅಧ್ಯಕ್ಷೆ ಟಿ.ಪ್ರೇಮಲತಾ ರಾವ್ ವಂದಿಸಿದರು. ವಿ.ಜಯಲಕ್ಷ್ಮಿ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಂಗವಾಗಿ ರಾಮಕೃಷ್ಣ ಕಾಟುಕುಕ್ಕೆ ಮತ್ತು ಭಜನಾ ಮಂಡಳಿ ಸದಸ್ಯರಿಂದ ಸಮೂಹ ನಾಮಸಂಕೀರ್ತನೆ ನಡೆಯಿತು.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00