by Narayan Chambaltimar

ಕಣಿಪುಲ, ಉಡುಪಿ(ನ.20)ರ ಸುದ್ದಿಜಾ

ನಕ್ಸಲ್ ನಾಯಕ ವಿಕ್ರಂ ಗೌಡ ಹತನಾದದ್ದು ಪೂರ್ವಯೋಜಿತ ಕೃತ್ಯವೂ ಅಲ್ಲ, ನಕಲಿ ಎನ್ಕೌಂಟರೂ ಅಲ್ಲ. ಆತನ ಎನ್ಕೌಂಟರ್ ಕುರಿತಾಗಿ ಸೃಷ್ಟಿಸುತ್ತಿರುವುದು ಸುಳ್ಳು ಪುಕಾರು. ಇದರಲ್ಲಿ ಗುಮಾನಿಗೆ ಯಾವುದೇ ಅಂಶಗಳಿಲ್ಲ ಎಂದು ಕರ್ನಾಟಕ ಪೋಲೀಸ್ ಇಲಾಖೆಯ ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣವ್ ಮೊಹಂತಿ ಹೇಳಿದರು.

ಹೆಬ್ರಿ ಪೋಲೀಸ್ ಠಾಣೆಯಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು ನಕ್ಸಲ್ ನಾಯಕ ವಿಕ್ರಂಗೌಡ ಪ್ರಕರಣವನ್ನೀಗ ಪೋಲೀಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ಈ ಕುರಿತು ಹೆಬ್ರಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸೋಮವಾರ ಮುಸ್ಸಂಜೆ 6ಗಂಟೆಗೆ ವಿಕ್ರಂಗೌಡನ ಎನ್ಕೌಂಟರ್ ನಡೆದಿದೆ. ನಕ್ಸಲ್ ನಿಗ್ರಹ ಪಡೆಯ ದಳದೊಂದಿಗೆ ಆತ ಮುಖಾಮುಖಿ ಸೆಣಸಾಟಕ್ಕಿಳಿದ ಕಾರಣ ಆತನ ಎನ್ಕೌಂಟರ್ ನಡೆದಿದೆ. ಶರಣಾಗತಿಗೆ ಅವಕಾಶವಿತ್ತರೂ ಜಗ್ಗದೇ ಪೋಲೀಸರ ಮೇಲೆ ಧಾಳಿ ನಡೆಸಿದ ಕಾರಣ ಆತ್ಮರಕ್ಷಣೆಗಾಗಿ ನಡೆಸಿದ ಪ್ರತಿದಾಳಿಯಲ್ಲಿ 46ರ ಹರೆಯದ ನಕ್ಸಲ್ ನಾಯಕನ ಇತಿಶ್ರೀ ಆಗಿದೆ. ಆತನ ತಂಡದಲ್ಲಿ ಮೂರ್ನಾಲ್ಕು ಮಂದಿಗಳಿದ್ದು, ಅವರು ಕಾಡೊಳಗೆ ಪಾರಾಗಿದ್ದಾರೆ. ಇವರಿಗಾಗಿ ಕೂಂಬಿಂಗ್ ಮುಂದುವರಿಯುತ್ತಿದೆ ಎಂದವರು ತಿಳಿಸಿದರು.

ಶರಣಾದವರಿಗೆ ವಿಶೇಷ ಪ್ಯಾಕೇಜ್

ನಕ್ಸಲ್ ಚಟುವಟಿಕೆಗಳಲ್ಲಿದ್ದ ಯಾರೇ ಆದರೂ ನಕ್ಸಲೀಯ ಪ್ರವೃತ್ತಿಗಳನ್ನೆಲ್ಲಾ ತೊರೆದು ಸಹಜ ಬದುಕಿಗೆ ಮರಳುವುದಿದ್ದರೆ ಶರಣಾಗತಿಗೆ ಮೊದಲ ಆದ್ಯತೆ ಇದೆ. ಶರಣಾಗಿ ನಾಗರಿಕ ಸಮಾಜದ ಮುಖ್ಯವಾಹಿನಿಗೆ ಬರುವುದಾದಲ್ಲಿ ರಾಜ್ಯ ಸರಕಾರ ವಿಶೇಷ ಪ್ಯಾಕೇಜಿನ ಪುನರ್ವಸತಿ ಯೋಜನೆ ಕಲ್ಪಿಸಲಿದೆ. ಈ ಹಿನ್ನೆಲೆಯಲ್ಲಿ ಪೋಲೀಸ್ ಇಲಾಖೆ ಶರಣಾಗಲು ಮೊದಲ ಆದ್ಯತೆ ನೀಡುತ್ತಿದೆ. ಕಾನೂನು ಉಲ್ಲಂಘಿಸಿ ಪೋಲೀಸರ ಮೇಲೆಯೇ ಆಕ್ರಮಣಕ್ಕಿಳಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಅವರು ತಿಳಿಸಿದರು

 

ಕ್ರಾಂತಿಯ ಹೋರಾಟಗಾರನಿಗೆ
ಸಂಪ್ರದಾಯಿಕ ಅಂತ್ಯೋಪಚಾರ

ಉಡುಪಿ ಜಿಲ್ಲೆಯ ಹೆಬ್ರಿ ಠಾಣಾ ವ್ಯಾಪ್ತಿಯ ಪೀತಬೈಲಿನ ಫರಿಸರದ ವಿಕ್ರಂಗೌಡನಿಗೆ ಸೇರಿದ್ದ ಕೂಡ್ಲು ಎಂಬಜಾಗದಲ್ಲಿ ಬುಧವಾರ ಅಪರಾಹ್ನ ಅಂತ್ಯ ಸಂಸ್ಕಾರ ನಡೆಯಿತು. ಈ ವೇಳೆ ಸಮೀಪ ಬಂಧುಗಳು, ಮಾಧ್ಯಮದವರು, ಪೋಲೀಸರು, ಸ್ಥಳೀಯರಿದ್ದರು.
ವಿಕ್ರಂಗೌಡ ಆಲಿಯಾಸ್ ಶ್ರೀಕಾಂತ್ ಕೇವಲ ಪ್ರಾಥಮಿಕ ತರಗತಿಯಷ್ಟೇ ಕಲಿತು ಬಡತನದ ಹಿನ್ನೆಲೆಯಲ್ಲಿ ಮುಂಬೈ ಹೋಟೆಲ್ ಕೆಲಸಕ್ಕೆ ಹೋಗಿದ್ದನು. ಅಲ್ಲಿಂದ ಮರಳಿ ಬಂದು ಸ್ಥಳೀಯ ಹೋರಾಟಗಳಲ್ಲಿ ತೊಡಗಿದ್ದಾಗ ನಕ್ಸಲ್ ಸಂಪರ್ಕವಾಗಿತ್ತು. ಈ ನಡುವೆ ಪೋಲೀಸ್ ಕಿರುಕುಳದಿಂದ ರೊಚ್ಚಿಗೆದ್ದು ನಕ್ಸಲೀಯರ ಜತೆ ಸೇರಿಕೊಂಡನು. ನಕ್ಸಲರ ಜತೆ ಸೇರಿಕೊಂಡ ಬಳಿಕ ಮನೆಯ ಸಂಪರ್ಕವನ್ನೇ ಕಡಿದುಕೊಂಡಿದ್ದ ಆತ ನಕ್ಸಲೀಯ ನಾಯಕನಾಗಿ ಬೆಳೆದದ್ದೇ ರೋಚಕ. ಈತನ ವಿರುದ್ದ ಮೂರು ರಾಜ್ಯಗಳಲ್ಲಿ 61 ಕೇಸುಗಳಿವೆಯೆಂದು ಪೋಲೀಸರು ತಿಳಿಸಿದ್ದಾರೆ.
20ವರ್ಷ ಹಿಂದೆ ಮನೆ ತೊರೆದವ ಕುಖ್ಯಾತ ನಕ್ಸಲೀಯನ ಪಾರ್ಥಿವ ಶರೀರವಾಗಿ ಅದೇ ನಾಡಿಗೆ ಮರಳಿ ತಲುಪಿದಾಗ ಸೋದರಿ ಸಹಿತ ಕುಟುಂಬಿಕರು ಕಂಬನಿಗೆರೆದರು. ಆತ ಅನಾಥನಂತೆ ಆಗುವುದು ಬೇಡ ಅದಕ್ಕಾಗಿ ಶವ ಸ್ವೀಕರಿಸಿಕೊಂಡೆವು ಎನ್ನುತ್ತಲೇ ಕ್ರಾಂತಿಯ ಹೋರಾಟಗಾರನಿಗೆ ಸಾಂಪ್ರದಾಯಿಕ ಅಂತ್ಯೋಪಚಾರ ಸಲ್ಲಿಸಿದರು.

 

 

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00