ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಶೇಣಿ ಶಾರದಾಂಬ ಹೈಸ್ಕೂಲಿನಲ್ಲಿ ಜರಗುತ್ತಿದ್ದು, ಉಪಜಿಲ್ಲಾ ಮಟ್ಟದ ಹೈಸ್ಕೂಲ್ ವಿಭಾಗದ ಹುಡುಗರ ಶಾಸ್ತ್ರೀಯ ಸಂಗೀತ, ಗಾನಾಲಾಪನ(ಕಾವ್ಯ ವಾಚನ) ಮತ್ತು ಅಷ್ಟಪದಿ ಪಾರಾಯಣ ಎಂಬ ಮೂರು ವಿಭಾಗದಲ್ಲಿ ಎಗ್ರೇಡ್ ಸಹಿತ ಬದಿಯಡ್ಕ ನವಜೀವನ ಹೈಸ್ಕೂಲಿನ ವಿದ್ಯಾರ್ಥಿ ಪ್ರದ್ಯುಮ್ನ ಶರ್ಮ ಪ್ರಥಮ ಬಹುಮಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿದ್ದಾನೆ.
ಉಬ್ರಂಗಳ ನಿವಾಸಿ ಉದ್ಯಮಿ ರಂಗಶರ್ಮ ಉಪ್ಪಂಗಳ ಮತ್ತು ಸ್ಮಿತಾ ದಂಪತಿಯ ಪುತ್ರನಾದ ಪ್ರದ್ಯುಮ್ನ ಬದಿಯಡ್ಕ ನವಜೀವನ ಹೈಸ್ಕೂಲಿನ 9ನೇ ತರಗತಿ ವಿದ್ಯಾರ್ಥಿ. ವಿದುಷಿ ವಾಣಿ ಪ್ರಸಾದ್ ಕಬೆಕ್ಕೋಡು ಅವರ ಶಿಷ್ಯನಾದ ಪ್ರದ್ಯುಮ್ನ ಈಗಾಗಲೇ ಎಳೆಯ ಭರವಸೆಯ ಕಲಾವಿದನೆಂದು ಪ್ರಶಂಸಿಸಲ್ಪಟ್ಟು ಸುಮಾರು 15ರಷ್ಟು ವೇದಿಕೆಗಳಲ್ಲಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನೀಡಿದ್ದಾನೆ. ಕೆಲವೆಡೆ ಸ್ಪರ್ಧೆಗಳಲ್ಲಿ ಭಾವಗೀತೆ ಹಾಡಿಯೂ ಬಹುಮಾನ ಗಳಿಸಿದ್ದಾನೆ.
ಸಂತೋಷ,ಸಂಭ್ರಮ ಎರಡೂ ಇದೆ..
ಶಾಸ್ತ್ರೀಯ ಸಂಗೀತಾದಿ ಕಲೆಯಲ್ಲಿ ನಾನಿನ್ನೂ ಎಳೆಯ ಅಭ್ಯಾಸಿ ವಿದ್ಯಾರ್ಥಿ. ನಮ್ಮ ಉಪಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಥಮ ಬಹುಮಾನ ದೊಂದಿಗೆ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿರುವುದರಲ್ಲಿ ಸಂತೋಷ,ಸಂಭ್ರಮ ಎರಡೂ ಇದೆ. ನನ್ನ ಈ ಅರ್ಹತೆಗೆ ನನ್ನ ಸಂಗೀತ ಮಾರ್ಗದರ್ಶಕಿಯಾದ ಗುರುಗಳು ಮತ್ತು ನನಗೆ ಪ್ರೋತ್ಸಾಹ ನೀಡುವ ಹೆತ್ತವರೇ ಕಾರಣ. ಜಿಲ್ಲಾ ಮಟ್ಟದ ಸ್ಪರ್ಧೆ ಪ್ರತಿಭಾವಂತರ ಸಂಗಮ. ಅಲ್ಲಿ ನನಗೂ ಪಾಲ್ಗೊಳ್ಳಲು, ಅದನ್ನು ಅನುಭವಿಸಲು ಅವಕಾಶ ಒದಗಿದೆಯಲ್ಲ ಅದೇ ಸಂತೋಷ ಎಂದು ಪ್ರದ್ಯುಮ್ನ ಅಭಿಪ್ರಾಯಪಟ್ಟನು.