ಕಣಿಪುರ ಸುದ್ದಿಜಾಲ, ಉಡುಪಿ(ನ.19)
ಒಂದು ಸುದೀರ್ಘ ಕಾಲೀನವಾದ ಬಿಡುವಿನ ಬಳಿಕ ಪಶ್ಚಿಮಘಟ್ಟದ ತಪ್ಪಲಿನ ಕಾಡೊಳಗಿಂದ ಬಂದೂಕಿನ ಮೊರೆತದ ಸದ್ದು ಮೊಳಗಿವೆ. ಚೀರಾಟದ ಮೊರೆತ ಕೇಳಿದೆ.
ನಿನ್ನೆ ತಡರಾತ್ರಿ ಉಡುಪಿ ಜಿಲ್ಲೆಯ ಹೆಬ್ರಿಯ ಕಬ್ಬಿನಾಲೆಯ ಕಾಡಲ್ಲಿ ನಡೆದ ಅನಿರೀಕ್ಷಿತ ನಕ್ಸಲ್ ಮುಖಾಮುಖಿಯಲ್ಲಿ ಎನ್ಕೌಂಟರ್ ನಡೆದಿದ್ದು ಮೋಸ್ಟ್ ವಾಂಟೆಡ್ ಆಗಿದ್ದ ಕುಖ್ಯಾತ ನಕ್ಸಲ್ ನಾಯಕ ವಿಕ್ರಂ ಗೌಡ ಪೋಲೀಸರ ಗುಂಡಿಗೆ ಕಾಡೊಳಗೆ ನೆತ್ತರುಚೆಲ್ಲಿ ಹತನಾದನು
ಕೇರಳ, ಕರ್ನಾಟಕ, ತಮಿಳುನಾಡು ರಾಜ್ಯದ ನಕ್ಸಲ್ ನಾಯಕನಾಗಿದ್ದ ವಿಕ್ರಂಗೌಡ ಕಳೆದೆರಡು ದಶಕಗಳಿಂದ ಪೋಲೀಸರಿಗೆ ಚಳ್ಳೆ ಹಣ್ಣುತಿನ್ನಿಸಿ ಕಾಡೊಳಗೆ ನೆಲೆ ಬದಲಿಸಿ, ಅವಿತು ಬದುಕುತ್ತಲೇ ನಕ್ಸಲೀಯ ನಾಯಕನಾಗಿದ್ದನು. ಅನೇಕ ಬಾರಿ ಪೋಲೀಸ್ ದಳದೊಂದಿಗೆ ಮುಖಾಮುಖಿಯಾದರೂ ಈತನ ಸೆರೆ ಸಿಗುತ್ತಿರಲಿಲ್ಲ. ಈ ಕಾರಣದಿಂದಲೇ ನಕ್ಸಲರ ನೇತ್ರಾವತಿ ದಳಕ್ಕೆ ಈತ ನಂಬಿಕಸ್ಥ ಮುಖ್ಯಸ್ಥನಾಗಿದ್ದನು.
ನಕ್ಸಲರ ಮಿಲಿಟರಿ ಟೀಂ ಸಾರಥಿಯಾಗಿದ್ದ ವಿಕ್ರಂಗೌಡ ಮತ್ತು ಇತರ ಐವರು ನಕ್ಸಲರು ನಿನ್ನೆ ರಾತ್ರಿ ಕಾಡೊಳಗಿಂದ ನಾಡ ಬದಿಗೆ ಬಂದು ಮನೆಗಳಿಂದ ಅಕ್ಕಿ ಪಡೆದು ಮರಳುವ ಹಾದಿಯಲ್ಲಿದ್ದಾಗ ,ಅಕಸ್ಮಾತ್ಉಡುಪಿ ಜಿಲ್ಲಾ ನಕ್ಸಲ್ ನಿಗ್ರಹ ದಳದ ಕಣ್ಣಿಗೆ ಬಿದ್ದಿದ್ದು, ತಕ್ಷಣವೇ ಪರಸ್ಪರ ಗುಂಡಿನ ಚಕಮಕಿ ನಡೆದಿದೆ. ಈ ಸಂಘರ್ಷದಲ್ಲಿ ವಿಕ್ರಂಗೌಡ ಎನ್ಕೌಂಟರ್ ನಡೆಯುತ್ತಿರುವಂತೆಯೇ ಜತೆಗಿದ್ದ ನಾಲ್ವರು ಕತ್ತಲೆಯಲ್ಲಿ ಕಾಡೊಳಗೆ ಓಡಿ ತಲೆಮರೆಸಿದ್ದಾರೆ. ಇವರ ಪತ್ತೆಗಾಗಿ ಕಾರ್ಯಾಚರಣೆ ಮುಂದುವರಿಯುತ್ತಿದೆಯೆಂದು ತಿಳಿದು ಬಂದಿದೆ.
ಕಾರ್ಕಳ ಸಮೀಪದ ಈದು, ಕಬ್ಬಿನಾಲೆ ಪರಿಸರದ ಕಾಡಿಗೆ ಕಳೆದೆರಡು ತಿಂಗಳ ಹಿಂದೆ ನಕ್ಸಲೀಯರು ಪುನರಾಗಮಿಸಿದ ಬಗ್ಗೆ ಸುಳಿವು ದೊರೆತಿತ್ತು. ಕೇರಳದ ಕಾಡುಗಳಲ್ಲಿ ಬೀಡುಬಿಟ್ಟಿದ್ದ ನಕ್ಸಲೀಯರು ಮರಳಿ ಪಶ್ಚಿಮಘಟ್ಟದ ಹೆಬ್ರಿ ಪರಿಸರಕ್ಕೆ ಬಂದಿರುವುದು ಖಚಿತವಾದ ಹಿನ್ನೆಲೆಯಲ್ಲಿ ನಿಗ್ರಹ ದಳದ ಕಾರ್ಯಾಚರಣೆಯೂ ಆರಂಭಗೊಂಡಿತ್ತು.
ಪ್ರಸ್ತುತ ಎನ್ಕೌಂಟರಿನಲ್ಲಿ ಹತನಾದ ವಿಕ್ರಂಗೌಡ ಮೂಲತಃ ಕಬ್ಬಿನಾಲೆ ಪರಿಸರದ ಊರಿನವನೇ ಆಗಿದ್ದು, ತನ್ನೂರಲ್ಲೇ ಎನ್ಕೌಂಟರಿಗೆ ಬಲಿಯಾದವನೆಂದು ಎನಿಸಿಕೊಂಡಿದ್ದಾನೆ. ಎರಡು ದಶಕದ ಹಿಂದೆ ಕುದುರೆಮುಖ ರಾಷ್ಟ್ರೀಯ ಉದ್ಯಾನ ಯೋಜನೆ ವಿರುದ್ದ ನಡೆದ ಹೋರಾಟದಲ್ಲಿ ತೊಡಗಿಸಿಕೊಂಡು ಬಳಿಕ ನಕ್ಸಲೀಯನಾಗಿ ಬದಲಾಗಿ, ಅತ್ಯಂತ ವೇಗದಲ್ಲಿ ನಕ್ಸಲ್ ನಾಯಕನಾಗಿ ಪರಿವರ್ತಿತನಾಗಿದ್ದನು.