ಮನೆಯಂಗಳದಲ್ಲೇ ಚಿರತೆಯ ಚೀತ್ಕಾರ..! ಮುಳಿಯಾರು ಪಂ.ನ ಗ್ರಾಮೀಣರಿಗೆ ವನ್ಯಮೃಗ ಹಾವಳಿಯಿಂದ ನೆಮ್ಮದಿ ಇಲ್ಲದ ದಿನರಾತ್ರಿ!!

by Narayan Chambaltimar

ಕಣಿಪುರ ಸುದ್ದಿಜಾಲ (ನ.9, ಬೋವಿಕಾನ

  • ಮನೆಯಂಗಳಕ್ಕೇ ಧಾವಿಸಿ ಮನೆಮಂದಿ ನೋಡುನೊಡುತ್ತಿದ್ದಂತೆಯೇ ಸಾಕುನಾಯಿಯನ್ನು ಹೊತ್ತೊಯ್ಯವ ಚಿರತೆಗಳು..!!
  • ಕಾನತ್ತೂರು, ಇರಿಯಣ್ಣಿ, ಪಾನೂರು ಪ್ರದೇಶ ವಾಸಿಗಳಿಗೆ ವನ್ಯಮೃಗ ಹಾವಳಿಯಿಂದ ಬದುಕಲೇ ಭೀತಿ!!

ಇಲ್ಲೀಗ ಬದುಕಿಗೆ ಯಾವ ಭದ್ರತೆಯೂ ಇಲ್ಲ, ನಾಗರಿಕರಿಗೆ ದಾರಿ ನಡೆಯಲೇ ಭೀತಿಯಾದರೆ ಕೃಷಿಕರಿಗೆ ಒಬ್ಬಂಟಿಯಾಗಿ ತೋಟಕ್ಕೆ ಹೋಗಲೂ ಭಯ. ಚಿರತೆಯ ಕಾಟದ ಜತೆ ಕಾಡಾನೆ ಉಪಟಳವೂ ಸೇರಿದಾಗ ಕೃಷಿಕರ ಪರಿಸ್ಥಿತಿ ಅಯೋಮಯ ಎಂಬಂತಾಗಿದೆ…

– ಬಳ್ಳಮೂಲೆ ಗೋವಿಂದ ಭಟ್, (ಕೃಷಿಕ, ಸಮಾಜ ಸೇವಕ)

ಮಿತಿಮೀರಿದ ವನ್ಯಮೃಗ ಹಾವಳಿಯಿಂದ ಮುಳಿಯಾರು ಪಂಚಾಯತಿನ ಕಾನತ್ತೂರು,ಇರಿಯಣ್ಣಿ, ಪಾನೂರು ಪ್ರದೇಶದ ಜನಜೀವನ ಈಗ ಆತಂಕದ ಸೂಜಿಮೊನೆಯಲ್ಲಿದೆ. ಕತ್ತಲಾವರಿಸಿದರೆ ಸಾಕು ಎಲ್ಲಿ ಚಿರತೆ ಮೈ ಮೇಲರಗುತ್ತದೋ ಎಂಬುದೇ ನಾಗರಿಕರಿಗೆ ಭೀತಿ.
ಗುರುವಾರ ಮುಂಜಾವ ಪಾನೂರಿನ ಮನೆಯಂಗಳಕ್ಕೆ ಧಾವಿಸಿದ ಚಿರತೆ ಮನೆಮಂದಿಯ ಕಣ್ಮುಂದೆಯೇ ಸಾಕುನಾಯಿಯನ್ನು ಜೀವಂತ ಹೊತ್ತೊಯ್ದಿದೆ.
ರಿಕ್ಷಾ ಚಾಲಕ ಮಣಿಕಂಠನ್ ಎಂಬವರ ಮನೆಯಂಗಳಕ್ಕೆ ಬಂದ ಚಿರತೆ ನಾಯಿಯನ್ನು ಆಕ್ರಮಿಸಿ ಹಿಡಿದಾಗ ನಾಯಿಯ ಬೊಬ್ಬೆ ಕೇಳಿ ಮನೆಮಂದಿ ಧಾವಿಸಿ ಬಂದರೂ, ಕಂಗೆಡದ ಚಿರತೆ ಮನೆಮಂದಿಯ ಕಣ್ಣೆದುರೇ ನಾಯಿಯನ್ನು ಕಾಡಿಗೆ ಹೊತ್ತೊಯ್ದು ತಿಂದು ಹಾಕಿದೆ.

ಇಂಥದ್ದೇ ಮೂರ್ನಾಲ್ಕು ಘಟನೆಗಳು ಈ ಪ್ರದೇಶಗಳಲ್ಲಿ ನಡೆದಿದೆ. ಮನೆಯಂಗಳಕ್ಕೆ ಬರುವ ಚಿರತೆಗಳನ್ನು ಮನೆಮಂದಿಯೇ ಕಂಡಿದ್ದಾರೆ. ಮನುಷ್ಯರ ಭಯವಿಲ್ಲದೇ ಮನೆಯಂಗಳಕ್ಕೆ ಬರತೊಡಗಿದ ಚಿರತೆಗಳು, ಇಂದು ನಾಯಿಗಳನ್ನು ನಾಳೆ ನಮ್ಮನ್ನೇ ಆಕ್ರಮಿಸಬಹುದು ಎಂಬ ಭೀತಿಯಲ್ಲಿ ನಾಗರಿಕರಿದ್ದಾರೆ.

ಘಟನೆಗಳ ಹಿನ್ನೆಲೆಯಲ್ಲಿ ಕಾಸರಗೋಡು ಅರಣ್ಯಾಧಿಕಾರಿ ಕೆ.ಅಶ್ರಫ್ ಮತ್ತು ರೇಂಜ್ ಆಫೀಸರ್ ಸಿ.ವಿ. ವಿನೋದ್ ಕುಮಾರ್ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ನಿಯೋಗವೇ ಈ ಪ್ರದೇಶದಲ್ಲಿ ಸುತ್ತಾಡಿ ಮಾಹಿತಿ ಸಂಗ್ರಹಿಸಿದೆ. ಚಿರತೆ ಹಾವಳಿ ಹಿನ್ನೆಲೆಯಲ್ಲಿ ಅರಣ್ಯ ಪ್ರದೇಶದಲ್ಲಿ ಕ್ಯಾಮರಾ ಮತ್ತು ಬೋನು ಸ್ಥಾಪಿಸಲಾಗಿದೆಯಾದರೂ ಈ ವರೆಗೆ ಕ್ಯಾಮರಾ ಕಣ್ಣಿಗೆ ಚಿರತೆ ಬೀಳದಿರುವುದು ವಿಚಿತ್ರ ವಿದ್ಯಮಾನವಾಗಿದೆ.

ಈ ಪ್ರದೇಶದಲ್ಲಿ ಚಿರತೆ ಮರಿಗಳನ್ನು ಹಾಕಿ ವಂಶಾಭಿವೃದ್ದಿ ಮಾಡಿಕೊಂಡಿರಬಹುದೆಂದೂ ಅನೇಕ ಸಂಖ್ಯೆಯ ಚಿರತೆ ನೆಲೆಸಿರಬೇಕೆಂದೂ ಅಂದಾಜಿಸಲಾಗಿದೆ. ಇದೇ ರೀತಿ ಆನೆಯ ಧಾಳಿಯಿಂದ ಕೃಷಿಕರ ಕೃಷಿನಾಶ ಒಂದೆಡೆಯಾದರೆ ಚಿರತೆಗಳಿಂದಾಗಿ ಧೈರ್ಯದಿಂದ ದಾರಿ ನಡೆಯಲೂ ಆಗದ ಪರಿಸ್ಥಿತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನಾಗರಿಕರನ್ನು ಪಾಲ್ಗೊಳ್ಳಿಸಿ ಮುಳಿಯಾರು ಗ್ರಾ.ಪಂ. ನಲ್ಲಿ ಜಾಗೃತಿ ಸಮಿತಿ ರೂಪಿಸಲಾಗಿದೆ.

ವನ್ಯಮೃಗ ಹಾವಳಿಯನ್ನೆದುರಿಸುತ್ತಿರುವ ಪಾನೂರು, ಇರಿಯಣ್ಣಿ ಪ್ರದೇಶಗಳು ಮೀಸಲು ಅರಣ್ಯ ಸಮೀಪದ ಜನವಾಸ ಪ್ರದೇಶಗಳಾಗಿವೆ. ಇಲ್ಲೀಗ ವಿದ್ಯಾರ್ಥಿಗಳು ಸಹಿತ ನಾಗರಿಕರು ಕಾಲ್ನಡಿಗೆ ಪಯಣಕ್ಕೆ ಭಯಗೊಂಡಿದ್ದಾರೆ.
ಚಿರತೆ, ಆನೆ, ಮಂಗ ಗಳ ಕಾಟದಿಂದ ಈ ಪ್ರದೇಶವನ್ನು ಮುಕ್ತಗೊಳಿಸಬೇಕೆಂದು ನಾಗರಿಕರು ಅರಣ್ಯ ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ.

 

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00