ನೀಲೇಶ್ವರ ವೀರರ್ಕಾವ್ ಅಂಞೂಂಟಂಬಲಂ ದೈವಸ್ಥಾನದಲ್ಲಿ ನಡೆದ ಕಳಿಯಾಟ ಸಂದರ್ಭ ನಡೆದ ಸಿಡಿಮದ್ದು ಸ್ಪೋಟ ದುರಂತದಲ್ಲಿ ಸಾವಿಗೀಡಾದವರ ಸಂಖ್ಯೆ ಐದಕ್ಕೇರಿತು.
ನೀಲೇಶ್ವರ ಕಿನಾನೂರ್ ಮುಂಡೋಟ್ ನಿವಾಸಿ ಕೆ.ವಿ.ರಜಿತ್ (24) ಇಂದು ಬೆಳಿಗ್ಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತರಾದರು. ಇದರೊಂದಿಗೆ ದುರಂತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುವ ಮಧ್ಯೆ ಸಾವಪ್ಪಿದವರ ಸಂಖ್ಯೆ ಐದಕ್ಕೇರಿತು. ಮೃತರು ನೀಲೇಶ್ವರ ಕೆ.ಎಸ್.ಇ ಬಿಯಲ್ಲಿ ದಿನಗೂಲಿ ವೇತನದಲ್ಲಿ ತಾತ್ಕಾಲಿಕ ಚಾಲಕನಾಗಿ ದುಡಿಯುತ್ತಿದ್ದರು. ಸಿಡಿಮದ್ದು ಸ್ಪೋಟ ದುರಂತದಲ್ಲಿ ನಾಲ್ವರು ಈ ಹಿಂದೆ ಮೃತಪಟ್ಟಿದ್ದಾರೆ. ಗಾಯಾಳುಗಳ ಚಿಕಿತ್ಸಾ ವೆಚ್ಚ ಭರಿಸಿ, ಮೃತರ ಆಶ್ರಿತರಿಗೆ ತಲಾ 4ಲಕ್ಷ ರೂ ನೀಡುವಂತೆ ಕೇರಳ ಸರಕಾರ ಘೋಷಿಸಿದೆ.
ದುರಂತದಲ್ಲಿ ಒಟ್ಟು 154 ಮಂದಿ ಗಾಯಗೊಂಡಿದ್ದರು. 98ಮಂದಿ ವಿವಿದೆಡೆ ಚಿಕಿತ್ಸೆಯಲ್ಲಿದ್ದಾರೆ. ಈ ಪೈಕಿ 8ಮಂದಿ ಈಗಲೂ ತೀವ್ರ ನಿಗಾ ಘಟಕದಲ್ಲಿದ್ದಾರೆಂದು ತಿಳಿದುಬಂದಿದೆ.
ಈತನ್ಮಧ್ಯೆ ಪ್ರಕರಣದಲ್ಲಿ ದೈವಸ್ಥಾನದ ಮೂವರು ಪದಾಧಿಕಾರಿಗಳನ್ನು ಬಂಧಿಸಿ ಬಳಿಕ ಅವರಿಗೆ ಕೆಳ ನ್ಯಾಯಾಲಯ ಜಾಮೀನು ಬಿಡುಗಡೆನೀಡಿತ್ತು. ಇದನ್ನು ಎತ್ತಿ ಹಿಡಿದ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜಾಮೀನು ರದ್ದುಪಡಿಸಿದೆ. ಈ ಪ್ರಕರಣದ ಜಾಮೀನು ರದ್ದು ಪಡಿಸುವ ವೇಳೆ ಜಿಲ್ಲಾ ಸೆಷನ್ಸ್ ನ್ಯಾಯಾಧೀಶರು ಕಳಿಯಾಟ, ಉತ್ಸವಗಳೇ ಮೊದಲಾದ ಸಂದರ್ಭಗಳಲ್ಲಿ ಸಿಡಿಮದ್ದು ಪ್ರದರ್ಶನ ಅನಿವಾರ್ಯವೇ ಎಂದು ಪ್ರಶ್ನಿಸಿದ್ದು, ಅನಿವಾರ್ಯವೇ ಆದಲ್ಲಿ ಕಾನೂನು ವಿಧೇಯ ಸುರಕ್ಷೆಗಳನ್ನು ಏರ್ಪಡಿಸಿ, ಅನುಮತಿ ಪಡೆದು ನಡೆಸಬೇಕೆಂದು ಹೇಳಿದ್ದಾರೆ.