ಆರಾಧನಾಲಯಗಳ ಸರಣಿ ಕಳ್ಳತನ: ಪೋಲೀಸರಿಗೆ ಇನ್ನೂ ಸಿಗದ ಆರೋಪಿಗಳ ಸುಳಿವು

ಕಳ್ಳರನ್ನು ಬಂಧಿಸದಿದ್ದರೆ ಪೋಲೀಸ್ ವೈಫಲ್ಯ ಪ್ರತಿಭಟಿಸಿ ಎಸ್ಪಿ ಆಫೀಸಿಗೆ ಮುತ್ತಿಗೆ ಹಾಕಲು ಹಿಂದೂ ಐಕ್ಯ ವೇದಿಕೆ ಯೋಜನೆ

by Narayan Chambaltimar

ಕಾಸರಗೋಡು, ಮಂಜೇಶ್ವರ ತಾಲೂಕಿನ ಆರು ಆರಾಧನಾಲಯಗಳಲ್ಲಿ ಸರಣಿ ಕಳ್ಳತನ ನಡೆದರೂ ಆರೋಪಿಗಳ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೋಲೀಸರು ಹೇಳುತ್ತಿದ್ದಾರೆ.
ಆರೋಪಿಗಳ ಪತ್ತೆಗೆ ಪ್ರತ್ಯೇಕ ತನಿಖಾ ದಳ(ST) ರಚಿಸಲಾಗಿದ್ದು, ಡಿವೈಎಸ್ಪಿ ಸುನಿಲ್ ಕುಮಾರ್ ತಂಡದ ಮುಖ್ಯಸ್ಥರಾಗಿದ್ದಾರೆ. ಆರೋಪಿಗಳನ್ನು ಶೀಘ್ರ ಬಂಧಿಸದಿದ್ದರೆ ಜಿಲ್ಲಾ ಪೋಲೀಸ್ ವರಿಷ್ಠರ ಕಛೇರಿಗೆ ಮುತ್ತಿಗೆ ಹಾಕಲು ಹಿಂದೂ ಐಕ್ಯವೇದಿಕೆ ಸಿದ್ಧತೆ ನಡೆಸುತ್ತಿದೆ.

ಕಾಸರಗೋಡು ನ.(6), ಕಣಿಪುರ ಸುದ್ದಿಜಾಲ

ಕಾಸರಗೋಡು ಜಿಲ್ಲೆಯ ಅಲ್ಲಲ್ಲಿ ಆರಾಧನಾಲಯಗಳಲ್ಲಿ ಸರಣಿ ಕಳ್ಳತನ ನಡೆಯುತ್ತಿದ್ದರೂ ಆರೋಪಿಗಳ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೋಲೀಸರು ಹೇಳುತ್ತಿದ್ದಾರೆ. ಇದು ಸಾರ್ವಜನಿಕ ಭಕ್ತ ಜನವಲಯದ ಆಕ್ರೋಶಕ್ಕೂ ಕಾರಣವಾಗಿದೆ.
ನ. 4,5 ರಂದು ಕಾಸರಗೋಡು, ಮಂಜೇಶ್ವರ ತಾಲೂಕಿನಲ್ಲಿ ಆರು ಆರಾಧನಾಲಯಗಳಲ್ಲಿ ಕಳ್ಳತನ ನಡೆದಿದೆ. ಎಡನೀರು ವಿಷ್ಣುಮಂಗಲ ದೇವಾಲಯ, ಮಾನ್ಯ ಅಯ್ಯಪ್ಪ ಮಂದಿರ, ನೆಲ್ಲಿಕಟ್ಟೆ ನಾರಾಯಣ ಗುರು ಮಂದಿರ, ಪೊಯಿನಾಚಿ ಶ್ರೀ ಧರ್ಮಶಾಸ್ತ ಕ್ಷೇತ್ರ, ವರ್ಕಾಡಿ ಕೊರಗಜ್ಜ ದೈವಸ್ಥಾನ, ಪಾವಳ ಇಗರ್ಜಿಗಳಿಂದ ಕಳ್ಳತನ ನಡೆದು ದಿನಗಳೇ ಸಂದರೂ ಕಳ್ಳರ ಸುಳಿವು ಸಿಗದೇ ಪೋಲೀಸ್ ತನಿಖೆ ಕುಂಟುತ್ತಿದೆ.

ಎಡನೀರು ವಿಷ್ಣುಮಂಗಲ ದೇಗುಲದಲ್ಲಿ ನಡೆದ ಕಳ್ಳತನದ ತಪಾಸಣೆ ನಡೆಸುತ್ತಿರುವ ಪೋಲೀಸರು

ಈ ಮಧ್ಯೆ ಆರಾಧನಾಲಯಗಳಿಂದ ಮಾತ್ರವೇ ಕಳ್ಳತನ ನಡೆಯುತ್ತಿರುವುದೇಕೆ ಎಂಬ ಪ್ರಶ್ನೆ ಪೋಲೀಸರನ್ನು ಕಾಡುತ್ತಿದೆ. ಈ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ತಿರುಡನ್ ಸಂಗ ನೆಲೆಸಿದೆಯೋ ಎಂಬ ಗುಮಾನಿಯೂ ಉಂಟಾಗಿದೆ. ಕುಖ್ಯಾತ ಕಳ್ಳರ ತಂಡವೊಂದು ದೇಗುಲ,ದೈವಸ್ಥಾನದ ಕಾಣಿಕೆ ಡಬ್ಬಿ ಕದಿಯುವುದನ್ನೇ ಕಾಯಕವಾಗಿಸಿದ್ದು, ಇವರನ್ನು ತಿರುಡನ್ ಸಂಗ ಎಂದು ಕೇರಳದಲ್ಲಿ ಗುರುತಿಸಲಾಗಿದೆ.

ಜಿಲ್ಲೆಯ ದೇವಾಲಯ, ದೈವಸ್ಥಾನಗಳನ್ನು ಅಪವಿತ್ರಗೊಳಿಸಿ, ಕಳ್ಳತನಗೈದವರನ್ನು ಶೀಘ್ರ ಬಂಧಿಸದಿದ್ದರೆ ಪೋಲೀಸ್ ವೈಫಲ್ಯದ ವಿರುದ್ದ ನಾಗರಿಕ ಭಕ್ತರ ಪ್ರತಿಭಟನೆ ನಡೆಸಲು ಹಿಂದೂ ಐಕ್ಯ ವೇದಿ ಸಜ್ಜಾಗುತ್ತಿದೆ. ಕಾಸರಗೋಡಿನಲ್ಲಿ ಹಿಂದೂ ಆರಾಧನಾಲಯಗಳಿಗೆ ಸಂರಕ್ಷಣೆ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಕಾನೂನು ಪಾಲಿಸಿ, ಸಂರಕ್ಷಣೆ ಒದಗಿಸಬೇಕಾದ ಪೋಲೀಸರು ರಾತ್ರಿಯ ಗಸ್ತು ಸಂಚಾರ ನಡೆಸದೇ ಕಳ್ಳರ ವಿಹಾರಕ್ಕೆ ಅನುಕೂಲ ಒದಗಿಸುತ್ತಿದ್ದಾರೆಂದು ಆರೋಪಿಸಿರುವ ಹಿಂದೂ ಐಕ್ಯವೇದಿ ಜಿಲ್ಲಾ ಪ್ರ.ಕಾರ್ಯದರ್ಶಿ ರಾಜನ್ ಮುಳಿಯಾರು ಪ್ರಕರಣಗಳನ್ನು ಪೋಲೀಸರು ಗಂಭೀರವಾಗಿ ಕೈಗೆತ್ತಿ ಕಳ್ಳರನ್ನು ಸೆರೆ ಹಿಡಿಯದಿದ್ದರೆ ಜಿಲ್ಲಾ ಪೋಲೀಸ್ ವರಿಷ್ಠರ ಕಛೇರಿಗೆ ಮೆರವಣಿಗೆ ನಡೆಸಿ, ಮುತ್ತಿಗೆ ಹಾಕಿ ಪ್ರತಿಭಟಿಸಬೇಕೆಂದು ತಿಳಿಸಿದ್ದಾರೆ

ಇಲ್ಲದ ಸಿಸಿಟಿವಿ

ಕಳ್ಳರ ಸುಳಿವು ದೊರೆಯದೇ ಇರಲು ಸಿಸಿಟಿವಿ ಇಲ್ಲದಿರುವುದೊಂದು ಕಾರಣ ಎಂದು ಪೋಲೀಸರು ಹೇಳುತ್ತಾರೆ. ಕಳ್ಳತನ ನಡೆದ ಆರಾಧನಾಲಯಗಳಲ್ಲಿ, ಪರಿಸರದಲ್ಲಿ ಸಿಸಿಟಿವಿ ಇಲ್ಲದೇ ಇರುವುದು ತನಿಖೆಯ ಪ್ರಾಥಮಿಕ ಹಂತಕ್ಕೆ ತೊಡಕಾಗಿದೆ. ಪೊಯಿನಾಚಿ ಧರ್ಮಶಾಸ್ತ ದೇಗುಲದಲ್ಲಿ ಸಿಸಿಟಿವಿ ಇದ್ದರೂ, ಅದನ್ನೇ ಹಾಳುಗೆಡವಿ ಅದರ ಉಪಕರಣಗಳನ್ನೆಲಾ ಕದ್ದೊಯ್ಯಲಾಗಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00