ಕಣಿಪುರ ಸುದ್ದಿಜಾಲ, ಕೊಚ್ಚಿ (29)
ಕೊಚ್ಚಿ: ಕೇರಳಾ ಹೈಕೋರ್ಟಿಗೆ ಕೇಂದ್ರ ವಿಜ್ಞಾಪನೆಯಂತೆ ನೂತನ ಐವರು ನ್ಯಾಯಾಧೀಶರನ್ನು ನೇಮಿಸಲಾಗಿದ್ದು, ಅವರಿಂದು ಪ್ರಮಾಣವಚನ ಸ್ವೀಕರಿಸಿ ಅಧಿಕಾರ ವಹಿಸಿಕೊಂಡರು.
ಈ ಐವರಲ್ಲಿ ಓರ್ವರು ಗಡಿನಾಡ ಕನ್ನಡಿಗರಾಗಿದ್ದಾರೆ. ಕಾಸರಗೋಡು ಜಿಲ್ಲೆಯ ಕಾಞಂಗಾಡು ಸಮೀಪದ ಇರಿಯ ನಿವಾಸಿ ಎಸ್. ಮುರಳಿಕೃಷ್ಣಭಟ್ ಅವರು ಜಿಲ್ಲಾ ನ್ಯಾಯಾಧೀಶ ಹುದ್ದೆಯಿಂದ ಪದೋನ್ನತಿ ಪಡೆದು ಹೈಕೋರ್ಟು ನ್ಯಾಯಾಧೀಶರಾದರು.
ಮೂಲತಃ ನೀರ್ಚಾಲಿನ ಕುಂಟಿಕಾನ ಶಂಕರಮೂಲೆಯವರಾದ ಇವರು ಹಲವು ವರ್ಷಗಳಿಂದ ಕಾಞಂಗಾಡಿನ ಇರಿಯ ಎಂಬಲ್ಲಿ ವಾಸಿಸಿ, ಕಾಞಂಗಾಡು ಬಾರ್ ನಲ್ಲಿ ವಕೀಲವೃತ್ತಿಮಾಡುತ್ತಾ ನ್ಯಾಯಾಂಗ ಸೇವೆ ಆರಂಭಿಸಿದ್ದರು. ಬಳಿಕ ನ್ಯಾಯಾಧೀಶರಾಗಿ ಭಡ್ತಿ ಪಡೆದು, ಕಲ್ಲಿಕೋಟೆಯಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿರುವಾಗಲೇ ಕೇಂದ್ರ ಸರಕಾರಿ ವಿಜ್ಞಾಪನೆಯಂತೆ ಹೈಕೋರ್ಟಿಗೆ ನೇಮಕಗೊಂಡು ಪದಗ್ರಹಣಗೈದರು.
ಕಾಙಂಗಾಡು ಮಾವುಂಗಾಲ್ ಬಳಿಯಲ್ಲಿ ವಾಸ ಮಾಡುತ್ತಿರುವ ಇವರು ದಿ. ಗಂಗಾಧರ ಭಟ್ – ಉಷಾ ಭಟ್ ಪುತ್ರಿ. ಗಂಗಾಧರ ಭಟ್ಟರು ಮೂಲತಃ ಕುಂಟಿಕಾನದವರಾಗಿದ್ದು ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು.
ಕೇರಳದ ವಿವಿಧ ಜಿಲ್ಲಾ ನ್ಯಾಯಾಲಯ, ವಿಜಿಲೆನ್ಸ್ ವಿಭಾಗಗಳಲ್ಲಿದ್ದ ಪಿ. ಕೃಷ್ಣಕುಮಾರ್, ಕೆ. ವಿ. ಜಯಕುಮಾರ್, ಜೋಬಿನ್ ಸೆಬಾಸ್ಟಿಯನ್ ಮತ್ತು ಪಿ. ವಿ. ಬಾಲಕೃಷ್ಣನ್ ಅವರೊಂದಿಗೆ ಎಸ್. ಮುರಳೀಕೃಷ್ಣ ಅವರು ಇಂದು ಪದಗ್ರಹಣಗೈದರು. ಇದರೊಂದಿಗೆ ಕೇರಳ ಹೈಕೋರ್ಟಿನ ನ್ಯಾಯಾಧೀಶರ ಸಂಖ್ಯೆ 46ಕ್ಕೇರಿದೆ.