ಮಂಗಳೂರು: ತೆಂಕುತಿಟ್ಟಿನ ಹಿರಿಯ ಹಾಸ್ಯಗಾರ, ರಾಜಹಾಸ್ಯಕ್ಕೆ ಹೆಸರಾಗಿದ್ದ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ(70) ಇನ್ನಿಲ್ಲ. ಬೆಂಗಳೂರಿನಲ್ಲಿ ಪ್ರವಾಸಿ ತಂಡದ ಯಕ್ಷಗಾನಕ್ಕೆಂದು ತೆರಳಿದ್ದ ಅವರು ಕಲಾಪೋಷಕ ಆರ್. ಕೆ. ಭಟ್ ನಿವಾಸದಲ್ಲಿ ತಂಗಿದ್ದರು. ಇಂದು ಮುಂಜಾನೆ 4ರ ವೇಳೆಗೆ ತೀವ್ರ ಹೃದಯಸ್ತಂಭನವಾಗಿ ಕೂಡಲೇ ಸಹಕಲಾವಿದರು ಆಸ್ಪತ್ರೆಗೆ ಕೊಂಡೊಯ್ದರೂ ಮೃತಪಟ್ಟರೆಂದು ವರದಿಯಾಗಿದೆ.
ಸುದೀರ್ಘ ಕಲಾಯಾನದಲ್ಲಿ ಕಲಾವಿದರ ಸಹವರ್ತಿತ್ವದ ಬದುಕಿನಲ್ಲೇ ಅವರು ಕೊನೆಯುಸಿರೆಳೆದದ್ದು ಕಲಾವಲಯಕ್ಕೆ ನಂಬಲಾಗದ ಸುದ್ದಿಯಾಗಿದೆ.
ಬಂಟ್ವಾಳದ ದಿ.ಗಣಪತಿ ಆಚಾರ್ಯ – ಭವಾನಿ ದಂಪತಿಯ ಪುತ್ರನಾಗಿ ಜನಿಸಿದ ಜಯರಾಮ ಆಚಾರ್ಯರು 7ನೇ ತರಗತಿ ಕಲಿತು 13ರ ಹರೆಯದಲ್ಲೇ ಯಕ್ಷಗಾನಕ್ಕೆ ಪ್ರವೇಶಿಸಿದವರು. ದಿ.ಪಡ್ರೆ ಚಂದು ಮತ್ತು ನೆಲ್ಲಿಕಟ್ಟೆ ನಾರಾಯಣ ಹಾಸ್ಯಗಾರರ ಶಿಷ್ಯನಾಗಿ ಯಕ್ಷನಾಟ್ಯ ಕಲಿತು, ಬಾಲಕಲಾವಿದನಾಗಿ ರಂಗವನ್ನೇರಿದ ಅವರು ಅಮ್ಟಾಡಿ, ಸೋರ್ನಾಡು, ಸುಂಕದಕಟ್ಟೆ, ಕಟೀಲು, ಕದ್ರಿ, ಕುಂಬ್ಳೆ, ಸುರತ್ಕಲ್ ಮೇಳಗಳಲ್ಲಿ ಯಶಸ್ವಿ ಯಕ್ಷಪಯಣ ನಡೆಸಿ ಬಳಿಕ ಎಡನೀರು, ಹೊಸನಗರ, ಹನುಮಗಿರಿ ಮೇಳದಲ್ಲಿ ಹಾಸ್ಯಗಾರನಾಗಿ ಸಂತೃಪ್ತ ಮತ್ತು ಜನಪ್ರಿಯತೆಯ ಕಲಾಯಾನ ನಡೆಸಿದವರು. ಕಳೆದ ಐದು ದಶಕಕ್ಕೂ ದೀರ್ಘಕಾಲ ತುಳು, ಕನ್ನಡ ಪ್ರಸಂಗಗಳ ನೂರಾರು ಪಾತ್ರಕ್ಕೆ ತನ್ನ ಸ್ವತಸಿದ್ಧ ಶೈಲಿಯಿಂದ ಹಾಸ್ಯ ರಸ ಪೋಣಿಸಿದ ಅವರು ಒಂದು ತಲೆಮಾರಿನ ಯಕ್ಷಗಾನದ, ಕಲಾಭಿಮಾನಿಗಳ ಮೇಲೆ ಪ್ರಭಾವ ಬೀರಿದ,ಅನುಭವಿ ಕಲಾವಿದರು.
ಕಲಾಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ, ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಮುಡಿದಿರುವ ಇವರು ಸಭ್ಯ, ರಾಜಹಾಸ್ಯಕ್ಕೆ ಹೆಸರಾದವರು.
ಇತ್ತೀಚಿನ ವರ್ಷದವರೆಗೂ ಹನುಮಗಿರಿ ಮೇಳದ ಕಲಾವಿದರಾಗಿದ್ದ ಅವರು ಈ ಸಾಲಿನ ತಿರುಗಾಟಕ್ಕೆ ಹಿರಿಯಡ್ಕ ಮೇಳಕ್ಕೆ ಸೇರ್ಪಡೆಗೊಂಡಿದ್ದರು. ಬರುವ ನವಂಬರ್ ತಿಂಗಳಲ್ಲಿ ಅವರಿಗೆ ಕಡಬ ಪ್ರಶಸ್ತಿ ಘೋಷೆಯಾಗಿತ್ತು.