ಕಣಿಪುರ ಸುದ್ದಿಜಾಲ (.21)
ತೆಂಕುತಿಟ್ಟು ಯಕ್ಷಗಾನ ದ ರಾಜಹಾಸ್ಯದ ಮೇರು ಕಲಾವಿದ ಬಂಟ್ವಾಳ ಜಯರಾಮಆಚಾರ್ಯರ ಜತೆ ಬಹುಷಃ ನಾನು ಇದ್ದಿರುತ್ತಿದ್ದರೆ ಅವರು ಹೃದಯಾಘಾತಕ್ಕೆ ಬಲಿಯಾಗುತ್ತಿರಲಿಲ್ಲವೋ ಏನೋ..?
ಏಕೆಂದರೆ ಅವರಿಗೆ ಎಂತದ್ದೇ ಮಾನಸಿಕ ಒತ್ತಡಗಳಿದ್ದರೂ ನನಗವರನ್ನು ಕಂಡೊಡನೆಯೇ ಅವರ ಮೂಡ್ ಹೇಗಿದೆಯೆಂದು ಗೊತ್ತಾಗುತಿತ್ತು. ಆ ಸಂದರ್ಭಗಳನ್ನು ಖಾಸಗಿಯಾಗಿ ನವಿರು ಹಾಸ್ಯದ ಚೇಷ್ಠೆಗಳಿಂದಲೇ ನಾನು ಹಗುರಗೊಳಿಸುತ್ತಿದ್ದೆ. ನಿನ್ನೆಯೂ ಅವರ ಜೊತೆ ನಾನಿರುತ್ತಿದ್ದರೆ ಅವರ ಮಾನಸಿಕ ಒತ್ತಡಕ್ಕೆ ನಮ್ಮ ಆತ್ಮೀಯ ಸಾಂಗತ್ಯ ಪರಿಹಾರವಾಗುತ್ತಿತ್ತೋ ಏನೋ..? ಏನಿದ್ದರೂ ನನ್ನನ್ನು ಯಕ್ಷಗಾನಕ್ಕೆ “ಇವ ಆದೀತು” ಎಂದು ಕೈಹಿಡಿದು ಕರೆಸಿ, ತಿದ್ದಿ ಮುನ್ನಡೆಸಿದ ನನ್ನ ಹಿರಿಯರೊಬ್ಬರು ನನಗೆ ಇನ್ನಿಲ್ಲದ ಹಾಗಾಗಿದೆ ಎಂದು ಖ್ಯಾತ ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಬಂಟ್ವಾಳರನ್ನು ನೆನಪಿಸಿಕೊಂಡಿದ್ದಾರೆ.
ಅವರದ್ದು ಮಾದರಿ ಹಾಸ್ಯ
ಬಂಟ್ವಾಳರದ್ದು ಯಕ್ಷಗಾನದ ತಾಜಾ ಹಾಸ್ಯ. ಅದೊಂದು ವಿಶಿಷ್ಟ ಮೇನರಿಸಂ ನಿಂದ ಕೂಡಿದ ಆಂಗಿಕಾಭಿನಯದ ತಾಜಾ ಹಾಸರಸ. ಅವರೊಡನೆ ವೇಷ ಮಾಡುವುದೇ ಒಂದು ಪುಳಕ. ಅವರಿಗೂ ಅಷ್ಟೇ.. ನಮ್ಮೊಟ್ಟಿಗಿನ ರಂಗಸಖ್ಯವನ್ನು ಅವರು ಆನಂದಿಸುತ್ತಿದ್ದರು. ನನ್ನ ಕಲಾಯಾನದಲ್ಲಿ 20ಕ್ಕೂ ಅಧಿಕ ವರ್ಷಗಳನ್ನು ಅವರೊಡನೆ ಕಳೆದಿದ್ದೇನೆ. ಸುಖ, ದುಃಖ ಹಂಚುವ ಆತ್ಮೀಯರೆನಿಸಿಕೊಂಡಿದ್ದೇವೆ. ಅವರ ಅನೇಕ ಪೌರಾಣಿಕ ಹಾಸ್ಯಗಳಿಂದ ನಾನೂ ಪ್ರಭಾವಿತನಾಗಿದ್ದೇನೆ. ನನ್ನಿಂದಾದ ರೀತಿಯಲ್ಲಿ ನಾನು ಮಾಡಿದ ಪೌರಾಣಿಕ ಹಾಸ್ಯದಲ್ಲಿ ಅವರ ಛಾಯೆ ಇದೆ. ಅವರು ಹಿರಿಯ ಪರಂಪರೆಯ ಗರಡಿಯಲ್ಲಿ ಪಳಗಿದ ಶುದ್ಧ ಹಾಸ್ಯಗಾರರು.
ಅವರನ್ನು ನಾವು ಕಳಕೊಂಡದ್ದು ನಿಜಕ್ಕೂ ನಷ್ಟ ಎಂದರು ಪ್ರಜ್ವಲ್ ಕುಮಾರ್.
ಪ್ರಶಸ್ತಿ ವಂಚಿತ ಕಲಾವಿದ
ಯಕ್ಷಗಾನದ ಈಗಿನ ಟ್ರೆಂಡ್ ನಲ್ಲಿ ಬಂಟ್ವಾಳರು ಸ್ಥಾನ, ಮಾನಗಳಿಂದ ವಂಚಿತ ಕಲಾವಿದರು. ಪ್ರತಿಷ್ಠಿತ ಪ್ರಶಸ್ತಿಗಳೆಲ್ಲ ಅವರ ಅರ್ಹತೆಗೆ ಒಲಿಯಬೇಕಿತ್ತು. ಆದರೆ ಅವರು ಶಾಂತಶೀಲತೆಯ ಮೌನಿ. ಯಾರ ಹಿಂದೆಯೂ ಸಲಾಮು ಹಾಕಿ ಪಡೆದವರು. ಆದ್ದರಿಂದಲೇ ರಾಜಕೀಯ ಕೃಪಾಪೋಷಣೆಗಳಿಲ್ಲದೇ ಅವರು ಪ್ರತಿಷ್ಠಿತ ಪ್ರಶಸ್ತಿಗಳಿಂದ ವಂಚಿತರು. ಈಗಿನ ಪರಿಸ್ಥಿತಿಯಲ್ಲಿ ಯಕ್ಷಗಾನದ ಪ್ರಾಮಾಣಿಕ ಸಾಧಕ ಕಲಾವಿದನಿಗೆ ಅರ್ಹತೆಯಿಂದಲೇ ಪ್ರಶಸ್ತಿ ಒಲಿಯುವುದು ಕೂಡಾ ಕಷ್ಟ ಎಂದನ್ನಿಸುತ್ತದೆ ಎಂದರು ಪ್ರಜ್ವಲ್.
ನಿವೃತ್ತಿಯಿಂದ ಖಿನ್ನತೆ
ನಮ್ಮ ಹನುಮಗಿರಿ ಮೇಳದಿಂದ ಈ ವರ್ಷದ ತಿರುಗಾಟದೊಂದಿಗೆ ಅವರಿಗೆ ನಿವೃತ್ತಿ ನೀಡಲಾಗಿತ್ತು. ಇದರಿಂದಾಗಿ ಸಹಜವಾಗಿಯೇ ಅವರು ಮನೋ ಖಿನ್ನತೆ ಅನುಭವಿಸಿದ್ದರು. ಅಂದರೆ ಪ್ರಸಿದ್ಧ ಕಲಾವಿದನಾಗಿ ಮೆರೆದು, ಜನರನ್ನು ರಂಜಿಸಿದ ವ್ಯಕ್ತಿ ಒಂದು ಹಂತದಲ್ಲಿ ಅಶಕ್ತತೆಯಿಂದ ವಯೋಸಹಜವಾಗಿ ನಿವೃತ್ತರಾಗುವಾಗ ಅನುಭವಿಸುವ ಮಾನಸಿಕ ಯಾತನೆಯನ್ನು ಎಲ್ಲರಂತೆ ಅವರೂ ಅನುಭವಿಸಿದ್ದರು. ಏಕೆಂದರೆ ತಾರಾ ಕಲಾವಿದರ ಆಕರ್ಷಣೆಯ ಗಜಮೇಳದಿಂದ ನಿವೃತ್ತಿಯಾಗುವುದೆಂದರೆ ಬೇಸರ ಸಹಜ ತಾನೇ?
ಈ ಸಂದರ್ಭ ನಾನನವರಿಗೆ ಸಾಂತ್ವನದ ನುಡಿಗಳಿಂದ ಪ್ರೇರಣೆಯ ಸ್ಪೂರ್ತಿ ನೀಡಿದ್ದೆ.
“ಬದುಕನ್ನು ಬಂದಂತೆ ಎದುರಿಸಬೇಕು, ಒಲಿದಂತೆ ಹಾಡಬೇಕು” ಎಂದಿದ್ದೆ. ಇದರಂತೆ ಅವರು ಮುಂದಿನ ತಿರುಗಾಟಕ್ಕೆ ಹಿರಿಯಡ್ಕ ಮೇಳಕ್ಕೆ ನಿಗದಿಯಾಗಿದ್ದರು.
ಅದನ್ನವರು ನನ್ನೊಡನೆ ಹಂಚಿಕೊಂಡಿದ್ದಾರೆ. ಏಕೆಂದರೆ ಕಲಾವಿದನೊಬ್ಬನಿಗೆ ನಿವೃತ್ತಿ ಎಂಬುದಿಲ್ಲ. ನಿವೃತ್ತಿ ಎಂದಾಗಿ ಮನೆಯಲ್ಲೇ ಬಾಕಿಯಾದರೆ ಮಾನಸಿಕ ಆರೋಗ್ಯ ಹದಗೆಡುವುದರಲ್ಲಿ ಸಂದೇಹವಿಲ್ಲ ಎಂದರು ಪ್ರಜ್ವಲ್.
ನಾನು ಧರ್ಮಸ್ಥಳ ಕೇಂದ್ರದಲ್ಲಿ ಯಕ್ಷಗಾನ ಕಲಿಯಲು ಹೋದಾಗ ನನಗೆ ಯಾರೂ ಇರಲಿಲ್ಲ. ಆಗ ನನ್ನನ್ನು ಆಯ್ಕೆ ಮಾಡಿದವರಲ್ಲೊಬ್ಬರು ಇದೇ ಜಯರಾಮ ಆಚಾರ್ಯರು. ಅಂದಿನಿಂದ ಧರ್ಮಸ್ಥಳ, ಕಟೀಲು, ಹೊಸನಗರ, ಹನುಮಗಿರಿ ಮೇಳಗಳಲ್ಲಿ ಅವರೊಡನೆ 20ವರ್ಷಕ್ಕು ಅಧಿಕದ ಒಡನಾಡ ನನ್ನನ್ನು ರೂಪಿಸಿದೆ. ಅವರ ಅಗಲಿಕೆ ಯೊಚಿಸಲಾಗದ್ದು. ನಮ್ಮ ನಡುವಿನಿಂದ ಹಿರಿಯರೊಬ್ಬರು ಎದ್ದು ನಡೆದಂತೆ ಅವರು ಹೋಗಿದ್ದಾರೆ. ಬದುಕೆಂದರೆ ಇಷ್ಟೇ… “ಜೀವನ ಎಂದರೆ ಬಸ್ ಪ್ರಯಾಣದ ಹಾಗೆ. ಅವರವರ ನಿಲ್ದಾಣ ಬಂದಾಗ ಇಳಿದು ಸಾಯಲೇಬೇಕು. ಈಗ ಅವರ ನಿಲ್ದಾಣ ಬಂದಿದೆ, ನಾಳೆಯ, ನಾಡಿದ್ದು, ಮುಂದೆಂದೋ ಒಂದು ದಿನ ನಮ್ಮ ನಿಲ್ದಾಣವೂ ಬರಲಿದೆ ಎಂದು ಪ್ರಜ್ವಲ್ ಕುಮಾರ್ ಒಡನಾಡಿ ಹಿರಿ ಕಲಾವಿದರನ್ನು ಸ್ಮರಿಸಿಕೊಂಡು.