ಕಣಿಪುರ ಸುದ್ದಿಜಾಲ( ಅ.12)
ಶಬರಿಮಲೆ ಅಯ್ಯಪ್ಪ ಸನ್ನಿಧಾನ ಈ ಬಾರಿಯ ಮಂಡಲ-ಮಕರ ದೀಪೋತ್ಸವ ಕಾಲದಲ್ಲಿ ಮತ್ತೊಮ್ಮೆ ಸಂಘರ್ಷ ಭೂಮಿಯಾಗುವ ಸಾಧ್ಯತೆಗಳಿವೆ. ವಿವಿಧ ಹಿಂದೂಸಂಘಟನೆಗಳು ಶಬರಿಮಲೆಯಲ್ಲಿ ಸರಕಾರದ ನಿಲುವಿನ ವಿರುದ್ಧ ಪ್ರತ್ಯಕ್ಷ ಹೋರಾಟ ನಡೆಸಲಿವೆ ಎಂದು ಸರಕಾರಕ್ಕೆ ಇಂಟೆಲಿಜೆನ್ಸ್ ಮುನ್ನೆಚ್ಚರಿಕೆ ನೀಡಿದೆ.
ಈ ಬಾರಿಯ ಶಬರಿಮಲೆ ಸೀಸನ್ ನಲ್ಲಿ ಮುಂಗಡ ಬುಕ್ಕಿಂಗ್ ಮಾಡಿದ ಭಕ್ತರಿಗಷ್ಟೇ ದಿನಕ್ಕೆ ತಲಾ 80ಸಾವಿರ ಮಂದಿಗಳಿಗೆ ಸೀಮಿತವಾಗಿ ವರ್ಚ್ಯುಲ್ ಸರದಿ ಸಾಲಿನಂತೆ ದರ್ಶನ ಸೀಮಿತಗೊಳಿಸಿದ ಸರಕಾರಿ ನಿರ್ಣಯ ಪ್ರತಿಭಟಿಸಿ ಈಗಲೇ ಹೋರಾಟ ಸಿದ್ಧತೆ ನಡೆದಿದೆಯೆಂದು ಇಂಟಲಿಜೆನ್ಸ್ ವರದಿ ಉಲ್ಲೇಖಿಸಿದೆ.
ಶಬರಿಮಲೆಯ ಭಕ್ತಜನ ದಟ್ಟಣೆಯ ನಿಯಂತ್ರಣಕ್ಕೆ ವರ್ಚ್ಯುಲ್ ಕ್ಯೂ ಸೀಮಿತಗೊಳಿಸಿದ ಸರಕಾರಿನಿಯಂತ್ರಣಕ್ಕೆ ಕೇರಳದಲ್ಲಿ ವ್ಯಾಪಕ ಪ್ರತಿಭಟನೆ, ವಿರೋಧ ಮೊಳಗಿವೆ. ಇದರಿಂದಾಗಿ ನಿರ್ಧಾರದಲ್ಲಿ ಪರಿಷ್ಕರಣೆಗೆ ಸರಕಾರದ ಮೇಲೆ ಒತ್ತಡಗಳುಂಟಾಗಿದೆ.
ಬಿಜೆಪಿ ಪ್ರತ್ಯಕ್ಷ ಹೋರಾಟ ಘೋಷಣೆ
ಇದೇ ಸಂದರ್ಭ ಭಕ್ತರ ನಿಯಂತ್ರಣಕ್ಕಾಗಿ ವರ್ಚ್ಯುಲ್ ಕ್ಯೂ ಸೀಮಿತ ಗೊಳಿಸಿದ ಸರಕಾರಿ ನಿರ್ಣಯವನ್ನು ಖಂಡಿಸಿರುವ ಬಿಜೆಪಿ, ನಾವು ವರ್ಚ್ಯುಲ್ ಕ್ಯೂ ಇಲ್ಲದೆಯೇ ವ್ರತಾನುಷ್ಠಾನರಾಗಿ ಶಬರಿಮಲೆಗೆ ಹೋಗುತ್ತೇವೆ.ಯಾರು ತಡೆಯುತ್ತಾರೆ ನೋಡೋಣ ಎಂದು ಸರಕಾರಕ್ಕೆ ಪ್ರತ್ಯಕ್ಷ ಸವಾಲು ಹಾಕಿದೆ.
ವಿಜಯದಶಮಿ ದಿನದಂದು ಕೊಲ್ಲೂರು ಶ್ರೀ ಮೂಕಾಂಬಿಕಾ ದೇಗುಲದಲ್ಲಿ ಮಾಧ್ಯಮಗಳ ಜತೆ ಮಾತಾಡಿದ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಶಬರಿಮಲೆಗೆ ಆಗಮಿಸುವ ಭಕ್ತರೆಲ್ಲರಿಗೆ ದರ್ಶನ ಸೌಲಭ್ಯ ಒದಗಿಸಲು ಬಿಜೆಪಿ ಬೆಂಬಲದ ಸಹಾಯ ನೀಡುವುದಾಗಿ ಘೋಷಿಸಿದ್ದಾರೆ.
ಈ ಹಿಂದೆ ಸುಪ್ರೀಂ ಕೋರ್ಟು ತೀರ್ಪಿನ ಹಿನ್ನೆಲೆಯಲ್ಲಿ ಶಬರಿಮಲೆಗೆ ಮಹಿಳಾ ಪ್ರವೇಶಕ್ಕೆ ಆತುರ ಪ್ರಕಟಿಸಿ, ಮಹಿಳೆಯರನ್ನು ಹದಿನೆಂಟು ಮೆಟ್ಟಲೇರಿಸುವಂತೆ ಮಾಡಹೊರಟಾಗ ಬಿಜೆಪಿ ಯಾವ ಪ್ರತಿಭಟನೆ ನಡೆಸಿತ್ತೋ, ಅದೇ ರೀತಿಯ ಹೋರಾಟಗಳೊಂದಿಗೆ ಪಕ್ಷ ಭಕ್ತರ ಬೆಂಬಲಕ್ಕೆ ಪ್ರತ್ಯಕ್ಷ ನಿಲ್ಲುವುದಾಗಿ ಕೆ. ಸುರೇಂದ್ರನ್ ಮಾಧ್ಯಮಗಳಿಗೆ ಪಕ್ಷದ ನಿಲುವು ತಿಳಿಸಿದ್ದಾರೆ.
ಶಬರಿಮಲೆಯಲ್ಲಿ ಮಂಡಲ,ಮಕರ ದೀಪೋತ್ಸವ ಸೀಸನ್ ನಲ್ಲಿ ಭಾರೀ ಜನದಟ್ಟಣೆಯಾಗುತ್ತದೆ. ಈ ಹಿಂದಿನ ವರ್ಷಗಳಲ್ಲಿ ಭಕ್ತರ ಸಂಖ್ಯೆ ನಿಯಂತ್ರಣಾತೀತವಾಗಿದ್ದು, ಸನ್ನಿಧಾನ ದರ್ಶನಕ್ಕೆ ಸತತ 8ರಿಂದ 16ತಾಸುಗಳ ಕಾಲ ಸರದಿ ಸಾಲಲ್ಲಿ ನಿಂತು ಭಕ್ತರು ಬಸನಳಿದಿದ್ದರು. ಇದು ಶಬರಿಮಲೆಯ ಪರಿಸ್ಥಿತಿಯನ್ನು ಅನಿಯಂತ್ರಿತಗೊಳಿಸಿ ಭಾರೀ ಸಮಸ್ಯೆ ಸೃಷ್ಟಿಸಿದ್ದಲ್ಲದೇ, ಹೈಕೋರ್ಟಿನಿಂದ ಸರಕಾರ ಛೀಮಾರಿ ಎದುರಿಸಿತ್ತು. ಈ ಹಿನ್ನೆಲೆಯಲ್ಲಿ ವರ್ಚ್ಯುಲ್ ಕ್ಯೂ ಮೂಲಕ ದಿನಕ್ಕೆ 80ಸಾವಿರ ಭಕ್ತರಿಗೆ ದರ್ಶನಾವಕಾಶ ನೀಡಲು ಸರಕಾರ/ ದ್ವೇವಸ್ವಂ ಮಂಡಳಿ ನಿರ್ಧರಿಸಿದೆ.
ಸರಕಾರದ ನಿರ್ಣಯ ಏಕಪಕ್ಷೀಯವಾಗಿದ್ದು, ದೇಶದ ವಿವಿಧ ಕಡೆಗಳಿಂದ ವ್ರತಪಾಲಿಸಿ ಬರುವ ಭಕ್ತರಿಗೆ ಸ್ಪಾಟ್ ಬುಕ್ಕಿಂಗ್ ಸೌಲಭ್ಯ ಕೂಡಾ ಏರ್ಪಡಿಸಬೇಕೆಂದು ವಿವಿಧ ರಾಜಕೀಯ ಸಂಘಟನೆಗಳು ಒತ್ತಾಯಿಸಿವೆ.
ಶಬರಿಮಲೆ ವರ್ಷವಿಡೀ ದರ್ಶನ ಪಡೆಯಬಹುದಾದ ದೇಗುಲವಲ್ಲ. ಇಲ್ಲಿ ವರ್ಷದ ನಿರ್ದಿಷ್ಟ ಸಮಯ ಮಾತ್ರ ದರ್ಶನಾಕಾಶ ಇರುವುದರಿಂದ ದಿನವೊಂದಕ್ಕೆ ಇಷ್ಟು ಮಂದಿ ಮಾತ್ರ ಬರಬಹುದೆಂದು ನಿಯಂತ್ರಿಸುವ ಅಧಿಕಾರ ಸರಕಾರಕ್ಕಿಲ್ಲ. ನಂಬಿ ಬರುವ ಭಕ್ತರಿಗೆಲ್ಲ ಅಯ್ಯನ ದರ್ಶನ ಭಾಗ್ಯ ಕರುಣಿಸದೇ, ನಿಯಂತ್ರಿಸುವ ಅಧಿಕಾರ ಸರಕಾರಕ್ಕಿಲ್ಲ. ಜನರಿಗೆ ಸೌಕರ್ಯ,ಸೌಲಭ್ಯ ಒದಗಿಸಬೇಕಾದುದು ಸರಕಾರದ ಹೊಣೆಯೆಂದು ವಿ.ಹಿಂ.ಪ ಅಭಿಪ್ರಾಯಪಟ್ಟಿದೆ ಮತ್ತು ಈ ಕುರಿತಾದ ಹೋರಾಟಕ್ಕೆ ಬೆಂಬಲ ಸೂಚಿಸಿದೆ.