ಮಂಗಳೂರು: ಕಣಿಪುರ ಸುದ್ದಿಜಾಲ( ಅ.7)
ಕುಳೂರು ಸೇತುವೆಗೆ ಕಾರು ಗುದ್ದಿಸಿ ಆತ್ಮಹತ್ಯೆಗೆ ಯತ್ನಿಸಿ ನಾಪತ್ತೆಯಾಗಿದ್ದ ಸಾಮಾಜಿಕ,ಧಾರ್ಮಿಕ ಮುಖಂಡ ಉದ್ಯಮಿ ಮಮ್ತಾಜ್ ಆಲಿ ಅವರ ಮೃತದೇಹ ಕುಳೂರು ಸೇತುವೆ ಅಡಿಯಿಂದ ಪತ್ತೆಯಾಗಿದೆ. ನಿನ್ನೆ ಮುಂಜಾವ ಅವರು ಕಾರನ್ನು ಸೇತುವೆಗೆ ಗುದ್ದಿಸಿ ಬಳಿಕ ನಾಪತ್ತೆಯಾಗಿದ್ದರು. ಪ್ರಕರಣ ಇದೀಗ ತಿರುವು ಪಡೆದಿದ್ದು ಇದರಲ್ಲಿ ಮಹಿಳೆಯ ಕೈವಾಡದ ಸುಳಿವು ಸಿಕ್ಕಿದೆ.
ಮಾಜಿ ಶಾಸಕ ಮೊಯಿದ್ದೀನ್ ಬಾವ ಅವರ ಸಹೋದರ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಆರು ಮಂದಿಯ ವಿರುದ್ಧ ಕಾವೂರು ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ನಾಪತ್ತೆಯಾದ ಮುಮ್ತಾಜ್ ಆಲಿ ಸಹೋದರ ಹೈದರ್ ದೂರು ಆಧರಿಸಿ ರೆಹಮತ್ ಎಂಬ ಮಹಿಳೆ ಸೇರಿದಂತೆ ಅಬ್ದುಲ್ ಸತ್ತಾರ್, ಶಾಫಿ, ಮುಸ್ತಫಾ, ಶೋಯೆಬ್ ಹಾಗೂ ಸಿರಾಜ್ ವಿರುದ್ದ ಎಫ್ಐಆರ್ ದಾಖಲಾಗಿದೆ.
ಸಹೋದರ ಮುಮ್ತಾಜ್ ಅಲಿ ಸಮಾಜದ ಗೌರವಾನ್ವಿತ ವ್ಯಕ್ತಿಯಾಗಿದ್ದು,ಅವರ ಗೌರವ ಹಾಳು ಮಾಡಲು ಮಹಿಳೆಯನ್ನು ಬಳಸಿಕೊಂಡು ಷಡ್ಯಂತ್ರ ರೂಪಿಸಿದ್ದಾರೆಂದು ದೂರಲಾಗಿದೆ. ಮುಮ್ತಾಜ್ ಆಲಿ ಅವರಿಗೆ ಅಕ್ರಮ ಸಂಬಂಧ ಇದೆಯೆಂದು ಹೆಸರಿಸಿ 2024ರ ಜುಲೈನಿಂದ ಈವರೆಗೆ 50 ಲಕ್ಷ ರೂ. ವಸೂಲಿ ಮಾಡಿದ್ದಾರೆ. 25 ಲಕ್ಷ ರೂ. ಹಣವನ್ನು ಮಹಿಳೆ ಚೆಕ್ ಮೂಲಕ ಪಡೆದಿದ್ದಾಳೆಂದು ಹೇಳಲಾಗಿದೆ.
ಸತ್ತಾರ್ ಎಂಬಾತ ಮುಮ್ತಾಜ್ ಅಲಿಯ ರಾಜಕೀಯ ವಿರೋಧಿಯಾಗಿದ್ದಾನೆ. ಅಕ್ರಮ ಸಂಬಂಧ ಇದೆ ಎಂದು ಇವರು ನಿರಂತರ ಬ್ಲ್ಯಾಕ್ ಮೇಲ್ ಮಾಡಿದ್ದರು. ಜೀವ ಬೆದರಿಕೆ ಜೊತೆಗೆ ಮುಮ್ತಾಜ್ ಆಲಿ ಕುಟುಂಬಕ್ಕೂ ಬೆದರಿಸಿದ್ದರು. ಹೀಗಾಗಿಯೇ ಸಹೋದರ ಮುಮ್ತಾಜ್ ಆಲಿ ಮೆಸೇಜ್ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮುಮ್ತಾಜ್ ಅಲಿ ಸಹೋದರ ಹೈದರ್ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ.
ಏನಿದು ಘಟನೆ?
ಮುಮ್ತಾಜ್ ಅಲಿ ಅವರು ಉದ್ಯಮಿಯಾಗಿದ್ದು, ಫಿಶ್ ಮಿಲ್, ಕಾಲೇಜು ಸೇರಿದಂತೆ ಹಲವು ಉದ್ಯಮಗಳನ್ನು ನಡೆಸುತ್ತಿದ್ದಾರೆ. ಮುಮ್ತಾಜ್ ಅಲಿ ಸಾಕಷ್ಟು ಸಂಘ ಸಂಸ್ಥೆಗಳಲ್ಲಿ, ಮಸೀದಿಯಲ್ಲಿ ಅಧ್ಯಕ್ಷ, ಪದಾಧಿಕಾರಿಯಾಗಿದ್ದು ಮುಸ್ಲಿಂ ಸಮುದಾಯದ ಪ್ರಮುಖ ನಾಯಕರಾಗಿದ್ದಾರೆ. ಸಮಾಜ ಸೇವೆಯ ಮೂಲಕ, ಮುಸ್ಲಿಂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದರು.
ಶನಿವಾರ ರಾತ್ರಿ ಮುಮ್ತಾಜ್ ಅಲಿ ಮನೆಯಲ್ಲಿ ಗಲಾಟೆಯಾಗಿದೆ. ರವಿವಾರ ನಸುಕಿನ ಜಾವ 3 ಗಂಟೆ ಸುಮಾರಿಗೆ ಯಾರಿಗೂ ತಿಳಿಯದಂತೆ ತನ್ನ ಬಿಎಂಡಬ್ಲ್ಯೂ ಕಾರನ್ನು ಚಲಾಯಿಸಿಕೊಂಡು ಪಣಂಬೂರು ಬಳಿ ಬಂದಿದ್ದಾರೆ. ಅಲ್ಲಿಂದ ವೇಗವಾಗಿ ಕೂಳೂರು ಹೈವೆಯಲ್ಲಿ ಬರುತ್ತಿದ್ದು ಖಾಸಗಿ ಬಸ್ಸೊಂದಕ್ಕೆ ಕಾರು ಡಿಕ್ಕಿ ಹೊಡೆದಿದೆ. ಬಳಿಕ ಯೂಟರ್ನ್ ತೆಗೆದುಕೊಂಡು ಬಂದು ಕೂಳೂರು ಸೇತುವೆಯ ಮಧ್ಯದಲ್ಲಿ ಕಾರನ್ನು ನಿಲ್ಲಿಸಿ ನಾಪತ್ತೆಯಾಗಿದ್ದರು.
ಮಹಿಳೆ ಕೈವಾಡ?
ಮುಮ್ತಾಜ್ ಅಲಿ ನಾಪತ್ತೆ ಹಿಂದೆ ಮಹಿಳೆಯ ಕೈವಾಡ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಸುರತ್ಕಲ್ ಕೃಷ್ಣಾಪುರ ನಿವಾಸಿ ಮಹಿಳೆ ಕಳೆದ ಒಂದು ವರ್ಷದಿಂದ ಮುಮ್ತಾಜ್ ಅಲಿ ಅವರಿಗೆ ಬ್ಲಾಕ್ ಮೇಲ್ ಮಾಡುತ್ತಿದ್ದಳಂತೆ. ಮುಮ್ತಾಜ್ ಅಲಿ ಅವರ ಖಾಸಗಿ ವಿಡಿಯೋ ಇಟ್ಟುಕೊಂಡು ಮದುವೆ ಆಗುವಂತೆ ಮಹಿಳೆ ಬ್ಲಾಕ್ ಮೇಲ್ ಮಾಡುತ್ತಿದ್ದಳಂತೆ.
ಈ ವಿಚಾರ ಮುಮ್ತಾಜ್ ಅಲಿ ಮನೆಯವರಿಗೆ ಗೊತ್ತಾಗಿ ನಿತ್ಯ ಕಿರಿಕಿರಿಯಾಗುತ್ತಿತ್ತು. ಇತ್ತೀಚಗೆ ಮಸೀದಿ ಕಮಿಟಿ ವಿಚಾರದಲ್ಲಿ ಕಾಟಿಪಳ್ಳದ ಮೂವರು ಯುವಕರು ಆ ಮಹಿಳೆಗೆ ಸಾಥ್ ನೀಡಿ ಹೆಸರು ಕೆಡಿಸಲು ತಯಾರಿ ನಡೆಸಿದ್ದರಂತೆ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತ ಹೇಳಲಾಗುತ್ತಿದೆ. ಪೊಲೀಸರು ಆ ಮಹಿಳೆ ಹಾಗೂ ಆ ಮೂವರ ಹಿಂದೆ ಬಿದ್ದಿದ್ದಾರೆ. ಆ ಮಹಿಳೆ ಕೇರಳಕ್ಕೆ ಹೋಗಿದ್ದು ಅಲ್ಲಿ ಫೋನ್ ಸ್ವಿಚ್ಡ್ ಆಫ್ ಆಗಿದೆ. ಈ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ದೊರೆತಿದೆ. ತನಿಖೆ ಮುಂದುವರೆದಿದೆ