ಕಣಿಪುರ ಸುದ್ದಿಜಾಲ (ಅ.5)
ಮಂಗಳೂರು: ಜನಪ್ರಿಯ ನಮ್ಮ ಕುಡ್ಲ ವಾಹಿನಿಯಲ್ಲಿ ಪ್ರಸಾರವಾಗುತ್ತಾ, ಅತ್ಯಧಿಕ ವೀಕ್ಷರನ್ನು ಹೊಂದಿ ಜನಪ್ರೀತಿ ಪಡೆದಿರುವ “ಯಕ್ಷತೆಲಿಕೆ” ಹಾಸ್ಯ ಸರಣಿಯಿಂದ ನೈಜ ಪೌರಾಣಿಕ ಯಕ್ಷಗಾನಕ್ಕೆ ಯಾವ ಲೋಪವೂ ಆಗಿಲ್ಲ. ಇಷ್ಟಕ್ಕೂ “ಯಕ್ಷತೆಲಿಕೆ” ಸಮಕಾಲೀನ ವಿಚಾರಗಳ ಅಣಕು ಹಾಸ್ಯದ ಸ್ಕಿಟ್ ಪ್ರದರ್ಶನವೇ ಹೊರತು ಅದೇ ಯಕ್ಷಗಾನವಲ್ಲ. ಅದು ಸಾಂಪ್ರದಾಯಿಕ ಯಕ್ಷಗಾನದ ಪ್ರಾತಿನಿಧಿಕ ಪ್ರದರ್ಶನವೂ ಅಲ್ಲ. ಹೀಗಿರುವಾಗ ನಾಲ್ವರು ಹಾಸ್ಯ ಕಲಾವಿದರಿಂದ ಆರಾಧನಾ ಕಲೆಗೆ ಲೋಪವಾಗಿದೆಯೆಂದು ಪ್ರಚಾರ ಹಬ್ಬಿಸಿ, ಕಲಾವಿದರ ವಿರುದ್ಧವಾಗಿ ಪೋಲೀಸ್ ಠಾಣೆಗೆ ದೂರು ನೀಡಿರುವುದು ಕಲಾ ಬೆಳವಣಿಗೆಗಳ ಅರಿವಿಲ್ಲದ ಮುಠ್ಠಾಳತನ ಎಂದು “ಯಕ್ಷತೆಲಿಕೆ” ಕಲಾವಿದ ಪ್ರಜ್ವಲ್ ಕುಮಾರ್ ಗುರುವಾಯನಕೆರೆ ಹೇಳಿದರು
‘ಕಣಿಪುರ ಡಿಜಿಟಲ್ ಮೀಡಿಯ’ ಜತೆ ವಿವಾದದ ಕುರಿತು ಮಾತಾಡಿದ ಅವರು “ಯಕ್ಷತೆಲಿಕೆ” ಕೇವಲ ಮನರಂಜನೀಯ ಹಾಸ್ಯ ಪ್ರದರ್ಶನ. ಅದರ ಸನ್ನಿವೇಶ ಸ್ಕ್ರಿಪ್ಟ್ ಅವಲಂಬಿಸಿದೆ. ಈ ಕುರಿತು ದೂರುಗಳಿದ್ದರೆ ಪ್ರೊಡ್ಯೂಸರ್ ಮತ್ತು ಪ್ರಸಾರ ಮಾಡಿದ ವಾಹಿನಿಯ ವಿರುದ್ಧ ದೂರಬೇಕಲ್ಲದೇ ನಟಿಸಿದ ಕಲಾವಿದರನ್ನು ಕೇಂದ್ರೀಕರಿಸಿ ಆರೋಪಿಸುವುದು ಸಮಂಜಸವಲ್ಲ. ಅಷ್ಟಕ್ಕೂ ಯಕ್ಷಗಾನದ ನೈತಿಕ ಶುದ್ಧೀಕರಣ, ಮೌಲ್ಯ ಸಂರಕ್ಷಣೆಗಳ ಮಾತಾಡುವುದೇ ಆದಲ್ಲಿ ಟೀಕಿಸುವವರಾಗಲೀ, ದೂರು ನೀಡಿದವರಾಗಲೀ ಆ ಅರ್ಹತೆಯನ್ನೇ ಹೊಂದಿಲ್ಲ ಎಂದು ಕಲಾವಿದ ಪ್ರಜ್ವಲ್ ಅಭಿಪ್ರಾಯಪಟ್ಟರು.
“ಯಕ್ಷತೆಲಿಕೆ” ಟಿ.ವಿ. ವಾಹಿನಿಯ ಸಮಕಾಲೀನ ಪರಿಕಲ್ಪನೆಯ ಕಾರ್ಯಕ್ರಮ. ಅದುವೇ ರಂಗಸ್ಥಳದ ಪೌರಾಣಿಕ ಬಯಲಾಟವಲ್ಲ. ಯಕ್ಷತೆಲಿಕೆಯಲ್ಲಿ ಮಾಡಿದಂತೆಲ್ಲ ನಾವು ಯಾರೂ ಕೂಡ ರಂಗಸ್ಥಳದಲ್ಲಿ ಮಾಡಿಲ್ಲ. ಆದರೆ ಪೌರಾಣಿಕ, ಸಾಮಾಜಿಕ ಪ್ರಸಂಗಗಳಲ್ಲಿ ನಾವು ಹುಟ್ಟುವ ಮೊದಲೇ ಇದಕ್ಕಿಂತ ವೈಪರೀತ್ಯದ ಆಭಾಸಗಳಾಗಿವೆ. ಆಗುತ್ತಲೂ ಇದೆ. ಅದನ್ನು ನೇರಾ, ನೇರ ಪ್ರಶ್ನಿಸದವರು “ಯಕ್ಷತೆಲಿಕೆ”ಯನ್ನಷ್ಟೇ ಗುರಿಯಾಗಿಡುವುದರಲ್ಲಿ ಸಂದೇಹಗಳಿವೆ ಎಂದು ಪ್ರಜ್ವಲ್ ನುಡಿದರು.
ಯಕ್ಷತೆಲಿಕೆಯಲ್ಲಿ ಯಕ್ಷಗಾನೀಯ ಹಿಮ್ಮೇಳದ ರಂಗಸಂಗೀತ ಬಳಸುತ್ತೇವೆಯೇ ಹೊರತು ಇದೇ ಯಕ್ಷಗಾನವೆಂದು ನಾವೆಲ್ಲೂ ಹೇಳಿಲ್ಲ. ನಾವೆಲ್ಲರೂ ಯಕ್ಷಗಾನವನ್ನು ಅವಲಂಬಿಸಿದ ಕಲಾವಿದರು. ಕಲೆಗೆ ಲೋಪವನ್ನೋ, ಚ್ಯುತಿಯನ್ನೋ ಮಾಡಬಯಸುವವರಲ್ಲ. ಜನರು ಆರಾಧನಾ ಕಲೆಯೆಂದು ಗೌರವಿಸುವ ಕಲೆಯ ಪೌರಾಣಿಕ ವೇಷಭೂಷಣ ತೊಟ್ಟು ನಾವು ಕಲಾ ಪರಂಪರೆಗೆ ಅನ್ಯಾಯ ಮಾಡಿಲ್ಲ. ಹಾಗೆ ಹೇಳುವುದಾದರೆ ಮಹಾನ್ ಕಲಾವಿದರೇ ಮಾಡಿದ ರಂಗವಿಕೃತಿ ಸಹಿತ ಕಲೆಯ ಕೊಲೆಗಳ ಸಾಕ್ಷ್ಯಗಳು ನನ್ನಲ್ಲೂ ಇದೆ ಎಂದು ಪ್ರಜ್ವಲ್ ಕುಮಾರ್ ನುಡಿದರು.
ವಿವಾದಗಳ ಹಿನ್ನೆಲೆಯಲ್ಲಿ ಯಕ್ಷತೆಲಿಕೆ ಇನ್ನಷ್ಟು ಕಾಳಜಿಯ ಕಥಾವಸ್ತುಗಳೊಂದಿಗೆ ನಿರ್ಭೀತಿಯಿಂದ ಮುಂದುವರಿಯಲಿದೆ. ಇದು ಸಾಮಾಜಿಕ ಕಾಳಜಿಯ ಮನಸಿಗೆ ಮುದನೀಡುವ, ಸದುದ್ದೇಶದ ಸಂದೇಶಭರಿತ ಕಾರ್ಯಕ್ರಮ ಎಂದು ಪ್ರಜ್ವಲ್ ಹೇಳಿದರು.