ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಮೈಸೂರೇ ಸಂಭ್ರಮಾಚರಣೆಯಲ್ಲಿದ್ದು, ದಶದಿನಗಳ ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಚಾಮುಂಡಿಬೆಟ್ಟದಲ್ಲಿಂದು ಚಾಲನೆಯಾಯಿತು.
ಇತ್ತೀಚಿನ ಕೋರೋನ ಮತ್ತು ಕಳೆದ ವರ್ಷದ ಬರಗಾಲದಿಂದ ಸರಳ ಉತ್ಸವ ನಡೆಸಿದ್ದ ಸರಕಾರ ಈ ವರ್ಷ ಮಳೆ,ಬೆಳೆ ಚೆನ್ನಾಗಿ, ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಅದ್ದೂರಿಯಾಗಿ ಉತ್ಸವ ಘೋಷಿಸಿದೆ.
ಇಂದು ಬೆಳಿಗ್ಗೆ 9.15ರಿಂದ 9.40ರ ವೃಶ್ಚಿಕ ಲಗ್ನದಲ್ಲಿ ಹಿರಿಯ ಸಾಹಿತಿ ಹಂಪಾ ನಾಗರಾಜಯ್ಯ ಅವರು ನಾಡದೇವಿ ಭುವನೇಶ್ವರಿ ಗೆ ಪುಷ್ಪಾರ್ಚನೆ ಮೂಲಕ ದಸರಾ ಸಂಭ್ರಮ ಉದ್ಘಾಟಿಸಿದರು.
ಬಳಿಕ ಚಾಮುಂಡಿಬೆಟ್ಟದಲ್ಲಿ ದೇವಿ ದರ್ಶನ ಪಡೆದು ವೇದಿಕೆ ಕಾರ್ಯಕ್ರಮಗಳನ್ನೂ ಉದ್ಘಾಟಿಸಿದರು.
ಇವರ ಜತೆಯಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿಶಕುಮಾರ್, ಸಚಿವ ಮಹದೇವಪ್ಪ ಸಹಿತ ಗಣ್ಯರು ಉಪಸ್ಥಿತರಿದ್ದರು.
ಚಾಮುಂಡಿಬೆಟ್ಟದಲ್ಲಿ ನಾಡದೇವತೆಗೆ ಪುಷ್ಪಾರ್ಚನೆಗೈದು ವೇದಿಕೆ ಸಮಾರಂಭ ಉದ್ಘಾಟಿಸಿ ಮುಖ್ಯಮಂತ್ರಿಗಳ ಸಮ್ಮುಖದಲ್ಲೇ ಮಾತಾಡಿದ ಅವರು “ಚುನಾಯಿತ ಸರಕಾರವನ್ನು ಉರುಳಿಸುವ ಕೆಲಸ ಪ್ರತಿಪಕ್ಷ ಮಾಡಬಾರದು. ಸೋತ ಪಕ್ಷಕ್ಕೆ ಅಧಿಕಾರಕ್ಕೇರಬೇಕಾದರೆ ಮತ್ತೆ ಚುನಾವಣೆಯಲ್ಲಿ ಗೆಲುವು ಪಡೆಯಬೇಕು ಎಂದು ವರ್ತಮಾನ ರಾಜಕೀಯವನ್ನುದ್ದೇಶಿಸಿ ಹೇಳಿದರು.
ದಸರಾ ಎಂದರೆ ಸರ್ವ ಜನಾಂಗದ ನಾಡಹಬ್ಬ. ಇದಕ್ಕೆ ಮತಧರ್ಮಗಳ ತಾರತಮ್ಯ ಇಲ್ಲ. ಆಸ್ತಿಕತೆ, ನಾಸ್ತಿಕತೆ ಎಂಬುದಿಲ್ಲಿ ಅಪ್ರಸ್ತುತ. ದಸರಾ ಅರಮನೆಯ ಹಬ್ಬವಲ್ಲ. ಇದು ಜನರೇ ಆಚರಿಸುವ ಸರಕಾರವೇ ನಡೆಸುವ ಜನತಾಹಬ್ಬ ಎಂದವರು ಈ ಸಂದರ್ಭ ನುಡಿದರು.
ಮೈಸೂರು ಎಂದರೆ ದಸರಾ ಎಂದೇ ಪ್ರಸಿದ್ದಿ. ಈ ಖ್ಯಾತಿ ಕರ್ನಾಟಕದ ಗರಿಮೆಯಾಗಿದೆ. ಇದನ್ನು ಕಾಪಾಡಬೇಕೆಂದವರು ಆಗ್ರಹಿಸಿದರು.