ಅ.6ರಂದು ಕಾಶಿಪಟ್ಣದಲ್ಲಿ ಹಿರಿಯ ಕಲಾವಿದ ಕುಂಬ್ಳೆ, ಗಂಗಾಧರರಿಗೆ ನಿಡ್ಳೆ ಮಂಡಳಿಯ ಸಂಸ್ಮರಣೆ- ಸಾಧಕ ಕಲಾವಿದರಿಗೆ ಸನ್ಮಾನ

by Narayan Chambaltimar

🟤 *ಕಣಿಪುರ ಸುದ್ದಿಜಾಲ(ಸೆ.29)

ಮಳೆಗಾಲದಲ್ಲಿ ಯಕ್ಷಗಾನ ವಿಸ್ತರಣೆಯೊಂದಿಗೆ ದಕ್ಷಿಣ ಭಾರತದಾದ್ಯಂತ ತೆಂಕುತಿಟ್ಟು ಯಕ್ಷಗಾನ ವಿಸ್ತರಿಸಿದ ನಿಡ್ಳೆ ಶ್ರೀ ಮಹಾಗಣಪತಿ ಯಕ್ಷಗಾನ ಮಂಡಳಿಯಲ್ಲಿ ಸುದೀರ್ಘ ತಿರುಗಾಟ ನಡೆಸಿ, ಕೀರ್ತಿಶೇಷರಾದ ಹಿರಿಯ ಕಲಾವಿದ ದಿ. ಕುಂಬ್ಳೆ ಶ್ರೀಧರರಾವ್ ಹಾಗೂ ದಿ. ಪುತ್ತೂರು ಗಂಗಾಧರ ಜೋಗಿ ಅವರನ್ನು ಮಂಡಳಿ ವತಿಯಿಂದ ಸಂಸ್ಮರಿಸುವ ಸಮಾರಂಭ ಏರ್ಪಡಿಸಲಾಗಿದೆ. ಅಕ್ಟೋಬರ್ 6ರಂದು ಭಾನುವಾರ ಕೆಳ ಕಾಶಿಪಟ್ಣ ಶ್ರೀ ಪಂಚಲಿಂಗೇಶ್ವರ ದೇವಾಲಯದಲ್ಲಿ ಮಧ್ಯಾಹ್ನ 2ರಿಂದ ಸಂಸ್ಮರಣೆ ಮತ್ತು ಸನ್ಮಾನ ಸಮಾರಂಭ ನಡೆಯಲಿದೆ.

ಅಗಲಿದ ಇಬ್ಬರೂ ಕಲಾವಿದರು ನಿಡ್ಲೆ ತಂಡದ ಪಾಲಿಗೆ ಆಶ್ರಯದಾತರಂತೆ ಸುದೀರ್ಘ ದುಡಿದವರು. ಮಂಡಳಿಯ ಯಜಮಾನ ನಿಡ್ಳೆ ಗೋವಿಂದ ಭಟ್ಟರ ಜತೆಗೆ ಅನ್ಯೋನ್ಯ ಸೋದರರಂತೆ ಹೆಗಲೆಣೆಯಾಗಿದ್ದವರು. ಈ ಹಿನ್ನೆಲೆಯಲ್ಲಿ ಮಂಡಳಿಯ ಮಳೆಗಾಲದ ತಿರುಗಾಟದ ನಡುವೆ ಸಂಸ್ಮರಿಸುವ ಸಮಾರಂಭ ನಡೆಯುತ್ತಿದೆ. ಇದೇ ಕಾರ್ಯಕ್ರಮದಲ್ಲಿ ತೆಂಕುತಿಟ್ಟಿನ ಹಿರಿಯ ವೇಷಧಾರಿ ವೇಣೂರು ಸದಾಶಿವ ಕುಲಾಲ್ ಮತ್ತು ನಿಡ್ಳೆ ನಾರಾಯಣ ಭಟ್ಟರಿಗೆ ಸನ್ಮಾನ ಜರಗಲಿದೆ.
ವೇಣೂರು ಸದಾಶಿವ ಕುಲಾಲರು ಹಿಂದೆ ನಿಡ್ಳೆ ತಂಡದಲ್ಲಿ ಮಳೆಗಾಲದ ತಿರುಗಾಟ ನಡೆಸಿದ್ದರು. ನಾರಾಯಣ ಭಟ್ಟರು ದಿ. ಪುತ್ತೂರು ಗಂಗಾಧರರ ಒಡನಾಡಿ ಗೆಳೆಯನಾಗಿದ್ದು, ನಿಡ್ಳೆ ಮಂಡಳಿಯ ಉತ್ಕರ್ಷಕ್ಕೆ ನೇಪಥ್ಯದ ಕೊಡುಗೆ ಸಲ್ಲಿಸಿದ ಕಲಾವಿದರು

ಸಮಾರಂಭದಂದು ಮಂಡಳಿಯ ಕಲಾವಿದರಿಂದ ಮತ್ತು ಅತಿಥಿ ಕಲಾವಿದರಿಂದ ದಮಯಂತಿ ಪುನರ್ ಸ್ವಯಂವರ ಮತ್ತು ರುಕ್ಮಿಣೀ ಕಲ್ಯಾಣ ಎಂಬ ಆಖ್ಯಾನದ ಯಕ್ಷಗಾನ ಬಯಲಾಟ ಜರಗಲಿದೆಯೆಂದು ಮಂಡಳಿಯ ಪ್ರಕಟಣೆ ತಿಳಿಸಿದೆ.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00