ನಾನು ಕಂಡ ಕೋಮು ದಳ್ಳುರಿಯ ಕಾಸರಗೋಡು ಬದಲಾಗಿದೆ..! ಈಗ ಜನತೆ ಪ್ರೀತಿ,ಪ್ರೇಮದ ಸಾಮರಸ್ಯದ ಹಳಿಗೆ ಬಂದಿದ್ದಾರೆ..

ಜಿಲ್ಲಾ ಪೋಲೀಸ್ ವರಿಷ್ಠೆ ಡಿ.ಶಿಲ್ಪ ಮನದ ಮಾತು..

by Narayan Chambaltimar

ಕಣಿಪುರ ಸುದ್ದಿಜಾಲ (ಸೆ.28

ನೀರ್ಚಾಲು: ಕಾಸರಗೋಡಿನ ನೂತನ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಕನ್ನಡತಿ ಡಿ. ಶಿಲ್ಪ ಅವರಿಂದು ಇದೇ ಮೊದಲ ಬಾರಿ ನೀರ್ಚಾಲಿನಲ್ಲಿ ವಿಕಾಸ ಟ್ರಸ್ಟ್(ರಿ)ನ ಕನ್ನಡ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಸಂದರ್ಭ ಅವರಾಡಿದ ಮಾತುಗಳನ್ನು ಆಲಿಸಬೇಕಿತ್ತು. ಅದರ ಮೊದಲ ಭಾಗದ ಸಂಕ್ಷಿಪ್ತ ವರದಿ ಇಲ್ಲಿದೆ..

ಕಾಸರಗೋಡು ಜಿಲ್ಲೆ ಎಂದರೆ ನಾನು ಕೇರಳಾ ಪೋಲೀಸ್ ಕೇಡರಿನಲ್ಲಿ ಉದ್ಯೋಗ ಹೊಂದಿ ಮೊದಲ ಬಾರಿಗೆ ಇಲ್ಲಿಗೆ ಬರುವಾಗ ಇದು ಕೋಮು ದಳ್ಳುರಿಯ, ಮತೀಯ ಧ್ವೇಷಗಳ ನಾಡೆಂದೇ ಪ್ರಚಾರ, ಖ್ಯಾತಿ ಪಡೆದಿತ್ತು. ಅದಕ್ಕೆ ಪೂರಕವಾದ ಸಾಮಾಜಿಕ ಮನಸ್ಥಿತಿಯ ವಾತಾವರಣವೂ ಇಲ್ಲಿತ್ತು.
ಆದರೆ 2019ರ ತನಕ ಇದ್ದ ಮೊದಲಿನ ಕಾಸರಗೋಡಿಗೂ
ಈಗ ನಾನು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಯಾಗಿ ಕಾಣುವ 2024ರ ಈಗಿನ ಕಾಸರಗೋಡಿಗೂ ಸಮಗ್ರ ಬದಲಾವಣೆಯಾಗಿದೆ. ಹಿಂದಿನ ಕಾಸರಗೋಡೇ ಬೇರೆ, ಇಂದಿನ ಕಾಸರಗೋಡೇ ಬೇರೆ..!
ಹೀಗೆಂದವರು ಸ್ವತಃ ಜಿಲ್ಲಾ ಪೋಲೀಸ್ ವರಿಷ್ಠೆ ಡಿ.ಶಿಲ್ಪಾಅವರು.

ಇಂದೀಗ ಕಾಸರಗೋಡಲ್ಲಿ ಸಾಮಾಜಿಕರ ನಡುವೆ ಈ ಮೊದಲಿನ ಮತೀಯ ಧ್ವೇಷ ಕಡಿಮೆಯಾಗಿದೆ. ಜಾತಿ,ಮತ ಕಲಹದ ಉತ್ಸಾಹ ಕುಗ್ಗಿದೆ. ಮನುಷ್ಯರು ಭೇಧ,ಭಾವ ರಹಿತ ಸಾಮರಸ್ಯದ, ಪ್ರೀತಿ-ಮಮತೆಯ ಒಲುಮೆಯ ಬದುಕಿಗೆ ಮರಳುತ್ತಿದ್ದಾರೆ. ಹಿಂದಿನ ಮತೀಯ ಧ್ವೇಷದ ಕ್ರೌರ್ಯದ ಮನಸ್ಸುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಒಂದೂರು ಸದಾ ನೆಮ್ಮದಿಯ ಸ್ನೇಹ, ಸಹಬಾಳ್ವೆಯಿಂದ ಬದುಕಬೇಕು ಎಂದಾದರೆ ಜನರಿಗೆ ಅರಿವು ಬಂದಿದೆ ಎಂದೇ ಅರ್ಥ. ಇದೊಂದು ಉತ್ತಮ ಸಂದೇಶದ ಅದ್ಭುತ ಬದಲಾವಣೆ. ಈ ವಾತಾವರಣ ಕಾಪಾಡಿ, ನಾಡನ್ನೂ,ಜನರನ್ನೂ ಬೆಳೆಯುವುದು ಹೇಗೆಂದು ಗಮನಿಸಿ ಎಂದರು ಕನ್ನಡತಿಯಾದ ಕಾಸರಗೋಡು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಶಿಲ್ಪಾ ದ್ಯಾವಯ್ಯ.

ಕಾಸರಗೋಡು ಎಂದರೆ ಕೇರಳದಲ್ಲಷ್ಟೇ ಅಲ್ಲ ಎಲ್ಲೆಡೆ ಹಿಂದೆ ಕಳಂಕಿತ ಹೆಸರಿತ್ತು. ಮತೀಯ ಗಲಭೆ, ಕೊಲೆ, ಕೋಮುಗಲಭೆ, ಕಳ್ಳಸಾಗಾಟ ಇನ್ನಿತ್ಯಾದಿಗಳಿಂದ ನಾಡಿನ ಹೆಸರೇ ಕೆಟ್ಟಿತ್ತು. ಆದರೆ ಈಗ ಈ ನೆಲದಲ್ಲಿ ಪರಿವರ್ತನೆಯ ಭರವಸೆ ಕಾಣುತ್ತಿದ್ದೇನೆ. ಚಿಂತನೆಗಳು ಬದಲಾಗದಿದ್ದರೆ ಮನುಷ್ಯನಾಗಲೀ,ಮತವಾಗಲಿ ಯಾರೂ ಅಭ್ಯುದಯ ಕಾಣಲಸಾಧ್ಯ. ಆದ್ದರಿಂದ ಈಗಿನ ಪರಿವರ್ತನೆಗೆ ಈ ನಾಡ ಜನರೇ ಕಾರಣ. ಇದನ್ನು ಕಾಪಾಡುವುದೇ ಶಾಶ್ವತ ಅಗತ್ಯ ಎಂದು ಪೋಲೀಸ್ ವರಿಷ್ಠಾಧಿಕಾರಿ ಶಿಲ್ಪಾ ಹೇಳಿದರು.
ಹಿಂದೆ ನಾನು ಕೇಳಿ ತಿಳಿದ ಕಾಸರಗೋಡಿಗೂ, ನಾನು ಮೊದಲ ಬಾರಿಗೆ ಕಂಡ ಕಾಸರಗೋಡಿಗೂ, ಈಗ ಕಾಣುವ ಕಾಸರಗೋಡಿಗೂ ಪರಿವರ್ತನೆಯಾಗಿದೆ ಸಹಜ. ಆದರೆ ಅದು ಸುದೀರ್ಘ ಕಾಲದ ಬೆಳವಣಿಗೆಯಲ್ಲ. ಈ ಪರಿವರ್ತನೆಯ ಶಾಂತಿ,ಸಾಮರಸ್ಯದ ಬದುಕು ಈ ನಾಡಿನ ಎಲ್ಲರ ಕೊಡುಗೆ. ಇದನ್ನು ಕಾಪಾಡುವುದು, ಕೈದಾಟಿಸುವುದೇ ಏಳಿಗೆ ಎಂದರು ಪೋಲೀಸ್ ವರಿಷ್ಠರು.

ಕೋಮುಗಲಭೆ,ಕೋಮುಧ್ವೇಷ,ಕಲಹಗಳೆಲ್ಲ ಮುಗಿದ ಕತೆ. ಆದರೀಗ ನಾಡನ್ನು ಕೆಡಿಸಲು ತಲೆ ಎತ್ತಿದೆ ಎಂಡಿಎಂಎ ಸಹಿತ ಮಾದಕ ಡ್ರಗ್ಸ್ ಜಾಲ. ಈ ಕುರಿತು ಪೋಲೀಸ್ ವರಿಷ್ಠರ ಮಾತು ಮುಂದಿನ ಪೋಸ್ಟ್ ನಲ್ಲಿ ನಿರೀಕ್ಷಿಸಿ..
ಸುದ್ದಿಕತೆ ಮುಂದುವರಿಯಲಿದೆ..

ಚಿತ್ರ: ಹರೀಶ್ ಹಳೆಮನೆ

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00