ಗುರು ಮಾಂಬಾಡಿಗೆ “ಶ್ರೀ ಹರಿಲೀಲಾ ಯಕ್ಷನಾದ ಪ್ರಶಸ್ತಿ: ಅ.13ರಂದು ಪೊಳಲಿಯಲ್ಲಿ ಸಮಾರಂಭ

by Narayan Chambaltimar

ಯಕ್ಷಗಾನದ ಗುರುದಂಪತಿ ಹರಿನಾರಾಯಣ ಬೈಪಡಿತ್ತಾಯ, ಲೀಲಾವತಿ ಬೈಪಡಿತ್ತಾಯರ ಹೆಸರಲ್ಲಿ ಶಿಷ್ಯ ಬಳಗ ನೀಡುವ “ಶ್ರೀ ಹರಿಲೀಲಾ ಯಕ್ಷನಾದ” ಪ್ರಶಸ್ತಿಯನ್ನು ಯಕ್ಷಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ನೀಡಲು ನಿರ್ಧರಿಸಲಾಗಿದೆ. ಪ್ರಶಸ್ತಿಯು 10,078ರೂ ನಗದು , ಬಿನ್ನವತ್ತಳೆ, ಸ್ಮರಣಿಕೆ ಒಳಗೊಂಡಿದೆ. ಬೈಪಡಿತ್ತಾಯರ ಶಿಷ್ಯ ಬಳಗ ಮತ್ತು ಡಿಜೆ ಯಕ್ಷ ಫೌಂಡೇಷನ್ ಸಹಯೋಗದಲ್ಲಿ ಅಕ್ಟೋಬರ್ 13ರಂದು ಪೊಳಲಿ ರಾಜರಾಜೇಶ್ವರಿ ಕ್ಷೇತ್ರ ವಠಾರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರಗಲಿದೆ.

ಯಕ್ಷಗಾನ ಹಿಮ್ಮೇಳ ಗುರುಗಳಿಬ್ಬರ ಹೆಸರಲ್ಲಿ ನೀಡಲಾಗುವ ಈ ಪ್ರಶಸ್ತಿಯು ಮತ್ತೋರ್ವ ಹಿಮ್ಮೇಳ ಗುರುವಿಗೆ ಸಲ್ಲುವ ವೈಶಿಷ್ಟ್ಯ ಇದರದ್ದಾಗಿದೆ. ಬೈಪಡಿತ್ತಾಯ ದಂಪತಿ ಮತ್ತು ಮಾಂಬಾಡಿ ಶಿಷ್ಯ ಬಳಗದಿಂದ ತೆಂಕುತಿಟ್ಟು ಸಮೃದ್ಧವಾಗಿದ್ದು ಉಭಯ ಗುರುಗಳ ಶಿಷ್ಯರ ಸಮ್ಮಿಲನವಾಗಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಕಳೆ ಏರಲಿದೆ.

ಮಧ್ಯಾಹ್ನ 2ರಿಂದ ಆರಂಭಗೊಳ್ಳುವ ಕಾರ್ಯಕ್ರಮದಲ್ಲಿ ಮೊದಲಿಗೆ ಶಿಷ್ಯ ಬಳಗದ ಯಕ್ಷ ಗಾನ,ನಾದ ವೈಖರಿ ನಡೆಯಲಿದೆ. ಶಿಷ್ಯರಾದ ಕರುಣಾಕರ ಶೆಟ್ಟಿಗಾರ್ ಕಾಶಿಪಟ್ಣ, ಶ್ರೀನಿವಾಸ ಬಳ್ಳಮಂಜ, ಗಿರೀಶ್ ರೈ ಕಕ್ಕೆಪದವು, ಅಡೂರು ಜಯರಾಮ, ಶಾಲಿನಿ ಹೆಬ್ಬಾರ್, ದಿವ್ಯಶ್ರೀ ಪುತ್ತಿಗೆ ಮೊದಲಾದವರಿಂದ ಯಕ್ಷಗಾನದ ಹಾಡುಗಳು ಪ್ರಸ್ತುತಿಯಾಗಲಿದೆ. ಹಿಮ್ಮೇಳದಲ್ಲಿ ಅಡೂರು ಲಕ್ಷ್ಮೀನಾರಾಯಣ, ಶಂಕರ ಭಟ್ ಕಲ್ಮಡ್ಕ, ಸೋಮಶೇಖರ ಕಾಶಿಪಟ್ಣ, ಗಣೇಶ್ ಭಟ್ ಬೆಳ್ಳಾರೆ, ಗುರುಪ್ರಸಾದ್ ಬೊಳಿಂಜಡ್ಕ, ವಿಕಾಸ ರಾವ್, ಆನಂದ ಗುಡಿಗಾರ್, ಕೊಂಕಣಾಜೆ ಚಂದ್ರಶೇಖರ ಭಟ್, ಅಡೂರು ಹರೀಶರಾವ್, ಅವಿನಾಶ್ ಬೈಪಡಿತ್ತಾಯ, ಸಮರ್ಥ ಉಡುಪ ಭಾಗವಹಿಸುವರು.

ಬಳಿಕ ಹರಿನಾರಾಯಣ ಬೈಪಡಿತ್ತಾಯರ ಪರಿಕಲ್ಪನೆಯಲ್ಲಿ ಶಿಷ್ಯ ವಿದ್ಯಾರ್ಥಿಗಳಿಂದ 15ಚೆಂಡೆಗಳ ಸಾಮೂಹಿಕ ನುಡಿತದ ಅಬ್ಬರ ತಾಳ ಪ್ರಸ್ತುತಿಯಾಗಲಿದೆ.
ಸಂಜೆ ಡಾ.ಎಂ. ಪ್ರಭಾಕರ ಜೋಷಿ ಅಧ್ಯಕ್ಷತೆಯಲ್ಲಿ ನಡೆಯುವ ಸಭಾ ಕಲಾಪದಲ್ಲಿ ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ. ನಿಡುವಜೆ ಪುರುಷೋತ್ತಮ ಭಟ್ ಅಭಿನಂಧನಾ ಭಾಷಣ ಮಾಡುವರು.

You may also like

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00